ವಿಜಯನಗರ ಜಿಲ್ಲಾಸ್ಪತ್ರೆಯಲ್ಲಿ ವಿವಿಧ 235 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಹೊಸಪೇಟೆ: ವಿಜಯನಗರ ಜಿಲ್ಲಾಸ್ಪತ್ರೆಯಲ್ಲಿ ವಿವಿಧ 235 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಆದ್ಯತೆ ನೀಡಬೇಕು ಮತ್ತು ಪ್ರಸ್ತುತ ಜಿಲ್ಲಾಸ್ಪತ್ರೆಯನ್ನು 400 ಹಾಸಿಗೆಗೆ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಡಿವೈಎಫ್‌ಐ ಸಂಘಟನೆಯ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಹೊಸಪೇಟೆ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ 300 ಹಾಸಿಗೆಯ ಆಸ್ಪತ್ರೆಗೆ ಅಗತ್ಯವಿರುವ 235 ಹುದ್ದೆಗಳ ನೇಮಕಾತಿಗೆ ಸರ್ಕಾರ ಮಂಜೂರು ಆದೇಶ ನೀಡಿದೆ. ಉದ್ಯೋಗದ ನೇಮಕಾತಿಯನ್ನು ಹೊರಡಿಸಿರುವ ಸರ್ಕಾರದ ತೀರ್ಮಾನವನ್ನು ಡಿ.ವೈ.ಎಫ್.ಐ ಸ್ವಾಗತಿಸುತ್ತದೆ. ಆದರೆ, ಮಂಜೂರು ಹೊರಡಿಸಿರುವ ನೇಮಕಾತಿಗಳ ಹುದ್ದೆಗೆ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಮೊದಲು ಆಧ್ಯತೆ ನೀಡಬೇಕು.

ಈಗಾಗಲೇ ಜಿಲ್ಲೆಯನ್ನೊಳಗೊಂಡಂತೆ ರಾಜ್ಯಾದ್ಯಂತ ಲಕ್ಷಾಂತರ ಯುವಕರು ಉದ್ಯೋಗ ಅರಸಿ ಹೊರ ರಾಜ್ಯಗಳಿಗೆ, ದೂರದ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ. ಅವರ ಕುಟುಂಬಕ್ಕೆ ಭದ್ರತೆ ಇಲ್ಲದಂತಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಜನಪ್ರತಿನಿಧಿಗಳು ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಹಾಗೂ ಉದ್ಯೋಗದ ಭದ್ರತೆ ನೀಡಬೇಕು.

ಖಾಲಿ ಇರುವ 235 ಹುದ್ದೆಗಳ ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಸ್ಥಳಿಯ ನಿರುದ್ಯೋಗ ಯುವಕರಿಗೆ ಮೊದಲ ಆಧ್ಯತೆ ನೀಡಬೇಕು.ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಾಗೂ ನಡೆಸುತ್ತಿರುವ ಇಲಾಖೆಗಳ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಉದ್ಯೋಗ ಹರಸಿ ಗುಳೆ ಹೊಗುವುದನ್ನು ತಪ್ಪಿಸಬೇಕು. ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸರಿಯಾದ ದಾಸ್ಥಾನು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ ಇದರ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳಬೇಕು. ವಿಜಯನಗರ ಜಿಲ್ಲಾ ಆಸ್ಪತ್ರೆಯನ್ನು300 ಹಾಸಿಗೆಯಿಂದ 400 ಹಾಸಿಗೆಗೆ ಪರಿವರ್ತಿಸಬೇಕು.

ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಬೇಕು. ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಡಾ. ಪುನೀತ್ ರಾಜಕುಮಾರ್‌ ಅವರ ಹೆಸರಿನಲ್ಲಿ ಸ್ಥಾಪನೆ ಮಾಡಬೇಕು. 100 ಹಾಸಿಗೆ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ, ಈ.ಸಿ.ಜಿ., ಕ್ಯಾನ್ಸರ್‌ನಂತಹ ಪರೀಕ್ಷೆ ಮಾಡುವ ಇತರ ಪರಿಕರಗಳು ಹಾಳಾಗಿವೆ. ಕೂಡಲೆ ಹೊಸ ಪರಿಕರಗಳನ್ನು ಒದಗಿಸಬೇಕು. ವೈದ್ಯರು ಸರಿಯಾದ ಸಮಯಕ್ಕೆ ಬಾರದೆ ರೋಗಿಗಳಿಗೆ ತೊಂದರೆಯಾಗಿದೆ. ಕೂಡಲೆ ಕ್ರಮವಹಿಸಬೇಕು. 100 ಹಾಸಿಗೆ ಆಸ್ಪತ್ರೆಯಲ್ಲಿ ಸ್ವಚ್ಛತೆಯ ಕೊರತೆ ಕಾಣುತ್ತಿದ್ದು, ಸ್ವಚ್ಚತೆ ಕಡೆ ಗಮನ ಹರಿಸಬೇಕು. ತುರ್ತು ಸೇವಾ ಕೊಠಡಿಗೆ ಬರುವ ಹಾದಿಯು ಹದಗೆಟ್ಟಿದ್ದು, ವೀಲ್‌ಚೇರ್, ಸ್ಟ್ರಕ್ಚರ್ ತೆಗೆದುಕೊಂಡು ಹೋಗಲು ಸಿಬ್ಬಂದಿಗೆ ತೊಂದರೆ ಆಗುತ್ತಿದೆ. ಈ ಕುರಿತು ಕೂಡಲೇ ಕ್ರಮ ವಹಿಸಬೇಕು ಎಂದು ಡಿ.ವೈ.ಎಫ್.ಐ. ಜಿಲ್ಲಾಧ್ಯಕ್ಷ ವಿ. ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷ ಬಂಡೆ ತಿರುಕಪ್ಪ, ಮುಖಂಡರಾದ ಎಂ. ಗೋಪಾಲ್, ಅಲ್ತಾಫ್, ಹನುಮ ನಾಯಕ, ಕೆ. ಪವನ್ ಕುಮಾರ್, ನಿಖಿಲ್, ರಾಮಾಂಜಿನಿ ಸೇರಿದಂತೆ ಇತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.