ಪುತ್ತೂರು ನೃತ್ಯೋಪಾಸನಾ ಕಲಾ ಅಕಾಡೆಮಿ ಪ್ರಸ್ತುತಿಯಲ್ಲಿ ನೃತ್ಯಗುರು ಶಾಲಿನಿ ಆತ್ಮಭೂಷಣ್ ಅವರ ಶಿಷ್ಯೆ ಶಮಾ ಎಸ್.ಪಿ. ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಶನಿವಾರ ಸಂಜೆ ೫ ಗಂಟೆಗೆ ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಪುರಭವನದಲ್ಲಿ ನಡೆಯಲಿದೆ.
ಪುತ್ತೂರು: ಪುತ್ತೂರು ನೃತ್ಯೋಪಾಸನಾ ಕಲಾ ಅಕಾಡೆಮಿ ಪ್ರಸ್ತುತಿಯಲ್ಲಿ ನೃತ್ಯಗುರು ಶಾಲಿನಿ ಆತ್ಮಭೂಷಣ್ ಅವರ ಶಿಷ್ಯೆ ಶಮಾ ಎಸ್.ಪಿ. ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಶನಿವಾರ ಸಂಜೆ ೫ ಗಂಟೆಗೆ ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಪುರಭವನದಲ್ಲಿ ನಡೆಯಲಿದೆ.
ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ (ನಾಟ್ಯನಿಕೇತನ, ಕೊಲ್ಯ, ಮಂಗಳೂರು) ಉದ್ಘಾಟಿಸಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಪ್ರಾಂಶುಪಾಲ ಜಯರಾಮ ರೈ, ಸಂಗೀತ ವಾಹಿನಿಯ ಡಾ. ಮಹೇಶ್ ಪದ್ಯಾಣ ಹಾಗೂ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟಕೃಷ್ಣ ಶರ್ಮ ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆ, ವಿದ್ವಾನ್ ಸ್ವರಾಗ್ ಮಾಹೆ, ಮೃದಂಗದಲ್ಲಿ ಆಕಾಶವಾಣಿ ಕಲಾವಿದ ವಿದ್ವಾನ್ ಸುರೇಶ್ ಬಾಬು ಕಲ್ಲಿಕೋಟೆ, ವಯೋಲಿನ್ನಲ್ಲಿ ವಿದ್ವಾನ್ ಗಣರಾಜ್ ಕಾರ್ಲೆ ಹಾಗೂ ವೀಣೆಯಲ್ಲಿ ವಿದ್ವಾನ್ ವಿ. ಸೌಂದರ ರಾಜನ್ ತಿರುವನಂತಪುರ ಸಹಕರಿಸಲಿದ್ದಾರೆ.ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪರಕ್ಕಜೆಯ ವೇದಮೂರ್ತಿ ಉದಯ ನಾರಾಯಣ ಭಟ್ ಮತ್ತು ಅಶ್ವಿನಿ ಉದಯ ನಾರಾಯಣ ದಂಪತಿಯ ಪುತ್ರಿ ಶಮಾ ಎಸ್.ಪಿ., ಏಳನೇ ವಯಸ್ಸಿನಿಂದ ನೃತ್ಯೋಪಾಸನಾ ಕಲಾ ಅಕಾಡೆಮಿಯಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.