ಕಟ್ಟಡ ಕಾರ್ಮಿಕರು ಮಾತ್ರವಲ್ಲದೆ, ಸಿವಿಲ್ ಇಂಜಿನಿಯರ್ ಗಳು, ಕಾಂಟ್ರ್ಯಾಕ್ಟರ್ ಗಳು, ಗಾರೆ ಕೆಲಸದವರು, ಟೈಲ್ಸ್ ಕೆಲಸಗಾರರು, ಮರಕೆಲಸದವರು, ಪ್ಲಂಬರ್ ಗಳು, ಎಲೆಕ್ಟ್ರಿಷಿಯನ್ ಗಳು ಸೇರಿ ಅನೇಕ ವೃತ್ತಿಗಳಲ್ಲಿ ತೊಡಗಿರುವ ಸಾವಿರಾರು ಜನರು ಜೀವನ ಸಾಗಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಚಟುವಟಿಕೆಗಳು ಕಡಿಮೆಯಾಗಿರುವುದರಿಂದ ಕಟ್ಟಡ ಸಾಮಗ್ರಿಗಳ ವ್ಯಾಪಾರಸ್ಥರಿಗೂ ವ್ಯಾಪಾರದಲ್ಲಿ ಹಿನ್ನಡೆ ಉಂಟಾಗಿ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ .
ಹಾಸನ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಕಟ್ಟಡ ನಿರ್ಮಾಣ ವಲಯ ನಿಯಮಾವಳಿಗಳ ಸಡಿಲಿಕೆಗಾಗಿ ಸಾರ್ವಜನಿಕರು ಗಂಭೀರವಾಗಿ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರಸಭೆ ಮಾಜಿ ಸದಸ್ಯ ಎಚ್.ಎಂ. ಸುರೇಶ್ ಕುಮಾರ್ ಮಾತನಾಡಿ, ಪ್ರಸ್ತುತ ಕಟ್ಟಡ ಪರವಾನಗಿ ಪಡೆಯಲು ವಿಧಿಸಿರುವ ಕಠಿಣ ನಿಯಮಗಳು, ವಿಶೇಷವಾಗಿ ಸೆಟ್ಬ್ಯಾಕ್ ನಿಯಮಾವಳಿಗಳು, ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಭಾರೀ ತೊಂದರೆ ಉಂಟುಮಾಡುತ್ತಿವೆ. ಜೀವನಪೂರ್ತಿ ದುಡಿದು ಸಂಗ್ರಹಿಸಿದ ಹಣದಿಂದ ತಮ್ಮ ಕನಸಿನ ಮನೆಯನ್ನು ಕಟ್ಟಲು ಮುಂದಾಗುವ ಜನರಿಗೆ ಈ ನಿಯಮಗಳು ಅಡ್ಡಿಯಾಗುತ್ತಿದ್ದು, ಹಲವರ ಕನಸುಗಳು ಅರ್ಧದಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಕಟ್ಟಡ ನಿರ್ಮಾಣ ಕ್ಷೇತ್ರವು ಕುಂಠಿತಗೊಂಡ ಪರಿಣಾಮ ದಿನಗೂಲಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಕಟ್ಟಡ ಕಾರ್ಮಿಕರು ಮಾತ್ರವಲ್ಲದೆ, ಸಿವಿಲ್ ಇಂಜಿನಿಯರ್ ಗಳು, ಕಾಂಟ್ರ್ಯಾಕ್ಟರ್ ಗಳು, ಗಾರೆ ಕೆಲಸದವರು, ಟೈಲ್ಸ್ ಕೆಲಸಗಾರರು, ಮರಕೆಲಸದವರು, ಪ್ಲಂಬರ್ ಗಳು, ಎಲೆಕ್ಟ್ರಿಷಿಯನ್ ಗಳು ಸೇರಿ ಅನೇಕ ವೃತ್ತಿಗಳಲ್ಲಿ ತೊಡಗಿರುವ ಸಾವಿರಾರು ಜನರು ಜೀವನ ಸಾಗಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಚಟುವಟಿಕೆಗಳು ಕಡಿಮೆಯಾಗಿರುವುದರಿಂದ ಕಟ್ಟಡ ಸಾಮಗ್ರಿಗಳ ವ್ಯಾಪಾರಸ್ಥರಿಗೂ ವ್ಯಾಪಾರದಲ್ಲಿ ಹಿನ್ನಡೆ ಉಂಟಾಗಿ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ ಎಂದು ದೂರಿದರು.ಸಾಮಾನ್ಯ ಜನರು ಮನೆ ನಿರ್ಮಾಣ ಮಾಡುವುದೇ ಕಷ್ಟಕರವಾಗಿರುವ ಸಂದರ್ಭದಲ್ಲಿ, ಇಂತಹ ಕಠಿಣ ನಿಯಮಗಳು ಇನ್ನಷ್ಟು ಒತ್ತಡ ಉಂಟುಮಾಡುತ್ತಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಸಡಿಲಿಕೆಗಳನ್ನು ನೀಡಿರುವಂತೆ, ಅದೇ ಮಾದರಿಯನ್ನು ಹಾಸನ ಮಹಾನಗರ ಪಾಲಿಕೆಯಲ್ಲಿ ಕೂಡ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುನೀಲ್, ಕೃಷ್ಣಕುಮಾರ್, ಮಳಲಿ ಶರತ್, ಸತೀಶ್, ಸಿ.ಕೆ. ಕಿರಣ್ ಕುಮಾರ್, ಚಿಕ್ಕೇಗೌಡ ಇತರರು ಉಪಸ್ಥಿತರಿದ್ದರು.