-ಶಾಸಕರು, ತಹಶೀಲ್ದಾರ್, ನಗರಸಭೆ ಸದಸ್ಯರ ಮನೆ ಮುಂದೆಯೇ ಚರಂಡಿ ನೀರು। ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
ಕನ್ನಡಪ್ರಭ ವಾರ್ತೆ, ಗೌರಿಬಿದನೂರು:ನಗರದಲ್ಲಿ ಹಲವು ಸೌಲಭ್ಯಗಳಿಂದ ವಂಚಿತವಾಗಿರುವುದು ಒಂದು ಕಡೆಯಾದರೆ ಕನಿಷ್ಠ ರಸ್ತೆ ಮೇಲೆ ಹರಿಯುವ ನೀರನ್ನು ಬೇರೆ ಕಡೆ ಹೋಗಲು ವ್ಯವಸ್ಥೆ ಮಾಡದಷ್ಟು ನಗರಸಭೆ, ತಾಲೂಕು ಆಡಳಿತ ಜಿಡ್ಡುಗಟ್ಟಿದೆ.ಶಾಸಕರ ಗೃಹಕಚೇರಿ ಮುಂಭಾಗ, ನ್ಯಾಯಾಲಯದ ಮುಂಭಾಗ, ರೈಲ್ವೇ ಪ್ಯಾರಲಲ್ ರಸ್ತೆ, ಮಹರ್ಷಿ ವಾಲ್ಮೀಕಿ ವೃತ್ತ, ಕರೇಕಲ್ಲಹಳ್ಳಿ, ವಿನಾಯಕ ನಗರ ಮುಂತಾದ ಸ್ಥಳಗಳಲ್ಲಿ ಮಳೆ ನೀರು ಮೊಣಕಾಲಿನವರೆಗೂ ತುಂಬಿ ಹರಿಯುತ್ತಿತ್ತು. ಇದರಿಂದ ಇಲ್ಲಿ ರಸ್ತೆ ದಾಟಲು ಬೈಕ್ ಸವಾರರು, ಪಾದಚಾರಿಗಳು ಕೊಳಚೆ ನೀರಿನಲ್ಲಿಯೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಮಳೆಗಾಲಕ್ಕೂ ಮುನ್ನವೇ ಚರಂಡಿಗಳನ್ನು ಸ್ವಚ್ಛ ಮಾಡಬೇಕೆಂಬ ಮುಂದಾಲೋಚನೆ ಇಲ್ಲದಿರುವುದರಿಂದ ಕಸದಿಂದ ತುಂಬಿದ್ದ ಚರಂಡಿಯ ತ್ಯಾಜ್ಯ ರಸ್ತೆಯ ಮೇಲೆ ಹರಿದು ಅವಾಂತರ ಸೃಷ್ಟಿಸಿದೆ. ಗಬ್ಬುವಾಸನೆ ತಾಳಲಾರದೇ ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂದಿತು.ಚರಂಡಿಗಳಲ್ಲಿನ ತ್ಯಾಜ್ಯ ತೆಗೆಯಲು ನಗರಸಭೆ ಮುಂದಾಗದ ಕಾರಣ ಮಧ್ಯಾಹ್ನ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ತಿಂಗಳಿಗೊಮ್ಮೆಯಾದರೂ ಚರಂಡಿ ಸ್ವಚ್ಛತೆಗೆ ನಗರಸಭೆ ಮುಂದಾಗಬೇಕು, ಆದರೆ 6 ತಿಂಗಳಾದರೂ ಚರಂಡಿ ಸ್ವಚ್ಛತೆಗೆ ಪೌರಕಾರ್ಮಿಕರು ಬರುತ್ತಿಲ್ಲವೆಂದು ಬಡಾವಣೆ ಗೃಹಿಣಿ-ನಾಗಮಣಿ ಮಂಜುನಾಥ್ ದೂರಿದರು.ಕಾಲೇಜು ಮೈದಾನದಲ್ಲಿ ಚರಂಡಿ ನೀರು:
