ಸಾರಾಂಶ
protection if observed with devotion: Pattadveru
ಬೀದರ್:ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ನಂಬಿ, ಶ್ರದ್ಧೆಯಿಂದ ಆಚರಣೆ ಮಾಡುವವರಿಗೆ ಎಂದಿಗೂ ಬಸವ ರಕ್ಷಣೆ ಸಿಗಲಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು ಹಾಗೂ ಆರೂಢ ದಾಸೋಹಿ ಶರಣ ಮಾಗನೂರು ಬಸವಪ್ಪ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ 50 ಸಾವಿರ ನಗದು, ಹಾಗೂ ಪ್ರಶಸ್ತಿ ಫಲಕ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕಾಯಕ, ದಾಸೋಹ ತತ್ವ ಅಳವಡಿಸಿಕೊಂಡು ಶರಣರು ಹೇಳಿದಂತೆ ನಡೆದರೆ ಬಸವಣ್ಣ ನಮಗೆ ಬುಲೆಟ್ಪ್ರೂಫ್ ಇದ್ದಂತೆ. ಪ್ರತಿಯೊಬ್ಬರೂ ಶರಣ ಸಾಹಿತ್ಯವನ್ನು ಮೈಗೂಡಿಸಿಕೊಂಡು ಜೀವನ ಸಾಗಿಸಿ ಎಂದು ಕಿವಿ ಮಾತು ಹೇಳಿದರು.ಇದೇ ಸಂದರ್ಭದಲ್ಲಿ ತನ್ನ ಬಾಲ್ಯದ ಜೀವನದ ಬಗ್ಗೆ ಮಾತನಾಡಿ, ನಾನು ಚಿಕ್ಕವನಿದ್ದಾಗ ಬಹಳ ದೈವ ಭಕ್ತನಾಗಿದ್ದೆ. ಪ್ರತಿ ಶನಿವಾರ ಹನುಮಾನ ಮಂದಿರಕ್ಕೆ ಹೋಗುತ್ತಿದೆ. ಪ್ರೌಢ ಶಾಲೆಯಲ್ಲಿದ್ದಾಗ ಔರಾದ್ನಲ್ಲಿ ಲಿಂಗಾನಂದ ಸ್ವಾಮೀಜಿ ಅವರು ಪ್ರವಚನ ಮಾಡಿದರು. ಒಂದು ರಾತ್ರಿ ಪೂಜ್ಯರ ಪ್ರವಚನ ಕೇಳಿದ ನಂತರ ನಾನು ಬಸವ ತತ್ವದ ಕಡೆಗೆ ವಾಲಿದೆ ಎಂದರು.
ಬಹುದೇವರ ಸ್ಮರಣೆ ಬಿಟ್ಟು ಇಷ್ಟಲಿಂಗವೇ ಸರ್ವಸ್ವ ಆಯಿತು. ಬಸವಗುರು ಕೃಪೆ, ಚನ್ನಬಸವ ಪಟ್ಟದ್ದೇವರು ಮಾರ್ಗದರ್ಶನದಲ್ಲಿ ಮಠದ ಸಂಸ್ಕೃತಿ ಕಡೆಗೆ ಬಂದಿದೆ. ಶಿಕ್ಷಣ, ವಸತಿ ಸೌಲಭ್ಯಕ್ಕಾಗಿ ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಬಂದೆ. ವ್ಯಾಸಂಗ ಮುಗಿಸಿ ನೌಕರಿ ಮಾಡುವ ಗುರಿ ಇತ್ತು. ಆದರೆ ಮಠಾಧೀಶನಾದೆ ಎಂದರು.