ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಪ್ರಯುಕ್ತ ಸುದರ್ಶನ ಬಡಾವಣೆಯ ಮುನೀಶ್ವರ ದೇವಾಲಯ ಸಮಿತಿ ಮತ್ತು ಮುನೀಶ್ವರ ಯುವಕ ಸಂಘದ ವತಿಯಿಂದ ವಿವಿಧ ಕಾರ್ಯಕ್ರಮ ನಡೆಯಿತು.
ಸೋಮವಾರ ಬೆಳಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ಜರುಗಿತು. ಬಳಿಕ ಬಡಾವಣೆ ನಿವಾಸಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಆಂಜನೇಯ ದೇವಾಲಯಕ್ಕೆ ಕಾಲ್ನಡಿಗೆ ಮೂಲಕ ತೆರಳಿ ಅಲ್ಲಿ ಜರುಗಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.ರಾಮೋತ್ಸವ ಪ್ರಯುಕ್ತ ದೇವಾಲಯದಲ್ಲಿ ಸಂಜೆ ವಿಶೇಷ ಪೂಜೆ, ಪ್ರಾರ್ಥನೆ ಜರುಗಿತು. ಮಕ್ಕಳು ರಾಮ, ಸೀತೆಯ ವೇಷ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯರು ಭಕ್ತಿಗೀತೆಗಳನ್ನು ಹಾಡಿದರು. ನಂತರ ಸಮಿತಿ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಅಧ್ಯಕ್ಷತೆಯಲ್ಲಿ ಜರುಗಿದ ಸಭಾಕಾರ್ಯಕ್ರಮದಲ್ಲಿ ಅಯೋಧ್ಯೆಕರ ಸೇವೆಯಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕರನ್ನು ಸನ್ಮಾನಿಸಲಾಯಿತು.
1992ರ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಬಡಾವಣೆ ನಿವಾಸಿಗಳಾದ ಎಂ.ಪಿ. ಸುನೀಲ್ ಸುಬ್ರಹ್ಮಣಿ, ಮನು ಮಂಜುನಾಥ್, ಕೆ.ಆರ್. ರಮೇಶ್ ಅವರಿಗೆ ಫಲ ತಾಂಬೂಲ, ಅಯೋಧ್ಯೆ ರಾಮಮಂದಿರದ ಪ್ರತಿರೂಪವನ್ನು ನೀಡಿ ಸಮಿತಿ ಪದಾಧಿಕಾರಿಗಳು ಗೌರವಿಸಿದರು.ಬಳಿಕ ಮಾತನಾಡಿದ ಸುನೀಲ್ ಸುಬ್ರಹ್ಮಣಿ ಹಾಗೂ ಮಂಜುನಾಥ್, ತಾವು ಕರ ಸೇವೆಗಾಗಿ ಅಯೋಧ್ಯೆಗೆ ತೆರಳಿದ ಸಂದರ್ಭದ ಚಿತ್ರಣ, ಎದುರಾದ ಸಂದಿಗ್ಧ ಪರಿಸ್ಥಿತಿಯ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಬಿ.ಡಿ. ಜಗದೀಶ್ ರೈ ಮಾತನಾಡಿ, ಲಕ್ಷಾಂತರ ಮಂದಿಯ ಹೋರಾಟ, ತ್ಯಾಗದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನಿಮಾರ್ಣವಾಗಿದೆ. ಈ ಸಂದರ್ಭಕ್ಕೆ ಸಾಕ್ಷಿಯಾಗಿರುವ ನಾವು ಅದೃಷ್ಟವಂತರು. ಮಂದಿರ ನಿರ್ಮಾಣದ ಹಿಂದಿನ ತ್ಯಾಗ, ಬಲಿದಾನವನ್ನು ನಾವು ಮರೆಯುವಂತಿಲ್ಲ. ಹೀಗಾಗಿ ನಮ್ಮ ಬಡಾವಣೆಯ ಕರಸೇವಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಿದ್ದೇವೆ ಎಂದರು.ಸಮಿತಿ ಉಪಾಧ್ಯಕ್ಷ ಎಂ.ಕೆ. ಕಾವೇರಪ್ಪ, ಕಾರ್ಯದರ್ಶಿ ಕೆ.ಆರ್. ಪ್ರಸಾದ್, ಮಹಿಳಾ ಸಂಘ ಅಧ್ಯಕ್ಷೆ ಸುಶೀಲಾ, ನಗರಸಭೆ ಸದಸ್ಯೆ ಉಷಾ ಕಾವೇರಪ್ಪ, ದೇವಾಲಯ ಸಮಿತಿ ಮಾಜಿ ಅಧ್ಯಕ್ಷರಾದ ತಳೂರು ಆನಂದ, ಪಿ.ಟಿ. ಉನ್ನಿಕೃಷ್ಣ, ಸಲಹೆಗಾರ ತಮ್ಮಪ್ಪ ವೇದಿಕೆಯಲ್ಲಿದ್ದರು.
ವೈಷ್ಣವಿ ಶೆಟ್ಟಿ ಮತ್ತು ತಂಡದವರು ರಾಮನ ಕುರಿತ ಹಾಡು ಹಾಡಿದರು. ಶ್ರೀ ರಾಮಾಂಜನೇಯ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.