ಗುಣಮಟ್ಟದ ಶಿಕ್ಷಣ ನಮ್ಮ ಮೊದಲ ಆದ್ಯತೆ: ಡಾ.ಭವ್ಯಾ ಶೇಖರ್

| Published : Jan 18 2025, 12:46 AM IST

ಗುಣಮಟ್ಟದ ಶಿಕ್ಷಣ ನಮ್ಮ ಮೊದಲ ಆದ್ಯತೆ: ಡಾ.ಭವ್ಯಾ ಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಕ್ಷೇತ್ರವನ್ನು ಸೇವಾ ವಲಯ ಎಂದು ಭಾವಿಸಿಕೊಂಡಿರುವ ನಾವು ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಆಶಯ ಹೊಂದಿದ್ದೇವೆ.

ಬಳ್ಳಾರಿ: ಶಿಕ್ಷಣ ಕ್ಷೇತ್ರವನ್ನು ಸೇವಾ ವಲಯ ಎಂದು ಭಾವಿಸಿಕೊಂಡಿರುವ ನಾವು ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಆಶಯ ಹೊಂದಿದ್ದೇವೆ ಎಂದು ಎಸ್.ಬಿ.ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ ಸಂಸ್ಥಾಪಕಿ ಹಾಗೂ ಸಿಇಒ ಡಾ.ಭವ್ಯಾಶೇಖರ್ ತಿಳಿಸಿದರು.ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಎಸ್.ಬಿ.ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕ ಅವರು ಮಾತನಾಡಿದರು.

