ಮೇ 30 ವರೆಗೆ ನಡೆಯಬೇಕಿದ್ದ ಖರೀದಿ ಕೇಂದ್ರ ಮೇ 15ಕ್ಕೆ ಸ್ಥಗಿತ

ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಿಲ್ಲೆಯಲ್ಲಿ ಇನ್ನೂ 52 ಸಾವಿರ ಕ್ವಿಂಟಾಲ್‌ ಬೆಂಬಲ ಬೆಲೆಯ ರಾಗಿ ಖರೀದಿ ಬಾಕಿ ಇರುವಾಗಲೇ ಹಾಗೂ ನಿಗದಿತ ಅವಧಿಗಿಂತ ಮೊದಲೇ ಖರೀದಿ ಕೇಂದ್ರಗಳನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಬಂದ್ ಮಾಡಿದೆ.ಕಳೆದ ಫೆ.16ರಿಂದ ಜಿಲ್ಲೆಯಲ್ಲಿ ರಾಗಿ ಖರೀದಿಯನ್ನು ಆರಂಭಿಸಿದ್ದ ನಿಗಮ ಮೇ 30 ವರೆಗೆ ನಡೆಯಬೇಕಾಗಿದ್ದ ಖರೀದಿ ಕೇಂದ್ರ ಗಳನ್ನು ಇದೀಗ ಏಕಾಏಕಿ ಅಂದರೆ ಮೇ 15ಕ್ಕೆ ಮುಚ್ಚಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಏಳು ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿಗೆ ಅವಕಾಶ ನೀಡಲಾಗಿತ್ತು. ಒಟ್ಟು 5.32 ಲಕ್ಷ ಕ್ವಿಂಟಾಲ್‌ ರಾಗಿ ಖರೀದಿ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಈ 52 ಸಾವಿರ ಕ್ವಿಂಟಾಲ್‌ ರಾಗಿ ಖರೀದಿ ಬಾಕಿ ಇರುವಾಗಲೇ ಅಧಿಕೃತವಾಗಿ ರಾಗಿ ಖರೀದಿಗೆ ಕೇಂದ್ರಗಳನ್ನು ಮುಚ್ಚಲಾಗಿದೆ. ಇದರಿಂದ ರಾಗಿ ಬೆಳೆದು ಮೇ ಕೊನೆ ವಾರದಲ್ಲಿ ಬೆಂಬಲ ಬೆಲೆಗೆ ಮಾರಾಟ ಮಾಡುವವರಿದ್ದ ರೈತರು ಈ ನಿರ್ಧಾರದಿಂದ ಕಂಗಾಲು ಆಗಿದ್ದಾರೆ.2025-26ನೇ ಸಾಲಿನ ಮುಂಗಾರು ಅವಧಿಯಲ್ಲಿ ರಾಗಿ ಬೆಳೆದ ರೈತರು ಎಫ್‌ಐಡಿ ಆಧಾರಿಸಿ 20,401 ರೈತರು ಒಟ್ಟು 5,32,084 ಕ್ವಿಂಟಾಲ್‌ ರಾಗಿ ಪೂರೈಕೆಗೆ ಎಂದು ನೋಂದಣಿ ಮಾಡಿಕೊಂಡಿದ್ದರು. ಆದರೆ, ಈವರೆಗೆ, 19,249 ರೈತರಿಂದ 4,80,669.50 ಕ್ವಿಂಟಾಲ್‌ ಮಾತ್ರ ರಾಗಿ ಪೂರೈಸಿದ್ದು, ಬಾಕಿ ರೈತರು ಪೂರೈಕೆ ಮಾಡುವ ಮೊದಲೇ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ.ಆರಂಭ ತಡ, ಅವಧಿಗಿಂತ ಮೊದಲೇ ಬಂದ್‌:ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲೆ ರಾಗಿ ಖರೀದಿ ಆರಂಭಿಸಬೇಕಿದ್ದರೂ ಫೆ.16 ರಿಂದ ಜಿಲ್ಲೆಯಲ್ಲಿ ಖರೀದಿ ಆರಂಭಿಸ ಲಾಗಿತ್ತು. ಯುಗಾದಿ, ರಂಜಾನ್‌ ಹಬ್ಬ ಮೊದಲಾದ ಕಾರಣ ನೀಡಿ ಖರೀದಿ ಮಧ್ಯದಲ್ಲಿ ನಿಲ್ಲಿಸಲಾಗಿತ್ತು. ಇದೀಗ ಮೇ 30ರ ವರೆಗೆ ಖರೀದಿಗೆ ಕಾಲಾವಕಾಶ ಇದ್ದರೂ ಕೇಂದ್ರಗಳನ್ನು ಅಧಿಕೃತವಾಗಿ ಮೇ 15ಕ್ಕೆ ಬಂದ್‌ ಮಾಡಲಾಗಿದೆ.-- ಬಾಕ್ಸ್‌--ಹಲವು ಗೊಂದಲದ ನಡುವೆ ರಾಗಿ ಖರೀದಿರಾಗಿ ಖರೀದಿ ಕೇಂದ್ರ ಆರಂಭವಾದಾಗಿನಿಂದಲೂ ಪ್ರತಿ ನಿತ್ಯ ಹಲವು ಗೊಂದಲ, ಸಮಸ್ಯೆ ನಡುವೆಯೇ ಖರೀದಿ ಮಾಡಲಾಗಿದೆ. ಖರೀದಿ ಕೇಂದ್ರದ ಮುಂಭಾಗದಲ್ಲಿ ಭಾರೀ ಸಂಖ್ಯೆ ರೈತರು ಹಗಲು-ರಾತ್ರಿ ಕಾದು ಕುಳಿತು ರಾಗಿ ನೀಡಬೇಕಾಗಿತ್ತು. