ಮಂಗಳೂರು: ಸಾಧಕರನ್ನು ಎಲ್ಲರೂ ಗುರುತಿಸುತ್ತಾರೆ. ಆದರೆ ಅಶಕ್ತರಿಗೆ ಸೌಲಭ್ಯ ಕೊಡುವ ಕೆಲಸ ಎಲ್ಲರೂ ಮಾಡುವುದಿಲ್ಲ. ವಿಕಲಾಂಗರಿಗೆ ಕೃತಕ ಕೈಕಾಲು ನೀಡುವುದು ಅತೀ ದೊಡ್ಡ ಮಾನವೀಯ ಕಾರ್ಯ ಎಂದು ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಝಕಾರಿಯ ಜೋಕಟ್ಟೆ ಹೇಳಿದರು.

ಅವರು ನಗರದ ರೋಶನಿ ನಿಲಯದಲ್ಲಿ ಶನಿವಾರ ಕರ್ನಾಟಕ ಅನಿವಾಸಿ ಭಾರತೀಯ ಒಕ್ಕೂಟ- ಜಿದ್ದಾ ವತಿಯಿಂದ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್, ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶಿನಿ ನಿಲಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕೃತಕ ಕೈಕಾಲು ಜೋಡಣಾ ಶಿಬಿರ ಹಾಗೂ ಸವಲತ್ತುಗಳ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕೃತಕ ಕೈಕಾಲು ಜೋಡಣೆಯಿಂದ ವಿಕಲಾಂಗರು ತಮ್ಮ ದೈನಂದಿನ ಕೆಲಸ-ಕಾರ್ಯವನ್ನು ಸುಲಭವಾಗಿ ಮಾಡುವ ಜತೆಗೆ, ದುಡಿಯಲು ಶಕ್ತಿ ನೀಡಲಿದೆ ಎಂದರು.ಒಕ್ಕೂಟದ ಅಧ್ಯಕ್ಷ ಹಬೀಬ್ ಆರ್.ಅಹ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನಿವಾಸಿ ಭಾರತೀಯರ ನೆರವಿನಿಂದ ಕೆಲವು ವರ್ಷಗಳಿಂದ ಇಂತಹ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಮುಂದೆಯೂ ಅಶಕ್ತರ ಕಣ್ಣೀರೊರೆಸುವ ಕಾರ್ಯ ಮಾಡಲಿದ್ದೇವೆ ಎಂದರು.ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ, ಜಮೀಯತುಲ್ ಫಲಾಹ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ., ರೋಶನಿ ನಿಲಯದ ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಜೆಸಿಂತಾ ಡಿಸೋಜ, ಪ್ರಾಧ್ಯಾಪಕ ಡಾ.ಸೆಬಾಸ್ಟಿಯನ್, ಎಂ ಫ್ರೆಂಡ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹನೀಫ್ ಗೋಳ್ತಮಜಲು, ಶ್ರೀನಿವಾಸ ಆಸ್ಪತ್ರೆಯ ಮೂಳೆತಜ್ಞ ಡಾ.ಶಶಿರಾಜ್ ಶೆಟ್ಟಿ, ಜನಪ್ರಿಯ ಆಸ್ಪತ್ರೆಯ ಮೂಳೆ ತಜ್ಞ ಡಾ.ಶಾಹರುಕ್ ಅಬ್ದುಲ್ಲಾ, ಸಮಾಜಸೇವಕ ಅರ್ಜುನ್ ಭಂಡಾರ್ಕರ್, ಒಕ್ಕೂಟದ ಮಾಜಿ ಅಧ್ಯಕ್ಷ ಮೊಹಮ್ಮದ್ ಮನ್ಸೂರ್ ಜಿದ್ದಾ, ಮಾಜಿ ಕಾರ್ಯದರ್ಶಿ ಪೀಟರ್ ರೊನಾಲ್ಡ್ ಮಸ್ಕರೇನಸ್, ಯಶ್ವಂತ್ ಅಮೀನ್ ಮತ್ತಿತರರು ಇದ್ದರು.

ರಫೀಕ್ ಮಾಸ್ಟರ್ ಪ್ರೇರಣಾ ತರಗತಿ ನಡೆಸಿಕೊಟ್ಟರು. ಎರಡು ದಿನಗಳ ಕಾರ್ಯಕ್ರಮದಲ್ಲಿ ೧೦೫ ಮಂದಿಗೆ ಜೈಪುರ ಬ್ರ್ಯಾಂಡಿನ ಕೃತಕ ಕೈಕಾಲುಗಳನ್ನು ತಯಾರಿಸಿ ಜೋಡಿಸಿ ನೀಡುವ ಜತೆಗೆ ಗಾಲಿಕುರ್ಚಿ, ವಾಕರ್, ವಾಟರ್ ಬೆಡ್ ಮತ್ತಿತರ ಸಲಕರಣೆ ವಿತರಿಸಲಾಗುತ್ತಿದೆ.

ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಜಾಹ್ ಮೊಹಮ್ಮದ್ ಸ್ವಾಗತಿಸಿದರು. ಚೇತನ್ ಶೆಟ್ಟಿ ನಿರೂಪಿಸಿದರು.