ರಥಸಪ್ತಮಿ: ಸಂಭ್ರಮದಿಂದ ನಡೆದ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ

| Published : Feb 06 2025, 12:16 AM IST

ರಥಸಪ್ತಮಿ: ಸಂಭ್ರಮದಿಂದ ನಡೆದ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಹಬ್ಬ ಹರಿದಿನ, ಜಾತ್ರೆ ಉತ್ಸವಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾಲೂಕಿನ ಹೇಮಗಿರಿ ಶ್ರೀಕ್ಷೇತ್ರದಲ್ಲಿ ನಡೆಯುವ ಭಾರಿ ದನಗಳ ಜಾತ್ರೆಯು ಇಡೀ ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸುಪ್ರಸಿದ್ಧ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವವು ರಥ ಸಪ್ತಮಿಯ ಪವಿತ್ರ ದಿನದೊಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.

ಶಾಸಕ ಎಚ್.ಟಿ.ಮಂಜು ಮತ್ತು ತಹಸೀಲ್ದಾರ್ ಡಾ.ಎಸ್.ಯು ಡಾ.ಅಶೋಕ್ ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಂತರ ಶಾಸಕರು ಮಾತನಾಡಿ, ಜಾತ್ರೆ, ರಥೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸುವುದರಿಂದ ಸ್ನೇಹ ಸಹಬಾಳ್ವೆಯು ಹೆಚ್ಚಾಗುವ ಮೂಲಕ ನೆಮ್ಮದಿ ಜೀವನಕ್ಕೆ ನಾಂಧಿಯಾಗಲಿದೆ ಎಂದರು.

ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಹಬ್ಬ ಹರಿದಿನ, ಜಾತ್ರೆ ಉತ್ಸವಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾಲೂಕಿನ ಹೇಮಗಿರಿ ಶ್ರೀಕ್ಷೇತ್ರದಲ್ಲಿ ನಡೆಯುವ ಭಾರಿ ದನಗಳ ಜಾತ್ರೆಯು ಇಡೀ ದಕ್ಷಿಣ ಭಾರತದಲ್ಲಿಯೇ ಹೆಸರುವಾಸಿಯಾಗಿದೆ ಎಂದರು.

ಕರ್ನಾಟಕ, ಕೇರಳ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದ ರಾಸುಗಳು ಬರುತ್ತವೆ. ಈ ಭಾರಿ ಜಾನುವಾರುಗಳಿಗೆ ಗಂಟು ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಸುಗಳನ್ನು ಜಾತ್ರೆ ಕರೆತರಬಾರದು ಎಂದು ಜಿಲ್ಲಾಡಳಿತ ನಿಬಂಧ ಹೇರಿತ್ತು. ಆದರೆ, ರೈತರು ತಮ್ಮ ಸಾಂಪ್ರದಾಯಿಕ ರಾಸುಗಳ ಜಾತ್ರೆಗೆ ಹೋಗುತ್ತೇವೆ ಎಂದು ಸಾಕಷ್ಟು ಅಂತರ ಕಾಯ್ದುಕೊಂಡು ಗಂಟು ರೋಗ ಬಾದೆ ಬೇರೆ ರಾಸುಗಳಿಗೆ ತಗಲದೇ ಇರುವಂತೆ ನೋಡಿಕೊಂಡು ಜಾತ್ರೆಯನ್ನು ನಡೆಸಿದ್ದಾರೆ ಎಂದರು.

ರೈತರ ಒತ್ತಾಯ ಮಣಿದು ತಾಲೂಕು ಆಡಳಿತ ರೈತರಿಗೆ ಯಾವುದೇ ತೊಂದರೆ ನೀಡದಂತೆ ಮೂಲ ಸೌಕರ್ಯ ಒದಗಿಸಿಕೊಡುವ ಮೂಲಕ ಸಹಕಾರ ನೀಡಿರುವುದು ಶ್ಲಾಘನೀಯ ಎಂದರು.

ಹೇಮಗಿರಿ ಬೆಟ್ಟದ ಮೇಲೆ ನೆಲೆಸಿರುವ ಶ್ರೀರಂಗನಾಥಸ್ವಾಮಿಯ ದರ್ಶನ ಪಡೆದ ಭಕ್ತರು ಧನ್ಯರಾದರು. ಈ ಬಾರಿ ರಾಸುಗಳ ಜಾತ್ರೆಗೆ ತಾಲೂಕು ಆಡಳಿತ ಸೂಕ್ತ ಸೌಕರ್ಯ ಕೈಗೊಳ್ಳದಿದ್ದರೂ ರೈತರು ಸಾವಿರಾರು ಸಂಖ್ಯೆಯಲ್ಲಿ ತಮ್ಮ ರಾಸುಗಳನ್ನು ಕರೆತಂದು ಸಾಂಪ್ರದಾಯಿಕ ದನಗಳ ಜಾತ್ರೆಯ ಹಿರಿಮೆ ಉಳಿಸಿದರು.

ಆದರೂ ಪ್ರತಿ ವರ್ಷದಂತೆ ಹೆಚ್ಚಿನ ಮಟ್ಟದಲ್ಲಿ ರಾಸುಗಳು ಆಗಮಿಸಿದ ಹಿನ್ನೆಲೆಯಲ್ಲಿ ಜಾತ್ರೆ ರಂಗು ಕಂಗೊಳಿಸಿತು. ಜಾತ್ರಾ ಮಹೋತ್ಸವಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಆನಂದೇಗೌಡ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಈ ವೇಳೆ ಸಮಾಜ ಸೇವಕರಾದ ಆರ್.ಟಿಓ ಮಲ್ಲಿಕಾರ್ಜುನ್, ಬಂಡಿಹೊಳೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ, ಸದಸ್ಯ ದರ್ಶನ್, ಕಸಬಾ ಹೋಬಳಿ ರಾಜಸ್ವನಿರೀಕ್ಷಕ ಜ್ಞಾನೇಶ್, ಮುಖಂಡರಾದ ಅಶೋಕ್, ಕಾಯಿ ಮಂಜೇಗೌಡ, ಕುಪ್ಪಹಳ್ಳಿ ಶೇಷಾದ್ರಿ, ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಬ್ರಹ್ಮ ರಥೋತ್ಸವಕ್ಕೆ ಹಣ್ಣು ಜವನ ಸಮರ್ಪಿಸಿದರು. ಗೋವಿಂದ, ಗೋವಿಂದಾ, ಜಯ ಜಯ ಶ್ರೀ ವೆಂಕಟರಮಣ ಎಂಬ ಜಯ ಘೋಷಗಳೊಂದಿಗೆ ಬೆಟ್ಟದ ಸುತ್ತ ರಥ ಎಳೆದು ದೇವರ ಕೃಪೆಗೆ ಪಾತ್ರರಾದರು.