ಶಿಕ್ಷಣ ಸಂಸ್ಥೆಯನ್ನು ನಾವು ನಗರದಲ್ಲಿ ಕಟ್ಟಬಹುದಿತ್ತು. ಆದರೆ, ನಮ್ಮ ಉದ್ದೇಶ ಹಳ್ಳಿ ಮಕ್ಕಳಿಗೆ ಶಿಕ್ಷಣ ನೀಡುವ ಒತ್ತಾಸೆಯಾಗಿತ್ತು. ಶೇಖರ್ ಅವರು ತಮ್ಮ ಸ್ವಗ್ರಾಮ ದಮ್ಮೂರಿನಲ್ಲಿಯೇ ದೊಡ್ಡದೊಂದು ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕು. ಸಾವಿರಾರು ಮಕ್ಕಳಿಗೆ ಇದರಿಂದ ಅನುಕೂಲವಾಗಬೇಕು ಎಂದು ಬಯಸಿದ್ದರು. ಅವರ ಆಸೆಯಂತೆಯೇ ಇಂದು ಎಸ್.ಬಿ.ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಶಿಕ್ಷಣ ಸಂಸ್ಥೆಗಳಲ್ಲಿ ನರ್ಸರಿಯಿಂದ ನರ್ಸಿಂಗ್ ವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೃಂದಾ ಪಬ್ಲಿಕ್ ಶಾಲೆ, ಬೃಂದಾ ಪಿಯು ಕಾಲೇಜು, ಬೃಂದಾ ಪದವಿ ಕಾಲೇಜು, ಸ್ಕಂದಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಬರೀ ನಾಲ್ಕು ವರ್ಷಗಳಲ್ಲಿ ನಾಲ್ಕು ಸಂಸ್ಥೆಗಳನ್ನು ಕಟ್ಟಿ ಅಕ್ಷರ ಸೇವೆಯಲ್ಲಿ ನಿರತರಾಗಿದ್ದೇವೆ ಎಂದರು.ಎಸ್.ಬಿ.ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ ಶಿಕ್ಷಣ ಸಂಸ್ಥೆಗಳು ಬೆಳೆಯಲು ಪೋಷಕರು ಹೆಚ್ಚು ಕಾರಣರು. ಅವರು ನಿರಂತರವಾಗಿ ಸಂಸ್ಥೆಗೆ ಬೆಂಬಲಿಸುತ್ತಾ ಬಂದಿದ್ದಾರೆ. ನಮ್ಮ ಸಂಸ್ಥೆಯ ಉದ್ದೇಶವನ್ನು ಅರಿತಿರುವ ಪೋಷಕರು ಹಾಗೂ ವಿದ್ಯಾರ್ಥಿಗಳು ಸಹಕರಿಸುತ್ತಿದ್ದಾರೆ. ಎಲ್ಲರ ಸಹಕಾರದಿಂದಾಗಿಯೇ ಸಂಸ್ಥೆ ಪ್ರಗತಿಯತ್ತ ಮುಂದಡಿ ಇಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಜನಾರ್ದನ ರೆಡ್ಡಿ ಹಾಗೂ ಲಕ್ಷ್ಮಿ ಅರುಣಾ ನಮ್ಮ ಸಂಸ್ಥೆಯ ಪ್ರೇರಕ ಶಿಕ್ತಿ. ಅವರ ಮಾರ್ಗದರ್ಶನ ಹಾಗೂ ಸಲಹೆಗಳಂತೆಯೇ ನಾವು ಶಿಕ್ಷಣ ಸಂಸ್ಥೆಯನ್ನು ಬೆಳೆಸುತ್ತಾ ಬಂದಿದ್ದೇವೆ. ಶಿಕ್ಷಣದ ಬಗೆಗಿನ ಅವರಿಗಿರುವ ಕಾಳಜಿಯ ಫಲದಿಂದಾಗಿಯೇ ಎಸ್.ಬಿ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ ಶಿಕ್ಷಣ ಸಂಸ್ಥೆಗಳು ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭಕ್ಕೆ ರಾಜ್ಯಪಾಲರು ಆಗಮಿಸಿರುವುದು ಅತ್ಯಂತ ಸಂತಸ ತಂದಿದೆ. ಶಿಕ್ಷಣ ಬಗೆಗಿನ ನಮ್ಮ ಬದ್ಧತೆ ಹಾಗೂ ಕಾಳಜಿಯ ದ್ಯೋತಕವಾಗಿಯೇ ಈ ಎಲ್ಲ ಮಹನೀಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ ಎಂದುಕೊಂಡಿರುವೆ ಎಂದರಲ್ಲದೆ, ಎಲ್ಲರ ಆಶೀರ್ವಾದ ಹಾಗೂ ಹಾರೈಕೆಗಳು ನಮ್ಮ ಸಂಸ್ಥೆಯ ಮೇಲೆ ಸದಾ ಇರಲಿ ಎಂದು ಮನವಿ ಮಾಡಿಕೊಂಡರು. ಸಂಸ್ಥೆಯ ಅಧ್ಯಕ್ಷ ದಮ್ಮೂರು ಶೇಖರ್ ಉಪಸ್ಥಿತರಿದ್ದರು.

ಭಾರೀ ಜನಸ್ತೋಮ, ಯಶಸ್ವಿಗೊಂಡ ಕಾರ್ಯಕ್ರಮ: ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಎಸ್.ಬಿ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭಕ್ಕೆ ಸಾವಿರಾರು ಜನರು ಸಾಕ್ಷಿಯಾದರು.

ದಮ್ಮೂರು, ಡಿ.ಕಗ್ಗಲ್, ಚಾನಾಳ್, ಬೈಲೂರು, ಸಿಂದಿಗೇರಿ, ಶಾನವಾಸಪುರ, ಶಿರಿಗೇರಿ, ಕರೂರು, ದರೂರು ಸೇರಿದಂತೆ ಹತ್ತಾರು ಗ್ರಾಮಗಳಿಂದ ಜನರು ವಾರ್ಷಿಕೋತ್ಸವ ಹಾಗೂ ರಾಜ್ಯಪಾಲರು ಉಪಸ್ಥಿತಿಯ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಬಳ್ಳಾರಿಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಹಾಗೂ ಶಿಕ್ಷಣ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.