ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಪ್ರತಿಭಟನೆಯ ಸ್ವಾಗತ

| Published : Sep 05 2025, 01:00 AM IST

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಪ್ರತಿಭಟನೆಯ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಪಂಚಾಯಿತಿಯ ನೂತನ ಮುಖ್ಯಾಧಿಕಾರಿಯಾಗಿ ಮಂಜುನಾಥ್ ನೇಮಕ ಪಟ್ಟಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬಿಗಿ ಬಂದೋಬಸ್ತಿನಲ್ಲಿ ಅವರು ಅಧಿಕಾರಿ ಸ್ವೀಕರಿಸಿದ ಘಟನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಹುಳಿಯಾರು

ಪಟ್ಟಣ ಪಂಚಾಯಿತಿಯ ನೂತನ ಮುಖ್ಯಾಧಿಕಾರಿಯಾಗಿ ಮಂಜುನಾಥ್ ನೇಮಕ ಪಟ್ಟಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬಿಗಿ ಬಂದೋಬಸ್ತಿನಲ್ಲಿ ಅವರು ಅಧಿಕಾರಿ ಸ್ವೀಕರಿಸಿದ ಘಟನೆ ನಡೆಸಿದೆ.

ಕೌನ್ಸಿಲರ್‌ಗಳು ಮತ್ತು ಸಾರ್ವಜನಿಕರ ಪರ-ವಿರೋಧದ ಸಂಘರ್ಷದ ನಡುವೆ, ಕೊನೆಗೂ ಮಂಜುನಾಥ್ ಅವರು ಪೊಲೀಸ್ ರಕ್ಷಣೆಯಲ್ಲಿ ಅಧಿಕಾರ ವಹಿಸಿಕೊಳ್ಳುವಲ್ಲಿ ಯಶಸ್ವಿಯಾದರು.ಕಳೆದ ಮೂರು ವರ್ಷಗಳ ಹಿಂದೆ ಪಟ್ಟಣ ಪಂಚಾಯತಿಯಲ್ಲಿ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ಸಂದರ್ಬದಲ್ಲಿ ಸಾಕಷ್ಟು ವಿವಾದಗಳಿಗೆ ಈಡಾಗಿದ್ದರು. ಹೀಗಾಗಿ ಅವರ ನೇಮಕದ ವಿಷಯ ತಿಳಿಯುತ್ತಿದ್ದಂತೆ ಹಾಲಿ ಸದಸ್ಯರು ಹಾಗೂ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿ ಬಾಗಿಲಿಗೆ ಅಡ್ಡವಾಗಿ ಕುಳಿತು ಗೋ ಬ್ಯಾಕ್ ಮಂಜುನಾಥ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ, ಮಂಜುನಾಥ್ ಅವರಿಗೆ ಬೆಂಬಲ ಸೂಚಿಸಿದ ಇನ್ನೊಂದು ಗುಂಪು ಸಹ ಸ್ಥಳದಲ್ಲಿ ಸೇರಿತ್ತು. ಈ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಮತ್ತು ವಾಗ್ವಾದ ನಡೆದು ಪರಿಸ್ಥಿತಿ ಬಿಗಡಾಯಿಸಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಿ, ಪರಿಸ್ಥಿತಿ ಶಾಂತಿಯುತವಾಗಿರುವಂತೆ ನೋಡಿಕೊಂಡರು. ಪರ-ವಿರೋಧದ ಸಂಘರ್ಷದ ನಡುವೆ, ಕೊನೆಗೂ ಮಂಜುನಾಥ್ ಅವರು ಪೊಲೀಸ್ ರಕ್ಷಣೆಯಲ್ಲಿ ಅಧಿಕಾರ ವಹಿಸಿಕೊಳ್ಳುವಲ್ಲಿ ಯಶಸ್ವಿಯಾದರು ಆದರೆ ಪಟ್ಟಣ ಪಂಚಾಯತಿಯ ದಾಖಲಾತಿ ಪುಸ್ತಕಕ್ಕೆ ಸಹಿ ಹಾಕಲು ಮುಂದಾದಾಗ ಕೌನ್ಸಿಲರ್‌ಗಳು ಅಡ್ಡಿಪಡಿಸಿದಾಗ ಗೋಡೆಯ ಮೇಲೆ ಸಹಿ ಹಾಕಿದ ಪ್ರಸಂಗ ನಡೆಯಿತು.