ಸಾರಾಂಶ
ಹುಬ್ಬಳ್ಳಿ:
ಟಾಟಾ ಗ್ರೂಪ್ ಅಧ್ಯಕ್ಷ, ಹಿರಿಯ ಕೈಗಾರಿಕೋದ್ಯಮಿ ರತನ ಟಾಟಾ ನಿಧನಕ್ಕೆ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯೂ ಶ್ರದ್ಧಾಂಜಲಿ ಸಲ್ಲಿಸಿದೆ.ರತನ ಟಾಟಾ ನಿಧನದಿಂದ ಭಾರತೀಯ ಕೈಗಾರಿಕೋದ್ಯಮದ ಒಂದು ಯುಗ ಅಂತ್ಯವಾದಂತೆ ಆಗಿದೆ. ದೇಶಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ಬದುಕು, ಸಾಧನೆಗಳ ಮೂಲಕ ಅಜರಾಮರ ಆಗಿದ್ದಾರೆ. ಶ್ರೇಷ್ಠತೆ, ಸಮಗ್ರತೆ ಮತ್ತು ನಾವೀನ್ಯತೆ ಅಚಲವಾದ ಬದ್ಧತೆಯೊಂದಿಗೆ ಟಾಟಾ ಗ್ರೂಪ್ ಜಾಗತಿಕವಾಗಿ ಪಸರಿಸಿದೆ. ಲೋಕೋಪಕಾರ ಮತ್ತು ಸಾಮಾಜಿಕ ಜವಾಬ್ದಾರಿ, ಸಮಾಜದ ಅಭಿವೃದ್ಧಿಗೆ ರತನ ಟಾಟಾ ಅವರ ಸಮರ್ಪಣೆ ಲಕ್ಷಾಂತರ ಜನರ ಜೀವನ ಮುಟ್ಟಿದೆ ಎಂದು ಸಂಸ್ಥೆ ತಿಳಿಸಿದೆ.
ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ರತನ ಟಾಟಾ ಅವರ ಮಾನವೀಯತೆ ಗುಣ ಹಾಗೂ ಮುಂದಿನ ಪೀಳಿಗೆಗೆ ಅವರ ನಡೆ ನುಡಿಗಳು ಆದರ್ಶ ಎಂದರು. ಮೃತರ ಆತ್ಮಕ್ಕೆ ಚಿರಶಾಂತಿ ಹಾಗೂ ಸದ್ಗತಿಯನ್ನು ಪರಮಾತ್ಮನು ದಯಪಾಲಿಸಲಿ ಎಂದು ಪ್ರಾರ್ಥಿಸಿ, ರತನ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ಸಭೆಯಲ್ಲಿ ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಬಸವರಾಜ ಯಕಲಾಸಪೂರ, ದೀಪಕ ಪಾಟೀಲ, ಪ್ರವೀಣ ಅಗಡಿ ರವೀಂದ್ರ ಎಸ್. ಬಳಿಗಾರ, ಬ್ರಹ್ಮಕುಮಾರ ಬೀಳಗಿ, ಬಿ.ಬಿ. ಪಾಟೀಲ, ವಿದ್ಯಾಧರ ಯಲಗಚ್ಚ, ಅಶೋಕ ಲದವಾ ಹಾಗೂ ಸುಹಾಸ ಜವಳಿ ಇತರರಿದ್ದರು.ಹೆಸರಾಂತ ಉದ್ಯಮಿ, ಸಮಾಜ ಸೇವಕ, ಭಾರತದ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಸ್ಥಾಪಿಸಿ ಲಕ್ಷಾಂತರ ಜನರ ಬದುಕು ಕಟ್ಟಿದ ರತನ ಟಾಟಾ ನಿಧನ ದೇಶಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥ ರತನ ಟಾಟಾ ನಿಧನರಾಗಿರುವುದು ದೇಶಕ್ಕೆ ತುಂಬಲಾರದ ನಷ್ಟ ವುಂಟಾಗಿದೆ. ಟಾಟಾ ಕಂಪನಿಯ ವಾಹನಗಳ ಮೂಲಕ ತಮ್ಮದೊಂದು ಅಳಿಸಲಾಗದ ಹೆಜ್ಜೆ ಗುರುತುಗಳನ್ನು ರತನ ಟಾಟಾ ಮೂಡಿಸಿದ್ದಾರೆಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.