ಆಚಾರ್ಯ ಶಾಲೆ, ಕಾಲೇಜು ಮುಂಭಾಗದ ರಸ್ತೆಯಲ್ಲಿ ಮಳೆ, ಚರಂಡಿ ಕಲುಷಿತ ನೀರು ಸರಾಗವಾಗಿ ಹರಿಯದೆ, ಶಾಲೆಯ ಆವರಣದಲ್ಲಿ ಪೂರ್ತಿಯಾಗಿ ಚರಂಡಿ ನೀರು ನಿಂತಿದ್ದು, ಕಾಲೇಜಿನ ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಪೋಷಕರು.ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಚರಂಡಿಗಳನ್ನು ಆಳವಾಗಿಸುವುದು ಮತ್ತು ಕಾಲಕಾಲಕ್ಕೆ ಹೂಳೆತ್ತುವ ಕೆಲಸವನ್ನು ಅಧಿಕಾರಿಗಳು ಮಾಡಿಸಬೇಕಿತ್ತು. ಆದರೆ ಸಂಬಂದಪಟ್ಟ ಅಧಿಕಾರಿಗಳು ಸುಮ್ಮನೆ ಕಾಲಹರಣ ಮಾಡುತ್ತಾ ನಮ್ಮ ಜೀನವದ ಜೊತೆಯಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಬಡಾವಣೆಯ ನಿವಾಸಿಗಳು ಅಧಿಕಾರಿಗಳನ್ನು ದೂರುತ್ತಿದ್ದಾರೆ.ರಾಜಕಾಲುವೆ ಮಾಯ: ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು, ಚರಂಡಿಗಳಲ್ಲಿ ಹೂಳೆತ್ತದೆ ಇರುವುದು ರಾಜಕಾಲುವೆಗಳು ಮಾಯವಾದ ಕಾರಣದಿಂದ ಭಾರಿ ಮಳೆಗೆ ಬರುವಂತಹ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ಹರಿಯುತ್ತಿವೆ. ಒಮ್ಮೆ ಮಳೆ ಬಂದರೆ ಸಾಕು ರಸ್ತೆಗಳು ಕೆಸರುಗದ್ದೆಗಳಂತಾಗಿ ಸಂಚಾರ ತುಂಬಾ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಬಾಕ್ಸ್: ಶಾಸಕರ ಮನೆ ರಸ್ತೆಯಲ್ಲೇ ಈ ಗತಿ
ಗೌರಿಬಿದನೂರು ನಗರದ ಹೃದಯಭಾಗದಲ್ಲಿರುವ ನ್ಯಾಯಾಲಯದ ರಸ್ತೆಯಲ್ಲೇ ಶಾಸಕರಾದ ಕೆ.ಹೆಚ್. ಪುಟ್ಟಸ್ವಾಮಿಗೌಡರ ಮನೆ ಮತ್ತು ತಾಲೂಕಿನ ದಂಡಾಧಿಕಾರಿಗಳು, ನಗರಸಭೆ ಸದಸ್ಯರು ಇದೇ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಶಾಸಕರು ಮತ್ತು ತಾಲೂಕು ತಹಶೀಲ್ದಾರ್ ಮನೆಯ ಮುಂಭಾಗವೇ ಇಂತಹ ಪರಿಸ್ಥಿತಿಯಿದ್ದರೆ, ಇನ್ನು ತಾಲೂಕಿನಾದ್ಯಂತ ಹೇಗಿರಬಹುದೆಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ.
ಕೋಟ್...ಚರಂಡಿ ಸ್ವಚ್ಛತೆಗೆ ಕ್ರಮವಹಿಸಿ ರಸ್ತೆಯ ಮೇಲೆ ಹರಿದಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗುವುದು. ಮಳೆ ಬಂದಾಗ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಲಾಗುವುದು.ರಮೇಶ.ಕೆ.ಜಿ.
ಆಯುಕ್ತರು, ಗೌರಿಬಿದನೂರು ನಗರಸಭೆ