ಸಾರಾಂಶ
ಬಂಕಾಪುರ:ಡಿಜೆ ಬ್ಯಾನ್ ಹಿಂದೂಗಳಿಗೆ ಮಾತ್ರ ಮಾಡುತ್ತಿದ್ದಾರೆ. ಇದರ ಹಿಂದೆ ರಾಜ್ಯ ಸರ್ಕಾರದ ಪಿತೂರಿಯಿದೆ. ಹುಬ್ಬಳ್ಳಿ, ಬೆಂಗಳೂರಿನ ಮಸೀದಿಗಳಲ್ಲಿ ಬೆಳಗ್ಗೆ 5 ಗಂಟೆಗೆ ಕಾರ್ಯಕ್ರಮ ಮಾಡುತ್ತಾರೆ. ಈ ರೀತಿಯ ತಾರತಮ್ಯ ಮಾಡುತ್ತಿರುವ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಬಗ್ಗೆ ಜನಾಕ್ರೋಶವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು.ಸರ್ಕಾರದ ಒತ್ತಡಕ್ಕೆ ಮಣಿದು ಗಣಪತಿ ವಿಸರ್ಜನೆ ವಿಳಂಬವಾಯಿತು. ಡಿಜೆ ಬ್ಯಾನ್ ಮಾಡಲು ರಾಜ್ಯ ಸರ್ಕಾರದ ಪಿತೂರಿಯಿದೆ. ಡಿಜೆ ನಿಷೇಧ ಆದೇಶ ಹಿಂದೂಗಳಿಗೆ ಮಾತ್ರ ಅನ್ವಯವಾಗುತ್ತದೆಯಾ? ಎಂದು ಪ್ರಶ್ನಿಸಿದ ಅವರು, ಇವರ ಯಡವಟ್ಟಿನಿಂದ ಹೀಗಾಗಿದೆ. ಮುಂದಿನ ಸಲ ಹೀಗೆ ಮಾಡಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದರು.
ಆರ್ಎಸ್ಎಸ್ ಕಾರ್ಯಕ್ರಮಗಳಿಗೆ ಕಡಿವಾಣ ವಿಚಾರವಾಗಿ ಮಾತನಾಡಿದ ಅವರು, ಇಂತಹ ಪತ್ರಗಳು ಬಂದು ಹೋಗಿವೆ. ಪ್ರಿಯಾಂಕ್ ಖರ್ಗೆ ಅವರಿಗೆ ಇದು ಗೊತ್ತಿಲ್ಲ. ರಾಹುಲ್ ಗಾಂಧಿ ಅವರ ಪಕ್ಷದ ಹಿರಿಯರಾದ ನರಸಿಂಹರಾವ್ ಅವರು ಕಡಿವಾಣ ಹಾಕಲು ಮುಂದಾಗಿದ್ದರು. ದೇಶದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿದೆ. ಒಂದು ವೇಳೆ ಬ್ಯಾನ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದರು.ಕುಕ್ಕರ್ ಬಾಂಬ್, ತಲ್ವಾರ ಹಿಡಿದವರು ಇವರಿಗೆ ಬ್ರದರ್ಸ್. ತಲ್ವಾರ ತಗೊಂಡು ಹಿಡಿದು ತಿರುಗಾಡುವವರನ್ನು ಬಂಧಿಸಿ ನೋಡೋಣ. ಭಾರತದ ತಾಲಿಬಾನಿಗಳು ಆರ್ಎಸ್ಎಸ್ನವರು ಎಂದು ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ, ಆರ್ಎಸ್ಎಸ್ಗೆ ಬೈದ್ರೆ ಮಂತ್ರಿ ಮಾಡ್ತಾರೆ ಎಂದು ಹರಿಪ್ರಸಾದ್ ತಿಳಿದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಚಡ್ಡಿ ಹಾಕ್ಕೊಂಡಿದ್ದನ್ನು ತಿಳಿಯಬೇಕು ಎಂದು ವ್ಯಂಗ್ಯವಾಡಿದರು.