ವಿಜಯಪುರ: ಇತರ ರಾಷ್ಟ್ರಗಳ ಅಭಿವೃದ್ಧಿ ನೋಡಿ ಅಚ್ಚರಿಪಡುವ ಬದಲು, ನಮ್ಮ ದೇಶದ ಪ್ರಗತಿಗೆ ನಮ್ಮ ಕೊಡುಗೆ ಏನೆಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಸವಕಲ್ಯಾಣ ಮಠಾಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ತಿಳಿಸಿದರು

ವಿಜಯಪುರ: ಇತರ ರಾಷ್ಟ್ರಗಳ ಅಭಿವೃದ್ಧಿ ನೋಡಿ ಅಚ್ಚರಿಪಡುವ ಬದಲು, ನಮ್ಮ ದೇಶದ ಪ್ರಗತಿಗೆ ನಮ್ಮ ಕೊಡುಗೆ ಏನೆಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಸವಕಲ್ಯಾಣ ಮಠಾಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪುರಸಭೆ ಹಮ್ಮಿಕೊಂಡಿದ್ದ ೭೭ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರು ನಮಗೆ ವಿಶ್ವದ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಇಂದು ಭಾರತ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿದ್ದು ವಿಶ್ವದ ೫ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದು ಹೆಮ್ಮೆಯ ವಿಚಾರ ಎಂದರು.

ಪುರಸಭಾಧ್ಯಕ್ಷೆ ಭವ್ಯ ಮಹೇಶ್ ಮಾತನಾಡಿ, ನಮ್ಮ ಇಂದಿನ ಸ್ವಾತಂತ್ರ್ಯದ ಹಿಂದೆ ಅಸಂಖ್ಯಾತ ಹೋರಾಟಗಾರರ ತ್ಯಾಗ-ಬಲಿದಾನವಿದೆ. ಈ ಇತಿಹಾಸದ ಅರಿವನ್ನು ಯುವ ಪೀಳಿಗೆಗೆ ಮೂಡಿಸುವುದು ಮತ್ತು ಆ ಸ್ವಾತಂತ್ರ್ಯವನ್ನು ಯಥಾವತ್ತಾಗಿ ಕಾಪಾಡಿಕೊಂಡು ಹೋಗುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು.

ಗಮನಸೆಳೆದ ಸಾಂಸ್ಕೃತಿಕ ವೈಭವ:

ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದವು. ಅದರಲ್ಲೂ ವಿಶೇಷವಾಗಿ ಅಂಗನವಾಡಿ ಮಕ್ಕಳು ಸುಭಾಷ್ ಚಂದ್ರ ಬೋಸ್, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ನೆಹರು ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ತೊಟ್ಟು ದೇಶಪ್ರೇಮದ ಮೆರುಗು ನೀಡಿದರು.

ಸಾಧಕರಿಗೆ ಸನ್ಮಾನ:

ಕೃಷಿ ಮತ್ತು ವಾಣಿಜ್ಯ ಆಡಿಟರ್ ಚೇತನ್‌, ಪ್ರಗತಿಪರ ರೈತ ಅಂಜನಪ್ಪ, ಕರಗ ಉತ್ಸವದ ಕರಗಧಾರಿ ಬಾಲಕೃಷ್ಣ, ಸರ್ಕಾರಿ ಆಸ್ಪತ್ರೆಯ ಮುನಿಯಪ್ಪ, ಜಿಮ್ ತರಬೇತುದಾರ ಭಾನು, ರಾಜ್ಯಮಟ್ಟದ ಕುಸ್ತಿ ಪಟುಗಳಾದ ವಿಟ್ಟಲ್ ಮತ್ತು ದೇವರಾಜು, ಕರಾಟೆ ಪಟು ಹಥ್ವಿಕ್ ಗೌಡರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಎಂ.ಸತೀಶ್ ಕುಮಾರ್, ರಾಜೇಶ್ವರಿ ಭಾಸ್ಕರ್, ವಿಮಲಾ ಬಸವರಾಜು, ಸದಸ್ಯರಾದ ಸಿ.ನಾರಾಯಣಸ್ವಾಮಿ, ಆರ್.ಸುಷ್ಮಾ , ಶ್ರೀರಾಮ, ಶಿಲ್ಪಾ, ಸಿ.ಎಂ.ರಾಮು, ಮಂಜುಳಾ, ವಿ.ನಂದಕುಮಾರ್, ಕವಿತಾ, ರಾಧಮ್ಮ, ಎಂ. ಬೈರೇಗೌಡ, ಎ.ಆರ್. ಹನಿಪುಲ್ಲಾ, ರವಿ, ಆಯುಷ ಸೈಪುಲ್ಲ, ಪುರಸಭಾ ಮುಖ್ಯಾಧಿಕಾರಿ ವೈ.ವಿ. ಸತ್ಯನಾರಾಯಣ, ಇಂಜಿನಿಯರ್ ಶೇಖರ್, ಕಂದಾಯ ಅಧಿಕಾರಿ ಶಿವನಾಗೇಗೌಡ, ಆರೋಗ್ಯ ಅಧಿಕಾರಿ ಲಾವಣ್ಯ, ಸಿಬ್ಬಂದಿ ಲಿಂಗಣ್ಣ, ಹೇಮಾ, ಪೂರ್ಣಿಮಾ, ಮಮತಾ, ಅಜ್ಮತ್, ರೂಪಮಣಿ ಇತರರಿದ್ದರು.