ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ ಎಐಯುಟಿಯುಐ ನೇತೃತ್ವದಲ್ಲಿ ಪಟ್ಟಣದ ಮಿನಿವಿಧಾನ ಸೌಧದ ಎದುರು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಸತಿ ನಿಲಯದ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.ಅಂಗನವಾಡಿ ಕಾರ್ಯಕರ್ತೆ ಸತ್ಯಂ ಹಡಪದ ಮಾತನಾಡಿ, ಎಲ್ಲರಿಗೂ ಕಾಯಂಉದ್ಯೋಗದ ಒದಗಿಸಿ ಉದ್ಯೋಗದ ಹಕ್ಕನ್ನು ಸಂವಿಧಾನದ ಹಕ್ಕನ್ನಾಗಿ ಮಾಡಬೇಕು. ಎಲ್ಲಾ ಪಿಂಚಣಿದಾರರಿಗೆ ಬೆಲೆ ಏರಿಕೆಯ ಸೂಚ್ಯಂಕದ ಅನುಗುಣವಾಗಿ ಪಿಂಚಣಿ ಖಾತ್ರಿಪಡಿಸಬೇಕು. ರಾಷ್ಟ್ರೀಯ ಕನಿಷ್ಠ ವೇತನ ಜಾರಿ, ಬೆಲೆ ಏರಿಕೆ ನಿಯಂತ್ರಿಸಿ, ಆಹಾರ ಸೇರಿ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹಿಂಪಡೆಯಬೇಕು. ಔಷಧ, ಪೆಟ್ರೋಲ್ ಮುಂತಾದವುಗಳ ಬೆಲೆ ಇಳಿಸಬೇಕು. ಎಲ್ಲಾ ಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಐಎಲ್ಸಿಯ 45ನೇ ಮತ್ತು 46ನೇ ಶಿಫಾರಸುಗಳನ್ನು ಜಾರಿಗೆ ತರಬೇಕು. ಹೊಸ ಪಿಂಚಣಿ ವ್ಯವಸ್ಥೆ ಹಿಂಪಡೆದುಕೊಂಡು ಹೊಸ ಪಿಂಚಣಿಯನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು ಸೇರಿದಂತೆ ವಿವಿಧ 24 ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಭಾಗ್ಯಶ್ರೀ ಕುರ್ತಳ್ಳಿ, ಭಾಗ್ಯಶ್ರೀ ಮೆಡೇದಾರ, ರಿಯಾನಾ ಬಗಲೂರ, ಸರೂಬಾಯಿ ರಾಠೋಡ ಮಾತನಾಡಿ, ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವವನ್ನು ಆಶಾ ರಾಠೋಡ, ಭಾರತಿ ಪವಾರ, ಸುರೇಖಾ ದೊಡಮನಿ, ಗೀತಾ ಜಾಧವ, ಶೋಭಾ ಕಾಲೇಬಾಗ, ಜಗು ವಾಲಿ, ಸವಿತಾ ರಾಠೋಡ, ಶಶಿಕಲಾ ಕಮತಿ, ಭುವನೇಶ್ವರಿ ಮಾವಿನಹಳ್ಳಿ, ಆರತಿ ಕುಂಟೋಜಿ, ಸಾವಿತ್ರಿ ಕುಂಬಾರ, ಲತಾ ಕಟ್ಟೀಮನಿ, ಗೀತಾ ಹಂಜಗಿ, ಸರಸ್ವತಿ ಜ್ಯೋಶಿ, ರೇಣುಕಾ ಹೆಳವರ, ಅಕ್ಕವ್ವ ಹಲಸಂಗಿ, ಕವಿತಾ ಕಟ್ಟೀಮನಿ, ಕಲಾವತಿ ಹೂಗಾರ ವಹಿಸಿದ್ದರು.