ಸಾರಾಂಶ
ಹಲ್ಲೆಕೋರರಿಗೆ ಕಠಿಣ ಶಿಕ್ಷೆ ಹಾಗೂ ಕಾನೂನು ಬಾಹಿರವಾಗಿ ನಡೆಸುತ್ತಿರುವ ಇಟ್ಟಿಗೆ ಭಟ್ಟಿ ಮುಟ್ಟುಗೊಲು ಹಾಕಿಕೊಂಡು ನೊಂದ ಬಡ ಕಾರ್ಮಿಕರಿಗೆ ಸೂಕ್ತ ಪರಿಹಾರ ಒದಗಿಸಬೇಕು.
ಕನ್ನಡಪ್ರಭ ವಾರ್ತೆ ಮುಧೋಳ
ವಿಜಯಪುರ ನಗರದ ಇಟ್ಟಿಗೆ ಭಟ್ಟಿಯಲ್ಲಿ ಬಡ ಕಾರ್ಮಿಕ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ ನೀಚರ ವಿರುದ್ಧ ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್, ಕರ್ನಾಟಕ ಕಾರ್ಮಿಕ ಘಟಕದ ನೇತೃತ್ವದಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟಿಸಲಾಯಿತು.ಹಲ್ಲೆಕೋರರಿಗೆ ಕಠಿಣ ಶಿಕ್ಷೆ ಹಾಗೂ ಕಾನೂನು ಬಾಹಿರವಾಗಿ ನಡೆಸುತ್ತಿರುವ ಇಟ್ಟಿಗೆ ಭಟ್ಟಿ ಮುಟ್ಟುಗೊಲು ಹಾಕಿಕೊಂಡು ನೊಂದ ಬಡ ಕಾರ್ಮಿಕರಿಗೆ ಸೂಕ್ತ ಪರಿಹಾರ ಒದಗಿಸಬೇಕು. ರಾಜ್ಯದ ತುಂಬೆಲ್ಲ ಕಾರ್ಯ ನಿರ್ವಹಿಸುತ್ತಿರುವ ಭಟ್ಟಿಗಳಲ್ಲಿನ ಎಲ್ಲ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ತಾಲೂಕು ದಂಡಾಧಿಕಾರಿ ಮುಖಾಂತರ ರಾಜ್ಯ ಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಬಸವಣ್ಣನವರ ಶಾಂತಿಯ ನಾಡು ಇಂತಹ ಗೂಂಡಾ ವರ್ತನೆ ಕಿರಾತಕರಿಂದ ಹದಗೆಟ್ಟಿದೆ. ಕೂಡಲೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಇದೆ ಪ್ರವೃತ್ತಿ ಮುಂದುವರಿದಲ್ಲಿ ಇಡೀ ರಾಜ್ಯದ ತುಂಬೆಲ್ಲ ಉಗ್ರ ಹೋರಾಟದ ಎಚ್ಚರಿಕೆ ಭೀಮ ಆರ್ಮಿ ನೀಡಿದೆ.
ಈ ವೇಳೆ ವಿವಿಧ ಸಂಘಟನೆಗಳು ಮುಖಂಡರು, ಭೀಮ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಘಟನೆಯ ಕಾರ್ಯಕರ್ತರು, ಕಾರ್ಮಿಕ ಮುಖಂಡರು, ಭೀಮ ಆರ್ಮಿ ಕುಟುಂಬದ ಎಲ್ಲ ಘಟಕದ ಮುಂಚೂಣಿ ನಾಯಕರು, ಯುವ ನಾಯಕರು, ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಕಿರಾಣಿ ವರ್ತಕರು ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ್ ಮನವಿ ಸ್ವೀಕರಿಸಿ ಆರೋಪಿಗೆ ಉಗ್ರ ಕಠಿಣ ಶಿಕ್ಷೆ ವಿಧಿಸಲು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿದರು.