ಕನ್ನಡಪ್ರಭ ವಾರ್ತೆ ಮುಧೋಳ
ತಾಲೂಕಿನ ಮುದ್ದಾಪುರದಲ್ಲಿರುವ ಜೆ.ಕೆ.ಸಿಮೆಂಟ್ಸ್ ಕಾರ್ಖಾನೆಯ ಪರಿಸರ ಮಾಲಿನ್ಯ ಖಂಡಿಸಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿಯು ಕಾರ್ಖಾನೆಯ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಶಂಕರಗೌಡ ಹಿರೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಮುದ್ದಾಪೂರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ.ಸಿಮೆಂಟ್ಸ್ ಕಾರ್ಖಾನೆಯ ದರ್ಬಾರ್ ಮಿತಿ ಮೀರಿದೆ. ಕಾರ್ಖಾನೆಯ ಅವೈಜ್ಞಾನಿಕ ಬ್ಲಾಸ್ಟಿಂಗ್ ಗೆ ರೋಸಿ ಹೋಗಿರುವ ಗ್ರಾಮಸ್ಥರು ತಮ್ಮ ತಮ್ಮ ಮನೆಗಳನ್ನು ರಕ್ಷಿಸಿ ಕೊಳ್ಳಲು ಹೋರಾಟದ ಹಾದಿ ಹಿಡಿಯಬೇಕಾಗಿದೆ. ಅದಕ್ಕಾಗಿ ನಾವು ಮಾನವೀಯತೆಯಿಂದ ಅವರಿಗೆ ಬೆಂಬಲಕ್ಕೆ ಹೋರಾಟದ ನೇತೃತ್ವವಹಿಸಿಕೊಂಡಿದ್ದೇವೆ ಎಂದರು.
ಬೆಳಗಾವಿ ಜಿಲ್ಲಾಧ್ಯಕ್ಷ ಪರಸುರಾಮ ಚಿನಗುಂಡಿ ಮಾತನಾಡಿ, ಕಾರ್ಖಾನೆಯ ಗಣಿ ವಲಯದಲ್ಲಿ ನಡೆಯುತ್ತಿರುವ ಬ್ಲಾಸ್ಟಿಂಗ್ ಸದ್ದು ಗ್ರಾಮಸ್ಥರ ನಿದ್ದೆಯನ್ನು ಕಸಿದುಕೊಳ್ಳುತ್ತಿದೆ. ಸ್ಪೋಟದ ಕಂಪನಕ್ಕೆ ಮನೆಗಳ ಗೋಡೆಗಳಲ್ಲಿ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು ಕುಸಿದು ಬೀಳುವ ಭೀತಿಯಲ್ಲಿವೆ ಹೀಗಾದರೆ ಹೇಗೆ? ಮುಂದಿನ ಬದುಕು ಹೇಗೆ? ಎಂದು ಹಲವು ಪ್ರಶ್ನೆಗಳನ್ನು ಕೇಳಿದರು.ಹೋರಾಟಗಾರ ಸುರೇಶ ಕಿವಡಿ ಮಾತನಾಡಿ, ಕಾರ್ಖಾನೆಯಿಂದ ಹೊರ ಬೀಳುವ ವಿಷಕಾರಿ ಧೂಳು
ರೈತರ ಹೊಲಗಳಿಗೆ ಆವರಿಸುತ್ತಿದ್ದು ಎಕರೆಗಟ್ಟಲೆ ಬೆಳೆ ನಾಶವಾಗುತ್ತಲಿವೆ. ಕೇವಲ ಬೆಳೆ ಮಾತ್ರವಲ್ಲ ವಾಯುಮಾಲಿನ್ಯದಿಂದ ಉಸಿರಾಟದ ಸಮಸ್ಯೆ ಕಾಡುತ್ತಿದೆ. ಅಂತರ್ಜಲ ಸಂಪೂರ್ಣ ಕಲುಷಿತಗೊಂಡಿದ್ದು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಯಮಗಳನ್ನು ಗಾಳಿಗೆ ತೂರಿರುವ ಆಡಳಿತ ಮಂಡಳಿ ಇದೀಗ ಮತ್ತಷ್ಟು ವಿಸ್ತರಣಾ ಯೋಜನೆಗೆ ಕೈಹಾಕಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ ಎಂದರು.
ಹಣಮಂತ ಕಿವಡಿ ಮಾತನಾಡಿ, ಕಳೆದ ಬಾರಿ ಕಾರ್ಖಾನೆಯ ಹತ್ತಿರ ರೈತರ ಹೊಲದಲ್ಲಿ 10 ಅಡಿ ಅಗಲ 20 ಅಡಿ ಉದ್ದದ ಭೂಕುಸಿತ ಬಿದ್ದಿದ್ದರ ಪರಿಣಾಮ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಾರ್ಖಾನೆಯ ಸುತ್ತ-ಮುತ್ತ ಇರುವ ಗ್ರಾಮಸ್ಥರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಮತ್ತು ಹಾನಿಗೊಳಗಾದ ಗ್ರಾಮಸ್ಥರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕಂದಾಯ, ಕೃಷಿ, ಪರಿಸರ, ಸಾರಿಗೆ, ಗಣಿ, ನೈರ್ಮಲ್ಯ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಖಾನೆಯವರ ಮತ್ತು ಹೋರಾಟಗಾರರ ಜೊತೆ ಮಾತನಾಡಿ ಹೋರಾಟಗಾರರಿಗೆ ತಮ್ಮ ಇಲಾಖೆಗಳಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಇಲಾಖೆವಾರು ನಿಗದಿಪಡಿಸಿದ ಅವಧಿಯೊಳಗಾಗಿ ಖಚಿತ ಮಾಹಿತಿಯೊಂದಿಗೆ ವರದಿ ನೀಡುವಂತೆ ಹೋರಾಟಗಾರರು ಮನವಿ ಮಾಡಿದ ಅವರು ತಮಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.
ಡಾ.ಬಸವಾನಂದ ಶ್ರೀಗಳು, ರೈತ ಮುಖಂಡರಾದ ಸುರೇಶ ಕಿವಡಿ, ಹಣಮಂತ ಕಿವಡಿ, ರಂಗಪ್ಪ ತುಳಸಿಗೇರಿ, ಶೈಲೂ ಹಂಪಿಹೊಳಿ, ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ, ಶಿವಕುಮಾರ ಬೀದಿಭಾವಿ, ಮಂಜುಳಾ, ಲೋಕೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.