ಕನ್ನಡಪ್ರಭ ವಾರ್ತೆ ಹಾಸನ

ಮಹಿಳೆಯರ ಆರೋಗ್ಯ, ಗೌರವ, ಹಕ್ಕುಗಳು ಹಾಗೂ ಋತುಚಕ್ರದ ಸಮಯದಲ್ಲಿ ಅಗತ್ಯವಿರುವ ವಿಶ್ರಾಂತಿ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂತೋಷ್ ಲಾಡ್ ಅಭಿಮಾನಿಗಳ ಬಳಗ ಆಯೋಜಿಸಿದ್ದ ‘ಮಹಿಳೆಯರ ಋತುಚಕ್ರ ರಜೆಯ ಅವಶ್ಯಕತೆ ಮತ್ತು ಅರಿವು’ ವಿಷಯಾಧಾರಿತ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿಯರ ಸನ್ಮಾನ ಕಾರ್ಯಕ್ರಮ ಸೋಮವಾರ ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ನಡೆಯಿತು.

ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ಮಹಿಳಾ ಆರೋಗ್ಯದ ಬಗ್ಗೆ ಸಮಾಜದಲ್ಲಿ ಮುಕ್ತ ಚರ್ಚೆಗೆ ವೇದಿಕೆಯಾಗಿದ್ದು, ಋತುಚಕ್ರ ರಜೆ ಎಂಬ ವಿಷಯದ ಕುರಿತು ಯುವಜನರಲ್ಲಿ ಹೊಸ ಚಿಂತನೆ ಮೂಡಿಸಿತು. ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಅರಿವು ಅಗತ್ಯವಿದೆ ಎಂಬ ಸಂದೇಶ ಕಾರ್ಯಕ್ರಮದ ಮೂಲಕ ಸ್ಪಷ್ಟವಾಗಿ ಹೊರಹೊಮ್ಮಿತು. ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರ್ವಭಾವಿಯಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಪಿಯುಸಿ ಹಾಗೂ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು ೫೯೭ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರ ಋತುಚಕ್ರ ರಜೆ, ಅದರ ಅಗತ್ಯತೆ, ಸಮಾಜದ ಮನೋಭಾವ, ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಿಗಬೇಕಾದ ಸೌಲಭ್ಯಗಳು, ಆರೋಗ್ಯದ ಮೇಲೆ ಋತುಚಕ್ರದ ಪರಿಣಾಮ ಮತ್ತು ಮಹಿಳಾ ಗೌರವದ ಬಗ್ಗೆ ವಿದ್ಯಾರ್ಥಿನಿಯರು ಆಳವಾದ ಅಧ್ಯಯನದೊಂದಿಗೆ ಅತ್ಯುತ್ತಮ ಪ್ರಬಂಧಗಳನ್ನು ಮಂಡಿಸಿದರು. ಸಮಾಜದಲ್ಲಿ ಇನ್ನೂ ಹಲವೆಡೆ ಋತುಚಕ್ರದ ಕುರಿತು ಮಾತನಾಡುವುದನ್ನೇ ಹಿಂಜರಿಯುವ ಪರಿಸ್ಥಿತಿ ಇದೆ. ಆದರೆ ಮಹಿಳೆಯರ ಆರೋಗ್ಯ ಮತ್ತು ಹಕ್ಕುಗಳ ವಿಚಾರದಲ್ಲಿ ಮುಕ್ತ ಚರ್ಚೆ ನಡೆಯಬೇಕು. ಋತುಚಕ್ರವನ್ನು ನೈಸರ್ಗಿಕ ಪ್ರಕ್ರಿಯೆಯಾಗಿ ಸ್ವೀಕರಿಸಿ ಮಹಿಳೆಯರಿಗೆ ಅಗತ್ಯವಿರುವ ವಿಶ್ರಾಂತಿ ಮತ್ತು ಸೌಲಭ್ಯಗಳನ್ನು ಕಲ್ಪಿಸುವುದು ಕುಟುಂಬ, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಜಿಲ್ಲಾಮಟ್ಟದ ಪ್ರಥಮ ಬಹುಮಾನವಾಗಿ ₹೨೫ ಸಾವಿರ ನಗದು ಹಾಗೂ ಲ್ಯಾಪ್‌ಟಾಪ್, ದ್ವಿತೀಯ ಬಹುಮಾನವಾಗಿ ೧೦ ಸಾವಿರ ಹಾಗೂ ಲ್ಯಾಪ್‌ಟಾಪ್, ತೃತೀಯ ಬಹುಮಾನವಾಗಿ ೫ ಸಾವಿರ ಹಾಗೂ ಲ್ಯಾಪ್‌ಟಾಪ್ ನೀಡಲಾಯಿತು. ನಂತರದ ಹೆಚ್ಚು ಅಂಕ ಪಡೆದ ಏಳು ವಿದ್ಯಾರ್ಥಿನಿಯರಿಗೆ ಟ್ಯಾಬ್‌ಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು. ಜೊತೆಗೆ ೫೦ ವಿದ್ಯಾರ್ಥಿನಿಯರಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮಾತನಾಡಿ, ಮಹಿಳೆಯರ ಆರೋಗ್ಯ ಮತ್ತು ಗೌರವಕ್ಕೆ ಸಂಬಂಧಿಸಿದ ವಿಷಯಗಳನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು. ಇಂದಿನ ಯುವಜನರು ಸಾಮಾಜಿಕ ಸಮಸ್ಯೆಗಳ ಕುರಿತು ಆಲೋಚನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇಂತಹ ಪ್ರಬಂಧ ಸ್ಪರ್ಧೆಗಳು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಸಮಾಜಮುಖಿ ಚಿಂತನೆ ಬೆಳೆಸುತ್ತವೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ಕೇವಲ ಬಹುಮಾನ ವಿತರಣೆಗೆ ಸೀಮಿತವಾಗದೆ ಮಹಿಳಾ ಸಬಲೀಕರಣಕ್ಕೆ ದಾರಿಯಾಗಬೇಕು ಎಂದು ಹಲವರು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ, ಜೆಸಿಬಿ ಚಂದ್ರಶೇಖರ್‌, ದಿನೇಶ್ ಬೈರೇಗೌಡ, ತಾರಾ ಚಂದನ್, ಸಂತೋಷ್ ಲಾಡ್ ಅಭಿಮಾನಿಗಳ ಬಳಗದ ಮುಖಂಡ ಎಚ್. ಆರ್‌ ವಿನೋದ್ ಕುಮಾರ್‌, ಇಮ್ರಾನ್ ಖಾನ್, ವಕೀಲ ಮೋಹನ್, ರಾಜು, ಮೊಹಮ್ಮದ್ ಇರ್ಫಾನ್, ರಂಗಸ್ವಾಮಿ, ರೈತ ಮುಖಂಡರಾದ ವಿಠಲ್, ಪವಿತ್ರ, ತೋಫಿಕ್ ಸೇರಿದಂತೆ ಬಳಗದ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.