ಕೆಐಎಡಿಬಿಯು ಮಿತ್ತಲ್ ಕಂಪನಿಗಾಗಿ 2012ರಲ್ಲಿ ಸ್ವಾಧೀನ ಮಾಡಿಕೊಂಡಿದ್ದ ಸಾವಿರಾರು ಎಕರೆಯಷ್ಟು ಜಮೀನನ್ನು ಈಗ ಅಕ್ರಮವಾಗಿ ಜಿಂದಾಲ್ ಕಂಪನಿಗೆ ನೀಡಲಾಗಿದೆ.
ಕುರುಗೋಡು: ಮಿತ್ತಲ್ ಕಂಪನಿಗೆ ನೀಡಿದ್ದ ರೈತರ ಭೂಮಿಯನ್ನು ಕೆಐಎಡಿಬಿ ಸರ್ಕಾರದೊಂದಿಗೆ ಶಾಮೀಲಾಗಿ ಜಿಂದಾಲ್ಗೆ ಪರಭಾರೆ ಮಾಡಿದೆ. ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಇಲ್ಲಿನ ಸಾವಿರಾರು ರೈತರ ಭೂಮಿಯನ್ನು ವಾಪಸ್ ನೀಡಬೇಕು. ಇಲ್ಲವಾದಲ್ಲಿ ಸೂಕ್ತ ಭೂ ಪರಿಹಾರ ಒದಗಿಸಬೇಕು ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ (ಯುವಸೇನೆ)ಯ ಕುಡತಿನಿ ಘಟಕ ಅಧ್ಯಕ್ಷ ಸಂಪತಕುಮಾರ್ ಆಗ್ರಹಿಸಿದರು.ಸಮೀಪದ ಕುಡತಿನಿ ಪಟ್ಟಣದಲ್ಲಿ ಬುಧವಾರ ಭೂ ಸಂತ್ರಸ್ತ ರೈತರಿಗೆ ನ್ಯಾಯ ಸಿಗಬೇಕೆಂಬ ನಿಟ್ಟಿನಲ್ಲಿ ಕಳೆದ ಮೂರು ವರ್ಷದಿಂದ ನಿರಂತರವಾಗಿ ಹಮ್ಮಿಕೊಂಡು ಇಂದಿಗೆ 1251ನೇ ದಿನ ಮತ್ತು 9ನೇ ದಿನದ ಉಪವಾಸ ಸತ್ಯಾಗ್ರಹ ಹೋರಾಟದಲ್ಲಿ ಭಾಗವಹಿಸಿ, ಬೆಂಬಲ ನೀಡಿದ ನಂತರ ಮಾತನಾಡಿ, ಕೆಐಎಡಿಬಿಯು ಮಿತ್ತಲ್ ಕಂಪನಿಗಾಗಿ 2012ರಲ್ಲಿ ಸ್ವಾಧೀನ ಮಾಡಿಕೊಂಡಿದ್ದ ಸಾವಿರಾರು ಎಕರೆಯಷ್ಟು ಜಮೀನನ್ನು ಈಗ ಅಕ್ರಮವಾಗಿ ಜಿಂದಾಲ್ ಕಂಪನಿಗೆ ನೀಡಲಾಗಿದೆ. ಯಾವ ಉದ್ದೇಶಕ್ಕೆ ವಶಕ್ಕೆ ಪಡೆಯಲಾಗಿತ್ತೋ ಅದೇ ಉದ್ದೇಶಕ್ಕೆ ಭೂಮಿ ಬಳಸಬೇಕಿತ್ತು. ಈಗ ಜಿಂದಾಲ್ಗೆ ಹಸ್ತಾಂತರ ಮಾಡುತ್ತಿರುವುದು ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ಭೂ ಪರಭಾರೆ ವಿರೋಧಿಸಿ ನಿರಂತರ ಧರಣಿ ಸತ್ಯಾಗ್ರಹ ಮತ್ತು ಉಪವಾಸದ ಹೋರಾಟ ಮಾಡುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಕುಮ್ಮಕ್ಕು ನೀಡಿ ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದರು.
ಜಂಗ್ಲಿಸಾಬ್, ಎಂ.ತಿಪ್ಪೇಸ್ವಾಮಿ, ಶ್ರೀನಿವಾಸ, ಜಮ್ಮಯ್ಯ, ಎಂ.ಮಾರೇಶ್, ರವಿ, ಅಂಬರೀಶ್, ತಿಮ್ಮಪ್ಪ, ಗಂಗಾಧರ, ಭಾವಿ ಶಿವಕುಮಾರ್, ಕಾಸಿಂ, ರಾಮಣ್ಣ, ದಿವಾಕರ ಬಾಬು, ವೀರಭದ್ರ, ವಿವೇಕಾನಂದ, ಹಾಲಪ್ಪ ಗಿರೀಶ್ ಇದ್ದರು.ಕುರುಗೋಡು 01 ಸಮೀಪದ ಕುಡತಿನಿಯಲ್ಲಿ ಬುಧವಾರ ನಡೆದ ಧರಣಿ, ಉಪವಾಸ ಸತ್ಯಾಗ್ರಹದಲ್ಲಿ ಸಂಪತಕುಮಾರ್ ಭಾಗವಹಿಸಿ, ಹೋರಾಟಕ್ಕೆ ಬೆಂಬಲ ನೀಡಿದರು.