: ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಗೆ ಬಳಸಲು ಲೋಗೋ ವಿನ್ಯಾಸವನ್ನು ಮಾಡಿ ಕಳಿಸುವಂತೆ ದೇಶದಾಂತ್ಯಂತ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ವಿನ್ಯಾಸಕ್ಕೆ ದೇಶದ ಹಲವು ಕಡೆಗಳಿಂದ ಸುಮಾರು ೭ ಸಾವಿರಕ್ಕೂ ಅಧಿಕ ಕಲಾವಿದರು ವಿನ್ಯಾಸಗೊಳಿಸಿದ ಲೋಗೋ ಕಳುಹಿಸಿಕೊಟ್ಟಿದ್ದರು. ಕೊನೆಯ ಕ್ಷಣದಲ್ಲಿ ಪುತ್ತೂರಿನ ಯುವ ಚಿತ್ರಕಲಾವಿದ ರಾಮ್ಪ್ರಸಾದ್ ಕೆ ಅವರು ಲೋಗೋ ವಿನ್ಯಾಸಗೊಳಿಸಿ ಕಳುಹಿಸಿದ್ದರು. ಇದಾದ ಒಂದೂವರೆ ತಿಂಗಳ ಬಳಿಕ ಅವರು ಕಳುಹಿಸಿದ ಲೋಗೋ ವಿಬಿಜಿ ರಾಮ್ ಜಿ ಯೋಜನೆಗೆ ಆಯ್ಕೆಯಾಗಿದೆ.
ಪುತ್ತೂರು: ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಗೆ ಬಳಸಲು ಲೋಗೋ ವಿನ್ಯಾಸವನ್ನು ಮಾಡಿ ಕಳಿಸುವಂತೆ ದೇಶದಾಂತ್ಯಂತ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ವಿನ್ಯಾಸಕ್ಕೆ ದೇಶದ ಹಲವು ಕಡೆಗಳಿಂದ ಸುಮಾರು ೭ ಸಾವಿರಕ್ಕೂ ಅಧಿಕ ಕಲಾವಿದರು ವಿನ್ಯಾಸಗೊಳಿಸಿದ ಲೋಗೋ ಕಳುಹಿಸಿಕೊಟ್ಟಿದ್ದರು. ಕೊನೆಯ ಕ್ಷಣದಲ್ಲಿ ಪುತ್ತೂರಿನ ಯುವ ಚಿತ್ರಕಲಾವಿದ ರಾಮ್ಪ್ರಸಾದ್ ಕೆ ಅವರು ಲೋಗೋ ವಿನ್ಯಾಸಗೊಳಿಸಿ ಕಳುಹಿಸಿದ್ದರು. ಇದಾದ ಒಂದೂವರೆ ತಿಂಗಳ ಬಳಿಕ ಅವರು ಕಳುಹಿಸಿದ ಲೋಗೋ ವಿಬಿಜಿ ರಾಮ್ ಜಿ ಯೋಜನೆಗೆ ಆಯ್ಕೆಯಾಗಿದೆ. ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೊಸ ರೂಪವಾಗಿ ಜಾರಿಗೆ ತಂದಿರುವ ವಿ.ಬಿ.ಜಿ. ರಾಮ್ ಜಿ ಯೋಜನೆಗೆ ಮುಂದಿನ ದಿನಗಳಲ್ಲಿ ಬಳಸಲಾಗುವ ಲೋಗೊವನ್ನು ಒದಗಿಸಿದ ಕೀರ್ತಿ ಪುತ್ತೂರಿನ ರಾಮ್ ಪ್ರಸಾದ್ ಪಾಲಿಗೆ ಲಭಿಸಿದೆ.
ರಾಮ್ ಪ್ರಸಾದ್ ಅವರು ತಮ್ಮದೇ ಪರಿಕಲ್ಪನೆಯಲ್ಲಿ ಲೋಗೋವನ್ನು ಕಂಪ್ಯೂಟರ್ ಪರದೆ ಮೇಲೆ ಚಿತ್ರಿಸಿ ಅದನ್ನು ಆನ್ಲೈನ್ ಮೂಲಕ ಕಳುಹಿಸಿದ್ದರು. ನೋಂದಣಿಯಾಗಿದ್ದ ೭ ಸಾವಿರ ಲೋಗೋಗಳಲ್ಲಿ ರಾಮ್ ಪ್ರಸಾದ್ ಬರೆದ ಲೋಗೋ ಆಯ್ಕೆಯಾಗಿದ್ದು, ಜೂನ್ ೨೯ರಂದು ದಿಲ್ಲಿಯಲ್ಲಿ ಅನಾವರಣಗೊಳ್ಳಲಿದೆ. ಈ ಸಂದರ್ಭ ಕೇಂದ್ರ ಸರ್ಕಾರ ರಾಮ್ ಪ್ರಸಾದ್ ಅವರನ್ನು ಸನ್ಮಾನಿಸಿ ರು. ೫೦ ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನ ಮಾಡಲಿದೆ. ತನ್ನ ಈ ಮಹೋನ್ನತ ಸಾಧನೆಯ ಖುಷಿಯೊಂದಿಗೆ ರಾಮ್ ಪ್ರಸಾದ್ ಅವರು ದಿಲ್ಲಿಗೆ ಹೋಗಲು ಸಜ್ಜಾಗಿದ್ದಾರೆ.