ಸಾರಾಂಶ
ಬೆಳಗಾವಿ ದಕ್ಷಿಣ ಬಿಹಾರ ಆಗಿದ್ದು ನಿಜ
ಶಾಸಕ ಅಭಯ ಪಾಟೀಲ ವಿರುದ್ಧ ರಾಜಕುಮಾರ ಟೋಪಣ್ಣವರ ವಾಗ್ದಾಳಿ
ಕನ್ನಡಪ್ರಭ ವಾರ್ತೆ ಬೆಳಗಾವಿಅಭಯ ಪಾಟೀಲ ಶಾಸಕರಾದ ಬಳಿಕ ಬೆಳಗಾವಿ ದಕ್ಷಿಣ ಮತಕ್ಷೇತ್ರ ಬಿಹಾರ ಆಗಿದ್ದು ಸತ್ಯ ಎಂದು ಆಪ್ ಮುಖಂಡ ರಾಜಕುಮಾರ ಟೋಪಣ್ಣವರ ತಿರುಗೇಟು ನೀಡಿದರು.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು ಶಾಸಕ ಅಭಯ ಪಾಟೀಲರ ಅಸಲಿ ಮುಖ ಆ ಮತ ಕ್ಷೇತ್ರದ ಜನರಿಗೆ ಮಾತ್ರ ಗೊತ್ತಿದೆ. ಇವರ ಪಿತೂರಿಯಿಂದ ಜೈಲಿಗೆ ಹೋದವರ ಹಾಗೂ ಇವರಿಂದ ಕಿರುಕಳ ಅನುಭವಿಸಿದವರ ಲೆಕ್ಕವೇ ಇಲ್ಲ. ಬಿಲ್ಡರ್ಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅಭಯ ಪಾಟೀಲರ ಬಗ್ಗೆ ಕೇಳಿದರೆ ಎಷ್ಟು ಸಜ್ಜನರು ಎಂಬುವುದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.ತಿನಿಸು ಕಟ್ಟೆ ಬಗ್ಗೆ ತನಿಖೆ ನಡೆದರೆ ಹಿಂದೂ- ಮುಸ್ಲಿಂ ವಿಚಾರ ಪ್ರಸ್ತಾಪಿಸುವುದು, ನಗರ ಸೇವಕ, ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ವಿಷಯ ಕಾಂಗ್ರೆಸ್ ಹಾಗೂ ಬಿಜೆಪಿ ಜಗಳ ಎಂದು ಬಿಂಬಿಸುವುದೇ ಶಾಸಕರ ಸದ್ಗುಣ. ಅಭಯ ಪಾಟೀಲ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಎಷ್ಟು ಹಿಂದೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪ್ರೈವೇಟ್ ಲೇಔಟ್ ಹಾಕಲು ಅವಕಾಶ ನೀಡಿದ್ದಾರೆ?. ಅವರ ಸಹೋದರ ಲೇಔಟ್ ಹಾಕಿದ್ದೆಷ್ಟು?, ಉಳಿದ ಹಿಂದೂ ಉದ್ಯಮಿಗಳಿಗೆ ಅಭಯ ಪಾಟೀಲರು ಅಡ್ಡಗಾಲು ಹಾಕಿದ್ದೆಷ್ಟ? ಎಂಬುವುದನ್ನು ಹಿಂದೂ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ವಿಚಾರಿಸಿದರೆ ಅಭಯ ಪಾಟೀಲರು ಅದೆಷ್ಟು ಹಿಂದೂ ಪ್ರೇಮಿಗಳು ಎಂಬವುದು ಗೊತ್ತಾಗುತ್ತದೆ ಎಂದು ಪ್ರಶ್ನಿಸಿದರು.