ಹೂಳು ತುಂಬಿದ್ದ ಅಲುಂಬುಡ ಕೆರೆಗೆ ಸಿಗಲಿದೆ ಕಾಯಕಲ್ಪ

| Published : May 05 2024, 02:03 AM IST

ಸಾರಾಂಶ

ಕರೆಯ ಅಭಿವೃದ್ಧಿಗಾಗಿ ೧೫ನೇ ಹಣಕಾಸು ನಿಧಿಯಡಿಯಲ್ಲಿ ೩೫ ಲಕ್ಷ ರು. ಹಾಗೂ ಮತ್ತು ಮಿಲಿಯನ್ ಪ್ಲಸ್ ಸಿಟೀಸ್ ಯೋಜನೆಯಲ್ಲಿ ೪೦ ಲಕ್ಷ ರು. ಮಂಜೂರಾಗಿದ್ದು, ಕರೆಯ ದುರಸ್ತಿ ಕಾಮಗಾರಿ ಆರಂಭಗೊಂಡಿದೆ.

ಕನ್ನಡಪ್ರಭವಾರ್ತೆ ಪುತ್ತೂರು:

ಪ್ರಾಚೀನ ಕರೆಯೆಂದೇ ಪ್ರಚಲಿತವಾಗಿರುವ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಅಲುಂಬುಡ ಎಂಬಲ್ಲಿರುವ ‘ಅಲುಂಬುಡ ಬಾವದ ಕೆರೆ’ ಐತಿಹಾಸಿಕ ಮಹತ್ವ ಪಡೆದಿದ್ದರೂ ಕಳೆದ ಹಲವಾರು ವರ್ಷಳಿಂದ ದುರಸ್ತಿಯಾಗದೆ ಹೂಳು ತುಂಬಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿತ್ತು. ಇದೀಗ ಕೆರೆಗೆ ಕಾಯಕಲ್ಪದ ಯೋಗ ಕೂಡಿ ಬಂದಿದೆ. ಸರ್ಕಾರದ ೭೫ ರು. ವೆಚ್ಚದಲ್ಲಿ ಕೆರೆಯ ಹೂಳೆತ್ತುವುದರ ಜೊತೆಗೆ ಇನ್ನಿತರ ಕಾಮಗಾರಿ ನಡೆಯಲಿದೆ.

ಕರೆಯ ಅಭಿವೃದ್ಧಿಗಾಗಿ ೧೫ನೇ ಹಣಕಾಸು ನಿಧಿಯಡಿಯಲ್ಲಿ ೩೫ ಲಕ್ಷ ರು. ಹಾಗೂ ಮತ್ತು ಮಿಲಿಯನ್ ಪ್ಲಸ್ ಸಿಟೀಸ್ ಯೋಜನೆಯಲ್ಲಿ ೪೦ ಲಕ್ಷ ರು. ಮಂಜೂರಾಗಿದ್ದು, ಕರೆಯ ದುರಸ್ತಿ ಕಾಮಗಾರಿ ಆರಂಭಗೊಂಡಿದೆ. ಕೃಷ್ಣಮೂರ್ತಿ ಭಟ್ ಮತ್ತು ಕೆ.ಎಂ. ಹಂಝ ಎಂಬಿಬ್ಬರು ಗುತ್ತಿಗೆದಾರರು ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿ ಆರಂಭಿಸಿದ್ದಾರೆ. ಈ ಕೆರೆಯು ೮೪ ಸೆಂಟ್ಸ್ ವಿಸ್ತೀರ್ಣವನ್ನು ಹೊಂದಿದ್ದು, ಕೆರೆಯು ಅಲುಂಬುಡ ಕರೆ ಎಂಬ ಹೆಸರಿನಲ್ಲಿ ಸರ್ಕಾರಿ ಜಾಗದಲ್ಲಿದೆ. ಕಾಮಗಾರಿ ಆರಂಭ ಹಂತದಲ್ಲಿ ಸರ್ವೆ ಅಧಿಕಾರಿಗಳು ಆಗಮಿಸಿ ಕೆರೆಯ ವಿಸ್ತೀರ್ಣದ ಮರು ಸರ್ವೆ ನಡೆಸಿದ್ದಾರೆ. ಕೆರೆ ಅಭಿವೃದ್ಧಿಗಾಗಿ ಹೋರಾಟ: ಅಲುಂಬುಡ ಬಾವದ ಕೆರೆಯ ಅಭಿವೃದ್ಧಿಗಾಗಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಸ್ಥಳೀಯರು ಅನೇಕ ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ೨೦೧೩ರಲ್ಲಿ ೨೫ ಲಕ್ಷ ರು. ವೆಚ್ಚದಲ್ಲಿ ಕೆರೆಯ ಹೂಳೆತ್ತಿ ಒಂದು ಭಾಗಕ್ಕೆ ತಡೆಗೋಡೆ ಕಟ್ಟಲಾಗಿತ್ತು. ಬಳಿಕ ತೀರಾ ನಿರ್ಲಕ್ಷ್ಯಕ್ಕೆ ಒಳಗಾದ ಈ ಕೆರೆಯಲ್ಲಿ ಹೂಳು ತುಂಬಿ ಮುಚ್ಚಿ ಹೋಗುವ ಹಂತ ತಲುಪಿತ್ತು. ಇದೀಗ ಮತ್ತೆ ಕೆರೆಗೆ ಕಾಯಕಲ್ಪದ ಸುಯೋಗ ದೊರಕಿದೆ. ಕಾಮಗಾರಿ ನಡೆಯಲಾರಂಭಿಸಿದೆ.

