ಗಜೇಂದ್ರಗಡ: ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಸಕಾಲದಲ್ಲಿ ಸಿಗಲು ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಶ್ರಮ ಶ್ಲಾಘನೀಯ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಪಟ್ಟಣ ಸಮೀಪದ ಕೊಡಗಾನೂರ ಗ್ರಾಮದಲ್ಲಿ ಆಯುಷ್ಮಾನ್ ಯೋಜನೆಯ ₹೬೧ ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಆಯುಷ್ಮಾನ್ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ಬಡ ಜನರು ಸರ್ಕಾರಿ ಆಸ್ಪತ್ರೆ ಬಂದಾಗ ಅವರಿಗೆ ಸೂಕ್ತ ಹಾಗೂ ಅಗತ್ಯ ಚಿಕಿತ್ಸೆ ಸಿಗಬೇಕು. ಈ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ಶ್ರಮಿಸಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗುವಂತಾಗುವುದು. ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.

ಆಯುಷ್ಮಾನ್ ಆರೋಗ್ಯ ಮಂದಿರದ ಮೂಲಕ ಸಾಮಾನ್ಯ ತಪಾಸಣೆ, ತಾಯಿ, ಮಗು ಆರೈಕೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಸೇವೆಗಳು ಗ್ರಾಮದಲ್ಲೇ ಲಭ್ಯವಾಗಲಿವೆ ಹಾಗೂ ಗ್ರಾಮಸ್ಥರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿ, ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದರು.ಡಾ. ಬಿ.ಎಸ್. ಭಜಂತ್ರಿ ಮಾತನಾಡಿ, ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ನನ್ನ ಆಶಯ. ಸೇವೆ ಸಲ್ಲಿಸಿದ ಕಡೆ ರೋಗಿಗಳಿಗೆ ಕೈಲಾದಷ್ಟು ಉತ್ತಮ ಸೇವೆ ಮಾಡಿದ್ದೇವೆ. ಇಲ್ಲೂ ಉತ್ತಮ ಸೇವೆ ದೊರಕಿಸಲು ಪ್ರಯತ್ನ ಮಾಡುತ್ತೇವೆ. ಯಾವುದೇ ಸಮಸ್ಯೆಗಳಿದ್ದರೂ ರೋಗಿಗಳು ನೇರ ಸಂಪರ್ಕ ಮಾಡಬಹುದು ಎಂದರು.ಈ ವೇಳೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ, ಡಾ. ಕೆ.ಎ. ಹಾದಿಮನಿ, ಡಾ. ಚಿದಾನಂದ ಮುಂಡಾಸದ, ಪಡಿಯಪ್ಪ ಮಾದರ, ಸುಭಾಸ ಮ್ಯಾಗೇರಿ, ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ವಿ.ಬಿ. ಸೋಮನಕಟ್ಟಿಮಠ, ಚಂಬಣ್ಣ ಚವಡಿ, ಎಚ್.ಎಸ್. ಸೊಂಪೂರ, ಹನುಮಂತ ರಾಮಜಿ, ಕೊಟ್ರೇಶ್ ಹೂಗಾರ, ವೀರಯ್ಯ ಬಾಳಿಕಾಯಿಮಠ, ಪರಶುರಾಮ ಚಿಟಗಿ, ಬಾಲಚಂದ್ರ ವಾಲ್ಮೀಕಿ, ಶ್ರೀಧರ ಬಿದರಳ್ಳಿ, ಸಿದ್ದು ಗೊಂಗಡಶೆಟ್ಟಿಮಠ, ಪ್ರಭು ಹಿರೇಮಠ, ನಾಗಯ್ಯ ಹಿರೇಮಠ, ಕುಮಾರ ರಾಠೋಡ, ರಾಜು ನದಾಫ ಸೇರಿ ಇತರರು ಇದ್ದರು.