ಪ್ರಸ್ತುತ ವರ್ಷ ಮಳೆ ಇಲ್ಲದೇ ಇರುವುದರಿಂದ ಕೆರೆಯಲ್ಲಿ ನೀರು ಇಲ್ಲದಂತಾಗಿದೆ. ಹೀಗಾಗಿ ಕಳೆದ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದ ಇಟಗಿ ಏತ ನೀರಾವರಿ ಯೋಜನೆ ಕೂಡಲೇ ಪೂರ್ಣಗೊಳಿಸುವಂತೆ ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮುಂಡರಗಿ

ಪ್ರಸ್ತುತ ವರ್ಷ ಮಳೆ ಇಲ್ಲದೇ ಇರುವುದರಿಂದ ಕೆರೆಯಲ್ಲಿ ನೀರು ಇಲ್ಲದಂತಾಗಿದೆ. ಹೀಗಾಗಿ ಕಳೆದ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದ ಇಟಗಿ ಏತ ನೀರಾವರಿ ಯೋಜನೆ ಕೂಡಲೇ ಪೂರ್ಣಗೊಳಿಸುವಂತೆ ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಒತ್ತಾಯಿಸಿದರು.

ಗುರುವಾರ ಸಂಜೆ ಪಟ್ಟಣದ ಸಿಂಗಟಾಲೂರು ಏತ ನೀರಾವರಿ ನಿಗಮ ಕಚೇರಿಗೆ ಶಿರಹಟ್ಟಿ ಭಾಗದ ರೈತರೊಂದಿಗೆ ಆಗಮಿಸಿ ಕಾರ್ಯನಿರ್ವಾಹಕ ಅಭಿಯಂತರ ಐಗೋಳ ಪ್ರಕಾಶ ಮತ್ತು ಸಹಾಯಕ ಅಭಿಯಂತರ ಬಸವರಾಜ ಅವರೊಂದಿಗೆ ಚರ್ಚಿಸಿ ಮಾತನಾಡಿದರು.

ಇಟಗಿ ಏತ ನೀರಾವರಿ ಪೂರ್ಣಗೊಳ್ಳದೆ ಇರುವುದರಿಂದ ಈ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಗಳ ಕೆರೆ ತುಂಬಿಸದೆ ಈ ಭಾಗದಲ್ಲಿನ ರೈತರು ತೊಂದರೆ ಅನುಭವಿಸುತ್ತಿದ್ದಾರೆ

ಟೆಂಡರ್ ಕರೆದು ಎರಡು ವರ್ಷದೊಳಗೆ ಯೋಜನೆ ಮುಗಿಯಬೇಕಾಗಿತ್ತು. 8 ವರ್ಷವಾದರೂ ಪೂರ್ಣಗೊಂಡಿಲ್ಲ, ಈ ಯೋಜನೆ ವ್ಯಾಪ್ತಿಯ ವಡವಿ, ತಾರಿಕೊಪ್ಪ, ಸುಗ್ನಳ್ಳಿ, ಬೆಳ್ಳಟ್ಟಿ, ಚಬ್ಬಿ, ದೇವಿಹಾಳ, ವರವಿ, ಮಜ್ಜೂರ, ಕುಂದ್ರಳ್ಳಿ ಲಕ್ಷ್ಮೇಶ್ವರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಮಳೆ ಇಲ್ಲದಿರುವುದರದ ಭೂಮಿಯಲ್ಲಿನ ಅಂತರ್ಜಲ ಕುಸಿದಿದೆ ಹೀಗಾಗಿ ಕೂಡಲೇ ತುಂಗಭದ್ರ ನದಿ ನೀರಿನ ಮೂಲಕ ನೀರು ತುಂಬಿಸುವ ವ್ಯವಸ್ಥೆಯಾಗಬೇಕು ಎಂದು ರೈತರು ಒತ್ತಾಯಿಸಿದರು.

ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕಚೇರಿ ಮುಂದೆ ಕಾಮಗಾರಿ ಪ್ರಾರಂಭಿಸುವವರೆಗೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಭಿಯಂತರ ಐಗೋಳ ಪ್ರಕಾಶ ಕೆಲವು ತಾಂತ್ರಿಕ ಕಾರಣ ವಿವರಿಸಿದರು. ಸಂಬಂಧಪಟ್ಟ ಗುತ್ತಿಗೆದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮತ್ತು ಇಲಾಖೆಯಿಂದ ಬಾಕಿ ಇರುವ ಹಣವನ್ನು ಕೊಡುವ ಬಗ್ಗೆ ತಿಳಿಸಿದರು. ಸೆ. 14ರಿಂದ ಪುನಃ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭ ರೈತ ಮುಖಂಡರಾದ ಲಕ್ಷ್ಮಣಗೌಡ ಪಾಟೀಲ, ಕೆಲಸ ಪ್ರಾರಂಭಿಸದಿದ್ದರೆ ಇಲಾಖೆಯೇ ಹೊಣೆ ಎಂದು ಹೇಳಿದರು. ಜಗದೀಶಗೌಡ ಪಾಟೀಲ, ನಾಗನಗೌಡ ಪಾಟೀಲ, ಶಂಕ್ರಪ್ಪ ನೀರಲಗಿ, ಮಂಜಪ್ಪ, ಸೋಮು ಲಮಾಣಿ, ರಾಮಣ್ಣ ಕೆಂಚರೆಡ್ಡಿ, ಹನುಮಂತಪ್ಪ, ಶಿವನಗೌಡ ಇತರ ರೈತರು ಪಾಲ್ಗೊಂಡಿದ್ದರು.