ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒತ್ತುವರಿಯಾದ ಜಾಗ ಸ್ವಾಧೀನ ಪ್ರಕ್ರಿಯೆ ಮುಂದುವರಿದಿದ್ದು, ಸೋಮವಾರ ನೆಲ್ಲಿಕಟ್ಟೆಯಲ್ಲಿ ದೇವಳದ ಜಾಗದಲ್ಲಿರುವ ವಾಸ್ತವ್ಯದ ಮನೆಯೊಂದನ್ನು ಅಲ್ಲಿ ವಾಸ್ತವ್ಯವಿದ್ದ ಕುಟುಂಬ ದೇವಳಕ್ಕೆ ಹಸ್ತಾಂತರಿಸಿದೆ. ಈ ಜಾಗದಲ್ಲಿ ಮನೆ ಕಟ್ಟಿಕೊಂಡು ಸುಮಾರು ೪೦ ವರ್ಷಗಳಿಂದ ವಾಸ್ತವ್ಯವಿದ್ದ ವಿನಾಯಕ ಭಟ್ ದೇವಳಕ್ಕೆ ಜಾಗ ಹಸ್ತಾಂತರ ಮಾಡಿದರು. ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ವಿನಾಯಕ ಭಟ್ ಅವರೊಂದಿಗೆ ಮಾತುಕತೆ ನಡೆಸಿ ಸೌಹಾರ್ದತೆಯಲ್ಲಿ ದೇವಳಕ್ಕೆ ಮನೆ ಪಡೆಯಲಾಯಿತು.
ಭಟ್ ಅವರು ದೇವಳದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ಅವರ ಮೂಲಕ ದೇವಳಕ್ಕೆ ಮನೆಯನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾಧ್ಯಮಗಳ ಜತೆ ಮಾತನಾಡಿದ ಶಾಸಕರು, ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ದೇವಸ್ಥಾನದ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ ಎಂದರು. ಬೇರೆ ಮನೆ ಮಾಡಿದ್ದೇವೆ: ಜಾಗ ಬಿಟ್ಟುಕೊಟ್ಟ ವಿನಾಯಕ ಭಟ್ ಮಾತನಾಡಿ, ಶಾಸಕರು ಮತ್ತು ದೇವಸ್ಥಾನದ ಅಧ್ಯಕ್ಷರು ಕೇಳಿದ ಮೇರೆಗೆ ತೃಪ್ತಿಯಿಂದ ಬಿಟ್ಟುಕೊಡುತ್ತಿದ್ದೇನೆ. ಮಹಾಲಿಂಗೇಶ್ವರನ ಮೇಲೆ ಭಾರ ಹಾಕಿ ಹೊರಟ ಮೇಲೆ ನನಗೆ ಬೇರೆ ಮನೆಯ ವ್ಯವಸ್ಥೆಯೂ ಆಗಿದೆ ಎಂದರುಈ ಸಂದರ್ಭದಲ್ಲಿ ವಿನಾಯಕ ಭಟ್ ಅವರನ್ನು ಶಾಸಕರು ಶಾಲು ಹೊದೆಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
(ಫೋಟೋ-22 ಪಿಟಿಆರ್ ಮನೆ)