ಸಾರಾಂಶ
ಬ್ಯಾಡಗಿ: ನನೆಗುದಿಗೆ ಬಿದ್ದಿರುವ ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಅಂತಿಮ ಮೊಳೆ ಹೊಡೆಯುವ ನಿಟ್ಟಿನಲ್ಲಿ ಜೂ. 5ರಂದು ಪಟ್ಟಣದ ಪಾಂಡುರಗ ಚಿತ್ರಮಂದಿರ ಹಾಗೂ ಹಳೇಪುರಸಭೆ ಎದುರು ತಗ್ಗು ತೆಗೆದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿ, ಮುಖ್ಯರಸ್ತೆಯಲ್ಲಿನ ಗಜಾನನ ಬ್ಯಾಂಕ್ ಎದುರು ಅನಿರ್ದಿಷ್ಟಾವಧಿವರೆಗೆ ಬೃಹತ್ ಪ್ರತಿಭಟನೆ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಅಗಲೀಕರಣ ಹೋರಾಟ ಬೃಹತ್ ಹೋರಾಟ ಹಮ್ಮಿಕೊಳ್ಳುವ ನಿಮಿತ್ತ ಸೂಕ್ತ ರೂಪುರೇಷೆಗಳನ್ನು ತಯಾರು ಮಾಡಲು ಭಾನುವಾರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪೂರ್ವಬಾವಿ ಸಭೆಯಲ್ಲಿ ಎಲ್ಲ ಸಂಘ- ಸಂಸ್ಥೆಗಳು ಸಾರ್ವಜನಿಕರು ಒಮ್ಮತದಿಂದ ತೀರ್ಮಾನಿಸಿ ಹೋರಾಟ ಯಶಸ್ವಿಯಾಗುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಿದರು.ಅಭಿವೃದ್ದಿಗೆ ಮೊದಲ ಆದ್ಯತೆ: ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಊರ ಅಭಿವೃದ್ಧಿಗೆ ಸಹಕರಿಸಿ ಎಂದು ಮುಖ್ಯರಸ್ತೆಯಲ್ಲಿನ ವರ್ತಕರಿಗೆ ಗೋಗರೆದಿದ್ದು ಸಾಕು. ಹೋರಾಟಗಾರರು ತಮ್ಮ ಮನೆಯ ಸಲುವಾಗಿ ಹೋರಾಟ ನಡೆಸುತ್ತಿಲ್ಲ. ಸಾರ್ವಜನಿಕರ ಹಿತಾಸಕ್ತಿಗಾಗಿ ಅಗಲೀಕರಣ ಮಾಡಿ ಎನ್ನುತ್ತಿದ್ದಾರೆ. ಮುಖ್ಯ ರಸ್ತೆಯಲ್ಲಿನ ಕೆಲವರಿಗೆ ಮಾತಿನ ಪೆಟ್ಟು ನಡೆಯಲ್ಲ. ಆದ್ದರಿಂದ ನಾನು ಅಧ್ಯಕ್ಷನಾಗಿ ಇರುವರೆರೆಗೂ ಮುಖ್ಯರಸ್ತೆಯಲ್ಲಿನ ಜನರಿಗೆ ಮೂಲ ಸೌಲಭ್ಯ ಕಲ್ಪಿಸಲ್ಲ. ನನ್ನ ರಾಜಕೀಯ ಭವಿಷ್ಯ ಏನಾದರೂ ಸರಿ ಎಂದು ಆಕ್ರೋಶ ಹೊರ ಹಾಕಿದರು.ಪಕ್ಷಾತೀತ ಹೋರಾಟ: ಹಾವೆಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಅಧಿಕಾರಿಗಳು ಬೇಜವಾಬ್ದಾರಿಯಿಂದಾಗಿ ಹಾಗೂ ಮಾರುಕಟ್ಟೆ ವರ್ತಕರು ಸೇರಿದಂತೆ ಹಲವರು ನಮಗ್ಯಾಕೆ ಬೇಕು? ಹೋರಾಟ ಎಂದು ಹಿಂದೆ ಸರಿದಿದ್ದರ ಪರಿಣಾಮ ಸತತ 14 ವರ್ಷಗಳ ಹೋರಾಟ ನಡೆಸಿದರೂ ನಮ್ಮ ಹೋರಾಟಕ್ಕೆ ಹಿನ್ನಡೆಯಾಗಿದೆ. ಆದ್ದರಿಂದ ಈ ಬಾರಿ ಒಂದು ತಾರ್ತಿಕ ಅಂತ್ಯ ಕಾಣುವರರೆಗೂ ಪಕ್ಷಾತೀತವಾಗಿ ನಮ್ಮ ಅಹೋರಾತ್ರಿ ಧರಣಿ ಮಾಡೋಣ ಎಂದರು.ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸದಸ್ಯ ಬಸವರಾಜ ಛತ್ರದ, ಎಂ.ಎಸ್. ಪಾಟೀಲ, ನಿಂಗಪ್ಪ ಬಟ್ಟಲಕಟ್ಟಿ, ಬಸವರಾಜ ಸಂಕಣ್ಣನವರ, ಸುರೇಶ ಮೇಲಗಿರಿ, ಸಂಜೀವ ಮಡಿವಾಳರ, ಚಿಕ್ಕಪ್ಪ ಛತ್ರದ, ಈಶ್ವರ ಮಠದ, ಶಿವು ಕಲ್ಲಾಪುರ, ಜಗದೀಶ ಪಾಟೀಲ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಸದಸ್ಯರು ಭಾಗವಹಿಸಿದ್ದರು.ಅಂತಿಮ ಹೋರಾಟಕ್ಕೆ ಸಜ್ಜು:
ರಸ್ತೆ ಅಗಲೀಕರಣ ವಿಷಯದಲ್ಲಿ ಮುಖ್ಯರಸ್ತೆಯಲ್ಲಿನ ಕೆಲವರು ಡಬಲ್ ಗೇಮ್ ಆಡಿದ್ದಾರೆ. ಶಾಸಕರ ಜತೆ ರಾಜೀ ಸಂಧಾನ ಮಾಡಿಕೊಂಡು ಅವರಿಗೂ ಮೋಸ ಮಾಡಿದ್ದಾರೆ. ಅದ್ದರಿಂದ ಇನ್ನೇನಿದ್ದರೂ ಹೋರಾಟ ಮಾತ್ರ ಎಂದು ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ತಿಳಿಸಿದರು.