ಸಾರಾಂಶ
ಚಿತ್ರದುರ್ಗದ ರಾಜ ಬೀದಿಗಳಲ್ಲಿ ಏಕನಾಥೇಶ್ವರಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಮೇಲುಕೋಟೆಯಿಂದ ಇಳಿದು ಬಂದ ಏಕನಾಥೇಶ್ವರಿ, ದೇವಸ್ಥಾನದಿಂದ ಹೊರ ಬಂದ ಬರಗೇರಮ್ಮಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೋಟೆ ನಾಡಲ್ಲಿ ಶುಕ್ರವಾರ ಎಲ್ಲಿ ನೋಡಿದರೂ ನಗರ ದೇವತೆಗಳ ಕಲರವ. ಗುರುವಾರ ಮೇಲುಕೋಟೆಯಿಂದ ಕೆಳಗೆ ಇಳಿದು ಬಂದಿದ್ದ ಏಕನಾಥೇಶ್ವರಿ ಶುಕ್ರವಾರ ನಗರ ಪ್ರದಕ್ಷಿಣೆಗೆ ಹೊರಟಳು. ಕೋಟೆ ರಸ್ತೆಯಲ್ಲಿರುವ ಪಾದಗುಡಿಯಿಂದ ಹೊರಟ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಶುಕ್ರವಾದ ನಗರದಲ್ಲಿಡೆ ಸಾಗಿತು.ಬಗೆ ಬಗೆಯ ಹೂವು, ಹಾರ, ಹಸಿರು ಪತ್ರೆಗಳಿಂದ ಏಕನಾಥೇಶ್ವರಿಯನ್ನು ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು.
ಸುಗಂಧರಾಜ, ಗುಲಾಬಿ, ಸೇವಂತಿಗೆ, ಮಲ್ಲಿಗೆ, ಕನಕಾಂಬರ ಹಾರಗಳಿಂದ ಸಿಂಗರಿಸಿ ಪೂಜಿಸಿದ ನಂತರ ಎತ್ತಿನ ಗಾಡಿನಲ್ಲಿ ಏಕನಾಥೇಶ್ವರಿಯನ್ನು ಕೂರಿಸಿ ನಗರದ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನೂರಾರು ಭಕ್ತರು ಜಾತ್ರೆ ಬಯಲಿಗೆ ಆಗಮಿಸಿ ಏಕನಾಥೇಶ್ವರಿಗೆ ಪೂಜೆ ಸಲ್ಲಿಸಿದರು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಭಕ್ತರು ಏಕನಾಥೇಶ್ವರಿಗೆ ಪೂಜೆ ಸಮರ್ಪಿಸಿದರು.ಡೊಳ್ಳು, ತಮಟೆ, ಉರುಮೆ, ಕಹಳೆ ವಾದ್ಯಗಳಿಗೆ ಮೆರವಣಿಗೆಯಲ್ಲಿ ಭಕ್ತರು ಕುಣಿದು ಕುಪ್ಪಳಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಮಾಜಿ ಉಪಾಧ್ಯಕ್ಷರಾದ ಬಿ.ರಾಮಜ್ಜ, ಎಸ್ಬಿಎಲ್ ಮಲ್ಲಿಕಾರ್ಜುನ್, ಮಾಜಿ ಸದಸ್ಯ ಸಿ.ಟಿ ರಾಜೇಶ್, ನಾಮ ನಿರ್ದೇಶನ ಮಾಜಿ ಸದಸ್ಯ ಓಂಕಾರ್, ತಾಲೂಕು ಕಚೇರಿಯ ಕಂದಾಯ ನಿರೀಕ್ಷಕ ಪ್ರಾಣೇಶ್, ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್, ಏಕನಾಥೇಶ್ವರಿ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ ಸೇರಿದಂತೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿದ್ದರು.
ಗುಡಿ ಬಿಟ್ಟು ನಗರ ಸುತ್ತಿದ ಬರಗೇರಮ್ಮ
ಚಿತ್ರದುರ್ಗ: ನಗರ ದೇವತೆ ಬರಗೇರಮ್ಮನ ಮೆರವಣಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಲಕ್ಷ್ಮಿಬಜಾರ್ ಮೂಲಕ ಆನೆಬಾಗಿಲು ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗದಿಂದ ದೊಡ್ಡಪೇಟೆಯ ರಾಜಬೀದಿಯಲ್ಲಿ ಸಾಗಿತು. ಬಣ್ಣ ಬಣ್ಣದ ಹೂವು ಹಾಗೂ ಹಾರಗಳಿಂದ ಮನಮೋಹಕವಾಗಿ ಬರಗೇರಮ್ಮನನ್ನು ಸಿಂಗರಿಸಲಾಗಿತ್ತು. ಸುಡುಬಿಸಿಲನ್ನು ಲೆಕ್ಕಿಸದೆ ಯುವಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಗೊಂಬೆ ಕುಣಿತ, ಸೋಮನ ಕುಣಿತ, ಡೊಳ್ಳು, ತಮಟೆ, ಉರುಮೆ ಸದ್ದಿಗೆ ಭಕ್ತರು ಹೆಜ್ಜೆ ಹಾಕುತ್ತಿದ್ದರು. ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಭಕ್ತರು ಪೂಜೆ ಸಲ್ಲಿಸಿ, ಬರಗೇರಮ್ಮನಿಗೆ ಭಕ್ತಿ ಸಮರ್ಪಿಸಿದರು.