ಹೂಳೆತ್ತುವಿಕೆ ಆರಂಭ: ಗುತ್ತಿಗೆದಾರರು ಕೆರೆಯಲ್ಲಿರುವ ನೀರನ್ನು ಸತತ ೨ ದಿನಗಳ ಪಂಪ್ ಮೂಲಕ ಹೊರಹಾಕುವ ಕೆಲಸ ಮಾಡಿದ್ದರು. ಆದರೂ ನೀರಿನ್ನು ಖಾಲಿ ಮಾಡಲು ಅಸಾಧ್ಯವಾದ ಕಾರಣ ಕೆರೆಯಿಂದಲೇ ಕಾಲುವೆ ತೋಡಿ ನೀರನ್ನು ಪಕ್ಕದ ತೋಡಿಗೆ ಬಿಡಲಾಯಿತು. ಪ್ರಸ್ತುತ ಕೆರೆಯ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಮೇಲೆತ್ತಲಾದ ಹೂಳನ್ನು ಕೆರೆಯ ಬದಿಯಲ್ಲಿ ರಾಶಿ ಹಾಕಲಾಗುತ್ತಿದೆ. ನೀರಿನ ಅಂಶ ಇಳಿದ ಮೇಲೆ ಬನ್ನೂರು ಡಂಪಿಂಗ್ ಯಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ. ಬಳಿಕ ಕೆರೆಯನ್ನು ಸುಮಾರು ೩ ಮೀಟರ್‌ನಷ್ಟು ಅಳಗೊಳಿಸಿ ಸುತ್ತಲೂ ಕಲ್ಲಿನ ತಡೆಗೋಡೆ ನಿರ್ಮಿಸಲಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಕೆರೆಗೆ ಇಳಿಯಲು ಮೆಟ್ಟಿಲು ನಿರ್ಮಿಸಲಾಗುತ್ತದೆ. ನಾಲ್ಕೂ ದಿಕ್ಕುಗಳಲ್ಲಿ ತಲಾ ೫ ಮೀಟರ್ ಪ್ಯಾಸೇಜ್ ಕಲ್ಪಿಸಲು ಎಂಜಿನಿಯರ್ ಸೂಚಿಸಿದ್ದಾರೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.----ಕೋಟ್-----೧ಕೆರೆಯ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಹೂಳೆತ್ತಿ ಸುತ್ತಲೂ ತಡೆಗೋಡೆ ನಿರ್ಮಿಸಲಾಗುವುದು. ೨ನೇ ಹಂತದಲ್ಲಿ ೮೪ ಸೆಂಟ್ಸ್ ವ್ಯಾಪ್ತಿಗೂ ಆವರಣ ಗೋಡೆ ನಿರ್ಮಿಸಿ ೨ ಕಡೆ ಗೇಟ್ ಅಳವಡಿಸಲಾಗುವುದು. ಬಳಿಕ ಉದ್ಯಾನ ನಿರ್ಮಿಸಲಾಗುತ್ತದೆ. ಕೆರೆಯ ಮಧ್ಯೆ ಕೊಳವೆ ಬಾವಿ ಕೊರೆದು ಒಳಗೆ ಫಿಲ್ಟರೇಶನ್ ವೆಲ್ ರಚಿಸಲಾಗುತ್ತದೆ. ಇದರಿಂದ ಕರೆಯಲ್ಲಿ ನೀರು ತುಂಬುವುದರ ಜತೆಗೆ ಅಂತರ್ಜಲ ಅಭಿವೃದ್ಧಿಯಾಗುತ್ತದೆ- ಕೃಷ್ಣಮೂರ್ತಿ ರೆಡ್ಡಿ, ಸಹಾಯಕ ಎಂಜಿನಿಯರ್, ಪುತ್ತೂರು ನಗರಸಭೆ.

---ಕೋಟ್----೨ಅಲುಂಬುಡ ಬಾವದ ಕೆರೆ ಅಭಿವೃದ್ಧಿಯಿಂದ ಈ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿಯಾಗಲಿದೆ. ನೂರಾರು ಕೃಷಿಕರಿಗೆ ಪ್ರಯೋಜನವಾಗಲಿದೆ. ಭವಿಷ್ಯದಲ್ಲಿ ಕರೆಯ ನಿರ್ವಹಣೆ ಚೆನ್ನಾಗಿ ನಡೆಯಬೇಕು. ಆಪತ್ಕಾಲದಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗುವಂತಿರಬೇಕು.- ಲೋಕೇಶ್ ಅಲುಂಬಡ, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು.