ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಎಪಿಸಿಎಂಎಸ್ ಕಟ್ಟಡದಲ್ಲಿ ಮದ್ಯದಂಗಡಿ ತೆರೆಯಲು ತಯಾರಿ ನಡೆಸುತ್ತಿರುವ ಕುರಿತು ಬೈಪಾಸ್ ರಸ್ತೆ ನಿವಾಸಿಗಳು, ಸ್ತ್ರೀಶಕ್ತಿ ಸಂಘಟನೆ, ಮಹಿಳೆಯರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.ಈ ಕುರಿತು ಸ್ತ್ರೀಶಕ್ತಿ ಸಂಘಟನೆ ಮತ್ತು ಮಹಿಳೆಯರ ಪರವಾಗಿ ಪತ್ರಿಕಾ ಹೇಳಿಕೆ ನೀಡಿದ ಜಿ.ಡಿ.ದಿವ್ಯ, ಮೈತ್ರಿ, ರೇಣುಕಾ, ಲಾವಣ್ಯ, ಬೈಪಾಸ್ ರಸ್ತೆಯಲ್ಲಿ ಮದ್ಯದಂಗಡಿ ತೆರೆದರೆ ಅಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಆಗದಂತ ವಾತಾವರಣ ನಿರ್ಮಾಣವಾಗುತ್ತದೆ. ಇದು ಸಾರ್ವಜನಿಕರು ಓಡಾಡುವ ಸ್ಥಳವಾಗಿದೆ. ಮದ್ಯದಂಗಡಿ ತೆರಯಬೇಕಾದರೆ ಸರ್ಕಾರ, ಸಂಬಂಧಪಟ್ಟ ಗ್ರಾ.ಪಂ.ನವರು ರಸ್ತೆಯಿಂದ 220 ಮೀಟರ್ ದೂರದಲ್ಲಿ ಮದ್ಯದಂಗಡಿ ತೆರೆಯಲು ಅವಾಕಾಶ ನೀಡುತ್ತದೆ. ಆದರೆ ಇಲ್ಲಿ ರಸ್ತೆಯಿಂದ ಕೇವಲ 166 ಮೀಟರ್ ದೂರದಲ್ಲಿ ಮದ್ಯದಂಗಡಿ ತೆರೆಯಲು ಸಂಬಂಧಪಟ್ಟ ಗ್ರಾ.ಪಂ. ಸ್ಥಳ ಪರಿಶೀಲಿಸದೆ ಎನ್ಒಸಿ ಕೊಟ್ಟಿದೆ. ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ ಎಂದು ಆರೋಪಿಸಿದ ಮಹಿಳೆಯರು, ಇತ್ತೀಚೆಗೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಗ್ರಾ.ಪಂ.ಗೆ ದೂರು ನೀಡಿದ್ದೇವೆ. ಹೀಗಿದ್ದರೂ ಅವಕಾಶ ಕೊಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎನ್ಒಸಿಯನ್ನು ರದ್ದುಗೊಳಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಮಹಿಳೆಯರು, ಸ್ತ್ರೀಶಕ್ತಿ ಸಂಘಟನೆ ಮತ್ತು ಸಾರ್ವಜನಿಕರು ಪ್ರತಿಭಟನೆ ಮೂಲಕ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.