ಮಕರ ಸಂಕ್ರಾಂತಿ ಸಂಭ್ರಮಕ್ಕೆ ಬೆಲೆ ಏರಿಕೆಯ ಬರೆ

| Published : Jan 15 2024, 01:46 AM IST / Updated: Jan 15 2024, 04:20 PM IST

ಸಾರಾಂಶ

ಈ ಬಾರಿ ರಾಜ್ಯಾದ್ಯಂತ ತೀವ್ರ ಬರಗಾಲ ಹಿನ್ನೆಲೆ ಮಳೆಯಿಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರೀಕ್ಷೆಯಷ್ಟು ಅವರೇಕಾಯಿ, ಕಡಲೇಕಾಯಿ, ಗೆಣಸು ಬೆಳೆ ಬಂದಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಬೆಳೆದಿರುವ ಅವರೇಕಾಯಿ, ಕಡಲೇಕಾಯಿ, ಗೆಣಸು ಗಳಿಗೆ ಭಾರಿ ಬೇಡಿಕೆ ಬಂದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಂಕ್ರಾಂತಿ ಹಬ್ಬಕ್ಕೆ ಮುನ್ನಾ ದಿನವಾದ ಭಾನುವಾರ ಚಿಕ್ಕಬಳ್ಳಾಪುರ ನಗರದಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. 

ಸಂಕ್ರಾಂತಿ ಎಂದರೆ ರೈತರಿಗೆ ಸುಗ್ಗಿಯ ಹಬ್ಬ. ವರ್ಷವಿಡೀ ಕಷ್ಟಪಟ್ಟು ದುಡಿಯುವ ರೈತರು ಸಂಕ್ರಾಂತಿ ಬಂದರೆ ಸಾಕು ಬೆಳೆದ ಬೆಳೆ, ಜಾನುವಾರು, ಕುಟುಂಬ, ಬಂಧು-ಬಳಗದ ಜೊತೆ ಸುಗ್ಗಿಯನ್ನು ಹುಗ್ಗಿಯನ್ನಾಗಿ ಸಂಭ್ರಮಿಸುವ ಕಾಲವಿತ್ತು. ಆದರೆ ಈ ವರ್ಷ ತೀವ್ರ ಬರಗಾಲ ಹಿನ್ನಲೆ ಸಂಕ್ರಾಂತಿ ಮಾಯವಾಗಿದೆ.

ಅವರೆ, ಗೆಣಸು, ಕಬ್ಬು ಬೆಲೆ ಹೆಚ್ಚಳ: ಮತ್ತೊಂದೆಡೆ ಅವರೇಕಾಯಿ, ಕಡಲೇಕಾಯಿ, ಗೆಣಸು ದುಬಾರಿಯಾಗಿದೆ. 

ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು ಇಲ್ಲದೇ ಸಂಕ್ರಾಂತಿ ಊಹಿಸಿಕೊಳ್ಳುವುದು ಕಷ್ಟ. 

ಸಂಕ್ರಾಂತಿಯ ಸುಗ್ಗಿಗೆ ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು ಬೇಕೇಬೇಕು. ಅವರೇಕಾಯಿ, ಕಡಲೇಕಾಯಿ, ಗೆಣಸನ್ನು ಬೇಯಿಸಿ, ಅದರ ಜೊತೆ ಎಳ್ಳು-ಬೆಲ್ಲ ಸೇರಿಸಿ ಪರಸ್ಪರ ಹಂಚಿ ಶುಭಾಶಯ ಕೋರುವುದು ವಾಡಿಕೆ.

ಆದರೆ ಈ ಬಾರಿ ರಾಜ್ಯಾದ್ಯಂತ ತೀವ್ರ ಬರಗಾಲ ಹಿನ್ನೆಲೆ ಮಳೆಯಿಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರೀಕ್ಷೆಯಷ್ಟು ಅವರೇಕಾಯಿ, ಕಡಲೇಕಾಯಿ, ಗೆಣಸು ಬೆಳೆ ಬಂದಿಲ್ಲ.

ಅಲ್ಲಿಷ್ಟು ಇಲ್ಲಿಷ್ಟು ಬೆಳೆದಿರುವ ಅವರೇಕಾಯಿ, ಕಡಲೇಕಾಯಿ, ಗೆಣಸು ಗಳಿಗೆ ಭಾರಿ ಬೇಡಿಕೆ ಬಂದಿದೆ. 

ಇದರಿಂದ ಅವರೇಕಾಯಿಗೆ 80 ರುಪಾಯಿ, ಕೆಜಿ ಕಡಲೇಕಾಯಿಗೆ 100 ರಿಂದ 120 ರೂಪಾಯಿ, ಕೆಜಿ ಗೆಣಸು 40 ರಿಂದ 60 ರೂಪಾಯಿ, ಕಬ್ಬು ಒಂದು ಜಲ್ಲೆಗೆ 50 ರಿಂದ70ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ರಾಸುಗಳಿಗೆ ಕಿಚ್ಚು ಹಾಯುವ ಸಂಪ್ರದಾಯ.