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ರಾಗಿಯನ್ನು ರೈತರಿಂದ ಪಡೆಯಲಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು. ಈ ವೇಳೆ ಸ್ವತಃ ಜಿಲ್ಲಾಧಿಕಾರಿ ಖರೀದಿ ಕೇಂದ್ರ ಮತ್ತು ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈಗ ನಿಗದಿತ ಅವಧಿಗಿಂತ ಮೊದಲೇ ಖರೀದಿ ಕೇಂದ್ರ ಬಂದ್‌ ಮಾಡಲಾಗಿದೆ. ರೈತರಿಗೆ ಫೋನ್‌ ಕರೆ:ರೈತರು ರಾಗಿ ತೆಗೆದುಕೊಂಡು ಬರದಿರುವ ಬಗ್ಗೆ ದೃಢಪಡಿಸಿಕೊಂಡೇ ಖರೀದಿ ಕೇಂದ್ರ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂಬ ಸಬೂಬು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕುರಿತಂತೆ ರೈತರಿಗೆ ಫೋನ್‌ ಮೂಲಕ ಮೂರ್ನಾಲ್ಕು ಬಾರಿ ಸಂಪರ್ಕಿಸಲಾಗಿದೆ ಎಂದು ಹೇಳಿದ್ದಾರೆ.- ಬಾಕ್ಸ್‌ -ಮೇ ಮೊದಲ ವಾರವೇ ಬಂದ್‌ಜಿಲ್ಲೆಯಲ್ಲಿ ಏಳು ರಾಗಿ ಖರೀದಿ ಕೇಂದ್ರಗಳ ಪೈಕಿ ಕಡೂರಿನ ಒಂದು ಖರೀದಿ ಕೇಂದ್ರ ಹೊರತು ಪಡಿಸಿ ಉಳಿದಂತೆ ಚಿಕ್ಕಮಗಳೂರು, ಬೀರೂರು, ಪಂಚನಹಳ್ಳಿ, ಚಿಕ್ಕಮಗಳೂರು ನಗರ, ತರೀಕೆರೆ ಸೇರಿದಂತೆ ಎಲ್ಲ ಖರೀದಿ ಕೇಂದ್ರಗಳನ್ನು ಮೇ ಮೊದಲ ವಾರದಲ್ಲಿ ಬಂದ್‌ ಮಾಡಲಾಗಿದೆ. ಆದರೆ, ಜಿಲ್ಲಾಧಿಕಾರಿ ಮೇ 15 ವರೆಗೆ ಖರೀದಿ ಕೇಂದ್ರ ನಡೆಸುವುದಾಗಿ ತಿಳಿಸಿದ್ದರು. ಆದರೆ, ವಾಸ್ತವಾಗಿ ಖರೀದಿ ಕೇಂದ್ರಗಳು ಜಿಲ್ಲಾಧಿಕಾರಿ ಆದೇಶಕ್ಕೂ ಮೊದಲೇ ಬಂದ್‌ ಆಗಿದ್ದವು ಎಂಬುದು ಗಮನಿಸಬೇಕಾದ ಅಂಶ. -- ಬಾಕ್ಸ್‌ -- ಜನರಿಗೆ ರಾಗಿ ವಿತರಣೆ ಅದಕ್ಕೆ ಬಂದ್‌ನ್ಯಾಯಬೆಲೆ ಅಂಗಡಿಯಲ್ಲಿ ಮೇ ತಿಂಗಳಿನಲ್ಲಿ ಪಡಿತರದಾರರಿಗೆ ರಾಗಿ ವಿತರಣೆ ಆರಂಭಿಸಲಾಗುತ್ತಿದೆ. ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಣೆಯಾಗುವ ರಾಗಿ ಬೇರೆ ಮಾರ್ಗದಲ್ಲಿ ಮತ್ತೆ ರೈತರಿಂದ ಬೆಂಬಲ ಬೆಲೆ ರಾಗಿ ಖರೀದಿ ಕೇಂದ್ರಕ್ಕೆ ಬರುವ ನಿರೀಕ್ಷೆ ಇದೆ. ಹಾಗಾಗಿ, ನಿಗದಿತ ಅವಧಿಗಿಂತ ಮೊದಲೇ ಮುಚ್ಚಲಾಗುತ್ತಿದೆ ಎಂದು ಕೆಎಫ್‌ಸಿಎಸ್‌ಸಿ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ. ರಾಗಿ ಖರೀದಿ ವಿವರರಾಗಿ ಖರೀದಿ ಬಾಕಿ ಪ್ರಮಾಣ: 51,414.50 ಕ್ವಿಂಟಾಲ್‌

ರಾಗಿ ಖರೀದಿ ಪ್ರಮಾಣ: 480669.50 ಕ್ವಿಂಟಾಲ್‌ಖರೀದಿ ಅಂದಾಜು: 532084.00 ಕ್ವಿಂಟಾಲ್‌ ರಾಗಿ ಪೂರೈಕೆ ನೊಂದಾಯಿತ ರೈತ ಸಂಖ್ಯೆ: 20,401ರಾಗಿ ಪೂರೈಕೆ ಮಾಡಿದ ರೈತರ ಸಂಖ್ಯೆ:19,249

--ಫೋಟೋ ಚಿಕ್ಕಮಗಳೂರು ನಗರದ ಎಪಿಎಂಸಿ ಆವರಣದಲ್ಲಿ ಇದ್ದ ರಾಗಿ ಖರೀದಿ ಕೇಂದ್ರ ಮೇ ಮೊದಲ ವಾರದಲ್ಲಿಯೇ ಬಂದ್‌ ಆಗಿರುವುದು.