ಮತದಾರರ ವಿಶೇಷ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಕೋಟ್ಯಂತರ ಜನರ ಮತದಾನದ ಹಕ್ಕು ಕಸಿಯಲು ಕೇಂದ್ರ ಚುನಾವಣೆ ಆಯೋಗ ಹೊರಟಿದೆ ಎಂದು ಆರೋಪಿಸಿ ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮತದಾರರ ವಿಶೇಷ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಕೋಟ್ಯಂತರ ಜನರ ಮತದಾನದ ಹಕ್ಕು ಕಸಿಯಲು ಕೇಂದ್ರ ಚುನಾವಣೆ ಆಯೋಗ ಹೊರಟಿದೆ ಎಂದು ಆರೋಪಿಸಿ ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಡಳಿತ ಭವನ ಎದುರು ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು ಘೋಷಣೆ ಕೂಗಲಾಯಿತು. ಈಗಾಗಲೇ 13 ರಾಜ್ಯಗಳಲ್ಲಿ ಎಸ್ಐಆರ್ ನಡೆಸಿ 6.5 ಕೋಟಿ ಜನ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ. ಇದರಲ್ಲಿ ಕನಿಷ್ಠ 5 ಕೋಟಿ ಅರ್ಹ ಮತದಾರರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.
ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಯಾರ ವಿರೋಧವೂ ಇಲ್ಲ. ಒಂದು ವೇಳೆ ವಿದೇಶಿಯರಿದ್ದರೆ ಅವರಿಗೆ ಮತದಾನದ ಹಕ್ಕು ಕೊಡಿ ಎಂದು ಯಾರೂ ಹೇಳುತ್ತಿಲ್ಲ. ಆದರೆ, ಅರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕೆಲಸ ನಡೆದಿದೆ ಎಂದು ದೂರಿದರು.ಮತದಾರರ ಪಟ್ಟಿಯಿಂದ ಹೊರಗಿಡುವುದು ಮಾತ್ರವಲ್ಲ. ಅಂತಹವರಿಗೆ ಯಾವುದೇ ಸರಕಾರಿ ಸೌಲಭ್ಯಗಳು ನೀಡಲಾಗುವುದಿಲ್ಲ ಎಂದು ವಿವಿಧ ರಾಜ್ಯಗಳ ಬಿಜೆಪಿಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇಂತಹ ಆಘಾತಕಾರಿ ಪ್ರಕ್ರಿಯೆಗೆ ಕರ್ನಾಟಕದಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದ ಅವರು, ವ್ಯವಸ್ಥಿತವಾಗಿ ಮತದಾನದ ಹಕ್ಕನ್ನು ಕಸಿಯಲಾಗುತ್ತಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಿತ್ತುಕೊಳ್ಳಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಿ.ಎಂ.ತರ-ದಾರ, ಪ್ರೇಮನಾಥ ಗರಸಂಗಿ, ಮಲ್ಲಿಕಾರ್ಜುನ ಮೇಟಿ, ಹಾಜಿಸಾಬ ದಂಡಿನ, ಬಸೀರ ಅಹ್ಮದ್ ಬಾವಾಖಾನ, ಆರೀಫ್ ಮೋಮಿನ್, ಅಕ್ಬರ್ ಮುಲ್ಲಾ, ನಬಿಸಾಬ ಟಂಕಸಾಲಿ ಮತ್ತಿತರರು ಇದ್ದರು.