ಮುಖ್ಯವಾಗಿ ಹಳ್ಳಿಗಳಲ್ಲಿ ರೈತನ ಕೃಷಿ ಸಂಗಾತಿ ರಾಸುಗಳನ್ನು ಸ್ವಚ್ಛಗೊಳಿಸಿ ಕೊಂಬಿಗೆ ಬಣ್ಣ ಹಚ್ಚುವುದು, ಕಿಚ್ಚು ಹಾಯಿಸುವ ದೃಶ್ಯ ಮಾಮೂಲಿ. 

ಅದೇ ರೀತಿ ಪಟ್ಟಣ ಪ್ರದೇಶದಲ್ಲಿ ಬಣ್ಣದ ರಂಗೋಲಿ ಬಿಟ್ಟು, ಎಳ್ಳುಬೆಲ್ಲ ಹಂಚಿಕೆ ಮಾಡುವ ಸಡಗರಕ್ಕೆ ಶನಿವಾರದಿಂದಲೇ ಸಂಕ್ರಾಂತಿಯ ಆಚರಣೆಗೆ ಭರದ ಸಿದ್ಧತೆ ನಡೆದಿತ್ತು. 

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದ ಬಜಾರ್ ರಸ್ತೆ (ಸರ್ ಎಂ ವಿಶ್ವೇಶ್ವರಯ್ಯ ರಸ್ತೆ) ಭುವನೇಶ್ವರಿ ವೃತ್ತ, ಸೀತಾ ಲಕ್ಷ್ಮಿ ಸರ್ಕಲ್ (ಮಾರ್ಕೆಟ್ ವೃತ್ತ) ಎಂಜಿ ರಸ್ತೆಯ ಖಾಸಗಿ ಬಸ್ ನಿಲ್ದಾಣ ಇತ್ಯಾದಿ ಕಡೆಗಳಲ್ಲಿ ಹಬ್ಬಕ್ಕೆ ಬೇಕಾದ ಪದಾರ್ಥಗಳು ಬಂದಿದ್ದರೂ ಸಹಾ ಬೆಲೆ ದುಬಾರಿ ಎಂದು ಖರೀದಿಗೆ ಜನ ಅಷ್ಟಾಗಿ ಬಂದಿರಲಿಲ್ಲ.

ಜಿಲ್ಲೆಯಾದ್ಯೆತ ಅತ್ಯಂತ ಸಡಗರ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುವುದು ಉಂಟು. ಬಯಲು ಸೀಮೆ ಪ್ರದೇಶವಾದ ಈ ಭಾಗದಲ್ಲಿ ಮಕರ, ಸಂಕ್ರಾಂತಿಯ ಆಚರಣೆಗೆ ಜೋರು ಸಿದ್ಧತೆಗಳು ನಡೆದಿದ್ದವು. 

ಈ ಹಿಂದಿನಂತೆ ಜಿಲ್ಲೆಯ ವಿವಿಧ ಭಾಗಗಳು ಸೇರಿದಂತೆ ನೆರೆ ಆಂಧ್ರದ ಹಿಂದೂಪುರ ಅನಂತಪುರ,ಗೋರಂಟ್ಲ ,ಕದಿರಿ,ಕಡೆಗಳಿಂದಲೂ ಸರಕು ಮಾರುಕಟ್ಟೆ ಗೆ ಬಂದಿದೆ.

ಮಾರುಕಟ್ಟೆಯಲ್ಲಿ ವ್ಯಾಪಾರ ಡಲ್‌ ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಮಾರುಕಟ್ಟೆ, ಗಂಗಮ್ಮನ ಗುಡಿ ರಸ್ತೆಯ ಹೆಂಗಳೆಯರ ಅಲಂಕಾರಿಕ ವಸ್ತುಗಳ ಮಾರಾಟದ ಅಂಗಡಿಗಳಲ್ಲಿ ಸಾಧಾರಣ ದಟ್ಟಣೆ ಕಂಡು ಬಂತು. 

ಸಾಮಾನ್ಯವಾಗಿ ಎಲ್ಲ ದಿನಸಿ ಅಂಗಡಿಗಳಲ್ಲೂ ಸಿದ್ಧಗೊಳಿಸಿದ ಎಳ್ಳು, ಬೆಲ್ಲದ ಪೊಟ್ಟಣಗಳಿಗೆ ಸಾಕಷ್ಟು ಬೇಡಿಕೆ ಕಂಡು ಬಂತು. 

ಇನ್ನು ಕಬ್ಬಿನ ಜಲ್ಲೆಗೂ ಅಷ್ಟೇ ಬೇಡಿಕೆ ಇತ್ತು. ಹೂವು, ತರಕಾರಿ ವ್ಯಾಪಾರ, ವಹಿವಾಟು ಉತ್ತಮವಾಗಿಯೇ ನಡೆಯಿತು. 

ಗ್ರಾಮೀಣ ಭಾಗದಲ್ಲಿ ಕೃಷಿ ಸಂಗಾತಿ ಹಸು, ಎತ್ತು ಸೇರಿದಂತೆ ಜಾನುವಾರುಗಳನ್ನು ತೊಳೆಯುವುದು, ಅವುಗಳ ಕೊಂಬಿಗೆ ಬಣ್ಣ ಹಚ್ಚುವ ಕಾರ್ಯದಲ್ಲೂ ರೈತರು ಭಾಗಿಯಾಗಿದ್ದರು.