ಸಾರಾಂಶ
ಬ್ಯಾಡಗಿ: ರಾಮಾಯಣ ಹಾಗೂ ಮಹಾಭಾರತ ಧರ್ಮ ಗ್ರಂಥಗಳಾಗಿದ್ದರೂ ಸಮಸ್ತ ಭಾರತೀಯರು ಅವುಗಳ ಪಾವಿತ್ರ್ಯತೆ ಕುರಿತು ಅಭಿಮಾನವನ್ನು ಹೊಂದಿರಬೇಕಾಗುತ್ತದೆ ಎಂದು ಹಾವೇರಿಯ ಮಾಜಿ ಶಾಸಕ ನೆಹರು ಓಲೇಕಾರ ಅಭಿಪ್ರಾಯಪಟ್ಟರು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ರೋಟರಿ ಇನ್ನರ್ವೀಲ್ ಹಾಗೂ ಕಾರುಣ್ಯ ಶಿಕ್ಷಣ ಸಂಸ್ಥೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರಿರಲಿ, ದಾರ್ಶನಿಕರಿರಲಿ, ಪ್ರತಿಯೊಂದು ಹಬ್ಬ ಹರಿದಿನ, ಸಂಪ್ರದಾಯ, ಜನ್ಮದಿನಾಚರಣೆ ಹಾಗೂ ಪುಣ್ಯಸ್ಮರಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ದೇಶದಲ್ಲಿ ವಿಶೇಷ ಅರ್ಥವನ್ನು ನೀಡಲಾಗಿದ್ದು, ಹೀಗಾಗಿ ಪ್ರತಿಯೊಂದು ಕಾರ್ಯಕ್ರಮಗಳನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ನೆರವೇರಿಸಲಾಗುವುದು ಎಂದರು.ಶ್ರೀಕೃಷ್ಣನನ್ನು ವಿಷ್ಣುವಿನ 8ನೇ ಅವತಾರವೆಂದು ಪರಿಭಾವಿಸಲಾಗಿದೆ. ಎಲ್ಲರಂತೆ ಅವರಿಗೂ ಮಾನವ ಸಹಜವಾದ ಎಲ್ಲ ಗುಣಾವಶೇಷಗಳಿದ್ದರೂ ದೇವರ ರೂಪದಲ್ಲಿ ಸಾಕ್ಷಾತ್ ಪರಿಚಿತರಾಗಿ ಮಹಾಭಾರತದ ಎಲ್ಲ ದೃಷ್ಟಾಂತಗಳಿಗೂ ಕಾರಣವಾಗಿದ್ದಲ್ಲದೇ ಕುರುಕ್ಷೇತ್ರ ಯುದ್ಧವು ಕೊನೆಯರೆಗೂ ಸತ್ಯವೇ ಗೆಲ್ಲಲಿದೆ. ಕರ್ಮ- ಧರ್ಮಗಳ ಮೇಲೆ ಬದುಕಿನ ಅವಕಾಶಗಳು ನಿಂತಿವೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.ಸಂಭ್ರಮದ ವಾತಾವರಣ: ಶ್ರೀಕೃಷ್ಣನ ವಿವಿಧ ಪೋಷಾಕುಗಳನ್ನು ಧರಿಸಿದ ಕಾರುಣ್ಯ ಶಿಕ್ಷಣ ಸಂಸ್ಥೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಶಿಕ್ಷಣ ಸಂಸ್ಥೆಯು ಚಿಣ್ಣರಿಂದ ವಿಶೇಷ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಪಾಲಕರು ಮಕ್ಕಳು ಅದರಲ್ಲೂ ವಿಶೇಷವಾಗಿ ಮುಸ್ಲಿಂ ಕುಟುಂಬದ ಪಾಲಕರೂ ತಮ್ಮ ಮಕ್ಕಳಿಗೆ ಶ್ರೀಕೃಷ್ಣನ ವೇಷ ಧರಿಸಿ ಪಾಲ್ಗೊಳ್ಳುವಂತೆ ನೋಡಿಕೊಂಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಬಿ.ಕೆ. ಸುರೇಖಾ, ರೋಟರಿ ಇನ್ನರವೀಲ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಸದಸ್ಯರಾದ ಕವಿತಾ ಸೊಪ್ಪಿನಮಠ, ರೂಪಾ ಕಡೇಕೊಪ್ಪ, ಸಂಧ್ಯಾರಾಣಿ ದೇಶಪಾಂಡೆ ಡಾ. ಬಿ.ಆರ್. ಅಂಬೇಡ್ಕರ ಶಿಕ್ಷಣ ಸಂಸ್ಥೆ ಮುಖ್ಯಶಿಕ್ಷಕಿ ಶೋಭಾ ನೋಟದ ಸೇರಿದಂತೆ ಎರಡೂ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಪಾಲಕರು ಪಾಲ್ಗೊಂಡಿದ್ದರು.