ಲೋಗೋ ಕೊಡಲು ಕೇಂದ್ರ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡಿತ್ತು. ಇಂಟರ್ನೆಟ್ನಲ್ಲಿ ಈ ವಿಷಯ ನೋಡಿದೆ. ಮಾರ್ಚ್ ೩೦ ಕೊನೆಯ ದಿನವಾಗಿತ್ತು. ಕೊನೆಯ ಒಂದು ವಾರದಲ್ಲಿ ಸ್ಪರ್ಧೆಗಾಗಿ ಲೋಗೋ ಬಿಡಿಸಲು ತೊಡಗಿದೆ. ಮೊದಲು ವಿ.ಬಿ.ಜಿ. ರಾಮ್ ಐ ಯೋಜನೆಯ ಉದ್ದೇಶ, ಸ್ವರೂಪಗಳ ಬಗ್ಗೆ ತಿಳಿದುಕೊಂಡೆ. ಅದಕ್ಕೆ ತಕ್ಕುದಾದ ಲೋಗೋ ಬರೆದೆ. ಆದರೆ ಸುಮಾರು ೨೦ರಷ್ಟು ಲೋಗೋ ರಚಿಸಿದರೂ ನನಗೆ ತೃಪ್ತಿಯಾಗಲಿಲ್ಲ. ಆಗಲೇ ಡೆಡ್ಲೈನ್ ಮುಗಿದಿತ್ತು. ಮಾರ್ಚ್ ೩೦ರಂದು ೫ ಸಾವಿರ ನೋಂದಣಿ ಕಾಣುತ್ತಿತ್ತು. ಇನ್ನಾಗದು ಎಂದು ಕೈಬಿಟ್ಟೆ. ಏ.೧ರಂದು ನೋಡಿದಾಗ ೪ ದಿನ ವಿಸ್ತರಣೆ ಮಾಡಿದ್ದು ಗೊತ್ತಾಯಿತು. ಮತ್ತೆ ಉತ್ಸಾಹ ಚಿಗುರಿತು. ಮತ್ತೆ ಗೀಚತೊಡಗಿದೆ. ಹಲವಾರು ಲೊಗೋ ಬರೆದ ಬಳಿಕ ಒಂದು ಲೋಗೊ ನನಗೆ ಇಷ್ಟವಾಯಿತು. ಏ.೪ರಂದು ಕೊನೆಯ ಕ್ಷಣದಲ್ಲಿ ಅದನ್ನು ಕಳಿಸಿದೆ. ಆಯ್ಕೆಯಾಗುವ ಯಾವ ನಿರೀಕ್ಷೆಯೂ ಇರಲಿಲ್ಲ ಎನ್ನುತ್ತಾರೆ ರಾಮ್ ಪ್ರಸಾದ್.
ಪುತ್ತೂರು ನಗರ ನಿವಾಸಿಗಳಾದ ಮಲ್ಲೇಶ್ ಆಚಾರ್ಯ- ಅನುರಾಧಾ ಕೆ. ದಂಪತಿಗಳ ಪುತ್ರನಾದ ರಾಮ್ಪ್ರಸಾದ್ ಕೆ. ಅವರು ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿತನಕ ಕಲಿತು, ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಮಂಗಳೂರಿನ ಮಹಾಲಸಾ ಸಂಸ್ಥೆಯಲ್ಲಿ ಚಿತ್ರಕಲೆಯಲ್ಲಿ ಬಿವಿಎ (ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ಸ್) ಪದವಿ ಪಡೆದಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಪುತ್ತೂರಿನಲ್ಲಿ ಫ್ರೀಲ್ಯಾನ್ಸರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ರಾಂಡ್ ಐಡೆಂಟಿಟಿ, ಪ್ಯಾಕೇಜಿಂಗ್ ಡಿಸೈನ್, ಡಿಜಿಟಲ್ ಪೈಂಟಿಂಗ್ಗಳನ್ನು ಕರಗತ ಮಾಡಿಕೊಂಡಿರುವ ಅವರು ಆಯಿಲ್ ಪೈಂಟಿಂಗ್ ಗಳನ್ನೂ ಮಾಡುತ್ತಾರೆ. ಅನೇಕ ಕಂಪನಿಗಳಿಗೆ ಅವರು ಲೋಗೋ ಡಿಸೈನ್ ಮಾಡಿಕೊಟ್ಟಿದ್ದಾರೆ.ಯಾವುದೇ ಲೋಗೋ ರಚಿಸಬೇಕಾದರೂ ಮೊದಲು ಕಾನ್ಸೆಪ್ಟ್ ಬಿಲ್ಡ್ ಮಾಡಬೇಕು. ಅದಕ್ಕೆ ತಕ್ಕಂತೆ ಇಲಸ್ಟ್ರೇಶನ್ ಬರೆಯಬೇಕು. ಕೆಲವೊಮ್ಮೆ ೨೦ಕ್ಕಿಂತಲೂ ಅಧಿಕ ಡಿಸೈನ್ ಬರೆಯಬೇಕಾಗುತ್ತದೆ. ಬಳಿಕ ಅದನ್ನು ಸರಳಗೊಳಿಸಿ ಅಂತಿಮಗೊಳಿಸಬೇಕು. ಕೆಲವೊಮ್ಮೆ ಮೊದಲು ಬರೆದ ಎಲ್ಲ ಇಲಸ್ಟ್ರೇಶನ್ಗಳನ್ನು ಬದಿಗೆ ತಳ್ಳಿ ಕೊನೆ ಕ್ಷಣಣದಲ್ಲಿ ಹೊಳೆದ ಸಣ್ಣದೊಂದು ಐಡಿಯಾದ ಕಿಡಿ ಅದ್ಭುತ ರೂಪ ಕೊಡುತ್ತದೆ. ಇಂಥ ಅನೇಕ ಅನುಭವ ನನಗಾಗಿದೆ. ಇಲ್ಲೂ ಆಗಿದ್ದು ಅದೇ ಆಗಿದೆ.
-ರಾಮ್ಪ್ರಸಾದ್ ಕೆ., ಲೋಗೋ ರಚಿಸಿದ ಯುವ ಕಲಾವಿದ.