ಮಾಜಿ ರಾಜ್ಯಪಾಲ ಬಿ.ರಾಚಯ್ಯನವರ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಜಲಾಶಯ
---ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಅವಳಿ ಜಲಾಶಯಗಳಲ್ಲಿ ಒಂದಾದ ಸುವರ್ಣಾವತಿ ಜಲಾಶಯದ ಎಡದಂಡೆ ಹಾಗೂ ಬಲದಂಡೆ ನಾಲೆಗಳ ದುರಸ್ತಿ ಕಾಮಗಾರಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ಇದೇ ವೇಳೆ ಮಾತನಾಡಿ, ಮಾಜಿ ರಾಜ್ಯಪಾಲ ದಿ। ಬಿ. ರಾಚಯ್ಯ ಅವರು ನೀರಾವರಿ ಸಚಿವರಾಗಿದ್ದಾಗ ೧೯೮೪ರಲ್ಲಿ ಸುವರ್ಣಾವತಿ ಜಲಾಶಯವನ್ನು ನಿರ್ಮಿಸಿದ್ದರು.
೧.೨೫೯ ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದು, ಸುವರ್ಣಾವತಿ ಜಲಾಶಯದ ಎಡದಂಡೆ ನಾಲೆಯು ೫.೨೦ ಕಿ.ಮೀ ಉದ್ದವಿದ್ದು, ೪೦೦ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಬಲದಂಡೆ ನಾಲೆಯು ೧೯.೯೦ ಕಿ.ಮೀ ಉದ್ದವಿದ್ದು, ೬೬೦೦ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಆದರೆ ಜಲಾಶಯ ನಿರ್ಮಾಣವಾದ ತರುವಾಯದಿಂದಲೂ ನಾಲೆಗಳು ದುರಸ್ತಿಯಾಗಿರಲಿಲ್ಲ. ಇದರಿಂದ ರೈತರ ಜಮೀನುಗಳಿಗೆ ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ನಾಲೆಗಳ ದುರಸ್ತಿಗಾಗಿ ನೀರಾವರಿ ಇಲಾಖೆಯಿಂದ ೩೦ ಕೋಟಿ ರು. ಬಿಡುಗಡೆಯಾಗಿದೆ. ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಈ ಭಾಗದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಮಳೆಯಾದರೆ ಸುವರ್ಣಾವತಿ ಜಲಾಶಯಕ್ಕೆಮಾತ್ರ ನೀರು ಹರಿದು ಬರಲಿದೆ. ಮುಂದಿನ ದಿನಗಳಲ್ಲಿ ವಡ್ಡರಹಳ್ಳಿ ಕೆರೆಗೆ ನೀರು ತುಂಬಿಸಿ, ಚನ್ನಪ್ಪನಪುರ, ಬಿಸಲವಾಡಿ ಮೂಲಕ ಜಲಾಶಯ ತುಂಬಿಸಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದ ಜಲಾಶಯಕ್ಕೆ ಮೂಲಸೌಕರ್ಯ ಒದಗಿಸಿ ಪ್ರವಾಸಿ ತಾಣ ಮಾಡಲಾಗುವುದು ಎಂದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಸುವರ್ಣಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಗೋವಿಂದರಾಜು, ಸದಸ್ಯ ಮಹದೇವಯ್ಯ, ನಂಜುಂಡಯ್ಯ, ಸಿದ್ದರಾಜು, ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಮುಖಂಡರಾದ ಹನುಮಂತು, ಶಿವಮಲು ಹೊಂಗಲವಾಡಿ, ನಾಗವಳ್ಳಿ ನಾಗಯ್ಯ, ಶಿವಕುಮಾರ್, ಪ್ರಕಾಶ್, ಕುಮಾರ್, ಮರಿಸ್ವಾಮಿ, ಗುತ್ತಿಗೆದಾರ ಕೃಷ್ಣಾರೆಡ್ಡಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಕಬಿನಿ ನಾಲೆಗಳ ವಿಭಾಗದ ಇಇ ಎಲ್.ಎಂ. ಗುರುಪ್ರಸಾದ್, ಎಇಇ ಮಹೇಶ್, ಅಟ್ಟುಗುಳಿಪುರ ಸಿ.ಆರ್.ಆರ್. ಉಪ ವಿಭಾಗದ ಎಇಇ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.