ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಅವೈಜ್ಞಾನಿಕವಾಗಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯಿಂದ ತುಮಕೂರು ಜಿಲ್ಲೆಯ ೭ ತಾಲೂಕಿನ ರೈತರುಗಳಿಗೆ ಮತ್ತು ೨೩ ಕುಡಿಯುವ ನೀರಿನ ಯೋಜನೆಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಶಿರಾ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಒತ್ತಾಯಿಸಿದರು. ಅವರು ಬುಧವಾರ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ವಿರೋಧಿಸಿ ನಗರದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎಕ್ಸ್ಪ್ರೆಸ್ ಕಾಮಗಾರಿ ವಿರೋಧಿಸಿ ಕಳೆದ ಒಂದು ವರ್ಷಗಳಿಂದಲೂ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರು, ಸರಕಾರ ಸ್ಪಂದಿಸಿಲ್ಲ. ಬದಲಾಗಿ ಪೊಲೀಸರನ್ನು ಬಳಸಿಕೊಂಡು ಹೋರಾಟಗಾರರನ್ನು ಬಂಧಿಸಿ ಗುತ್ತಿಗೆದಾರರಿಗೆ ಅಕ್ರಮವಾಗಿ ಕೆಲಸ ಮಾಡಲು ಜಿಲ್ಲಾಡಳಿತ ಮತ್ತು ಸರಕಾರ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ ಆಡಳಿತ ಪಕ್ಷದ ಶಾಸಕರು, ಸಚಿವರುಗಳು, ಮೌನ ವಹಿಸಿದ್ದಾರೆ. ಆದ್ದರಿಂದ ಈ ನಡೆಯನ್ನು ಖಂಡಿಸಿ ಸರಕಾರದ ಲಿಂಕ್ ಕಾಮಗಾರಿ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿ ಮೇ ೩೧ರ ಶನಿವಾರ ಮೂಲ ನಾಲೆ ೭೦ನೇ ಕಿಲೋಮೀಟರ್ ಸುಂಕಪುರ, ಡಿ ರಾಂಪುರ ಹತ್ತಿರ ಎಲ್ಲಾ ರೈತ ಸಂಘಟನೆಗಳು, ಮಠಾಧೀಶರುಗಳು, ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು, ಮಾಜಿ ಶಾಸಕರು ಮಾಜಿ ವಿರೋಧ ಪಕ್ಷದ ಸಚಿವರು ಶಾಸಕರು ಎಲ್ಲ ಜನಪರ ಸಂಘಟನೆಗಳು ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಎಲ್ಲಾ ರೈತ ಬಂಧುಗಳು ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು ಕನ್ನಡ ಸಂಘಟನೆಗಳು ದಲಿತ ಸಂಘಟನೆಗಳು ಭಾಗವಹಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಎಸ್ ಜಯಣ್ಣ, ಗೋಣಿಹಳ್ಳಿ, ಶಿವಣ್ಣ, ರಾಮಣ್ಣ ವೀರಾಪುರ, ಗುರುಮೂರ್ತಿ, ರಾಮಣ್ಣ ಗೋಣಿಹಳ್ಳಿ ಸೇರಿದಂತೆ ಹಲವರು ಹಾಜರಿದ್ದರು.