ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ನಿಮಿತ್ತವಾಗಿ ಗುರುವಾರ ಹೊರವಲಯದ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ರಂಜಾನ್ ಆಚರಿಸಿದರು. ನಗರದ ಸತ್ತಿ ರಸ್ತೆಯಲ್ಲಿರುವ ಈದ್ಗಾ ಮೈದಾನ ಮತ್ತು ಕ್ರೀಡಾಂಗಣದ ಬಳಿಯ ಈದ್ಗಾ ಮೈದಾನದಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಏಕಕಾಲಕ್ಕೆ ಎಲ್ಲರೂ ಸೇರಿಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಿದರು. ಈದ್ಗಾದಲ್ಲಿ ಮುಸ್ಲಿಂ ಧರ್ಮಗುರುಗಳು ಬೋಧನೆ ಮಾಡುತ್ತಿದ್ದಂತೆಯೇ, ಮುಸ್ಲಿಂ ಭಾಂಧವರು ವಿಶೇಷ ಪ್ರಾರ್ಥನೆ ಮಾಡಿದರು. ಬಡವ-ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ಥಿಸಿ, ಸುಖ, ಶಾಂತಿ, ಸಹಬಾಳ್ವೆ ನೆಮ್ಮದಿಯ ಜೀವನವನ್ನು ಕೋರಿದರು.ಈ ಸಂದರ್ಭದಲ್ಲಿ ಬೋಧನೆ ಮಾಡಿದ ಧರ್ಮಗುರುಗಳಾದ ಸಿರಾಜಿ ಮತ್ತು ಶಾಹಿದ್ಸೆಲ್ಪಿ ಎಲ್ಲಾ ಧರ್ಮಗಳು ಬೋಧಿಸುವುದು ಮಾನವೀಯತೆಯನ್ನು, ದಿನೇ ದಿನೇ ಮಾನವೀಯತೆ ಕಡಿಮೆಯಾಗುತ್ತಿದೆ. ನಾವು ಅಲ್ಲಾನಲ್ಲಿ ಪ್ರಾರ್ಥಿಸುವುದೇನೆಂದರೆ ಎಲ್ಲರಿಗೂ ನೆಮ್ಮದಿಯನ್ನು ಕೊಟ್ಟು ಸುಖ-ಶಾಂತಿಯಿಂದ ಇರಲಿ ಎಂಬುದೇ ನಮ್ಮ ಸಾಮೂಹಿಕ ಪ್ರಾರ್ಥನೆ ಸದುದ್ದೇಶವಾಗಿದ್ದು, ಎಲ್ಲರು ಕಡ್ಡಾಯವಾಗಿ ಮತದಾನ ಮಾಡಿ ಎಂದರು.ಪ್ರಾರ್ಥನೆ ಮುಗಿದ ಬಳಿಕ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯವನ್ನು ಖುಷಿಯಿಂದಲೇ ವಿನಿಯಮ ಮಾಡಿಕೊಂಡರು. ಗುರು-ಹಿರಿಯರು ಸೇರಿದಂತೆ, ಮಕ್ಕಳು, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಎಲ್ಲರೂ ಖುಷಿಯಿಂದ ಅಪ್ಪಿಕೊಂಡು ಸಂಭ್ರಮಿಸಿದರು. ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ರೋಜಾ ಆಚರಣೆ ಮಾಡಿದ ಮುಸ್ಲಿಂ ಬಾಂಧವರು ಹಬ್ಬದ ಮುನ್ನ ದಿನವೇ ಅದನ್ನು ಪೂರ್ಣಗೊಳಿಸಿ ಬೆಳಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಂಜಾನ್ ಹಬ್ಬ ಆಚರಣೆ ಮಾಡುವ ಮೂಲಕ ಇದಕ್ಕೆ ತೆರೆ ಬಿದ್ದಿತು.ಮಸೀದಿ, ಈದ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ತಮ್ಮ ಶಕ್ತಿಗನುಸಾರವಾಗಿ ದಾನ ಮಾಡುತ್ತಿರುವುದು ಕಂಡು ಬಂದಿತು. ಅದಲ್ಲದೇ ಹಿರಿಯರು ಮಕ್ಕಳ ಕೈಗೂ ಹಣ ಕೊಟ್ಟು ದಾನ ಮಾಡಿಸಿದರು. ತಮಗೆ ಆಪ್ತವಾಗಿರುವ ಹಿಂದೂ ಸ್ನೇಹಿತರನ್ನು ಮನೆಗೆ ಕರೆಯಿಸಿಕೊಂಡು ಅವರಿಗೂ ಸಿಹಿ ಜತೆಗೆ ಬಾಡೂಟದ ಭಕ್ಷ್ಯ ಭೋಜನಗಳನ್ನು ಬಡಿಸಿ ಖುಷಿಪಟ್ಟರು. ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರು ಜನರು ಸೇರಿದಂತೆ ಚಿಕ್ಕ ಚಿಕ್ಕ ಮಕ್ಕಳು ಪಾಲ್ಗೊಂಡು ಅಲ್ಲಾನ ಕೃಪೆಗೆ ಪಾತ್ರರಾದರು. ರಂಜಾನ್ ಹಬ್ಬದ ನಿಮಿತ್ತ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.