ಕನ್ನಡಪ್ರಭವಾರ್ತೆ ಮಧುಗಿರಿ

ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಕಾಳೇನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀಸೀತಾರಾಮಚಂದ್ರ ಹಾಗೂ ವೀರಾಂಜನೇಯ ಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇಂತಹ ಧಾರ್ಮಿಕ ಆಚರಣೆಗಳು ಹೆಚ್ಚು ನಡೆಯಬೇಕು. ಧಾರ್ಮಿಕ ಆಚರಣೆಗಳಿಂದ ದೇಶ ಪ್ರಗತಿ ಹೊಂದುವ ಜೊತೆಗೆ ಮಾನವೀಯ ಮನುಷ್ಯ ಧರ್ಮವನ್ನು ಉಳಿಸಿಕೊಳ್ಳಿ. ಧರ್ಮ ಎಂದರೆ ಪರಸ್ಪರರನ್ನು ಪ್ರೀತಿಸಿ, ಗೌರವಿಸುವುದು. ಗಾಂಧಿಜಿ ಕಂಡ ಕನಸಿನ ರಾಮರಾಜ್ಯ ಸ್ಥಾಪನೆಯಾಗಲು ಎಲ್ಲರೂ ಎಲ್ಲರೊಂದಿಗೆ ಸಹಕಾರ, ಸೌಹಾರ್ದ ಸೋದರತ್ವದಿಂದ ಬಾಳಬೇಕು ಎಂದರು. ಈಗಾಗಲೇ ಕೊಡಿಗೇನಹಳ್ಳಿ ಹೋಬಳಿಯಲ್ಲಿ ಹರಿಯುವ ಜಯಮಂಗಲಿ ನದಿಗೆ ಅಡ್ಡಲಾಗಿ ಅಗತ್ಯವಿರುವ ಕಡೆ ಚೆಕ್ ಡ್ಯಾಂ ಮತ್ತು ಕಾಜುವೆಗಳನ್ನು ನಿರ್ಮಿಸಿದ್ದು, ಇದರಿಂದ ಅಂತರ್ಜಲ ವೃದ್ಧಿಸಿ ವ್ಯವಸಾಯಕ್ಕೆ ನೀರು ಲಭ್ಯವಾಗಲಿದೆ ಎಂದರು.

ನಂತರ ಚಿಕ್ಕಮಾಲೂರು ಗ್ರಾಮದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರ ಜೊತೆಗೆ ಉಭಯ ಕುಶಲೋಪರಿ ನಡೆಸಿ ಗ್ರಾಮದಲ್ಲಿನ ಜನತೆಗೆ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.


ಸಮಾರಂಭದಲ್ಲಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶ್ರೀನಿವಾಸ್, ನಿರ್ಮಿತ ಕೇಂದ್ರದ ಮುಖ್ಯಸ್ಥ ಡಾ.ರಾಜಶೇಖರ್, ಎ.ಡಿ. ಧನಂಜಯ್, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಮುಖಂಡರಾದ ಕಾಳೇನಹಳ್ಳಿ ನರಸಿಂಹಯ್ಯ , ನರಸೀಯಪ್ಪ, ಅಧಿಕಾರಿಗಳು ಇದ್ದರು.

ಫೋಟೋ : ಕಾಳೇನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀಸೀತಾರಾಮಚಂದ್ರ ಹಾಗೂ ವೀರಾಂಜನೇಯ ಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸವ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿದರು.