ಸಾರಾಂಶ
ನಾವು ಹಣ ಗಳಿಸುವ ಮಷಿನ್ಗಳಾದರೆ ಧರ್ಮ, ಸಂಸ್ಕೃತಿಗೆ ಸ್ಥಾನವಿಲ್ಲವಾಗುತ್ತದೆ.
ಯಲ್ಲಾಪುರ: ನಾವು ಹಣ ಗಳಿಸುವ ಮಷಿನ್ಗಳಾದರೆ ಧರ್ಮ, ಸಂಸ್ಕೃತಿಗೆ ಸ್ಥಾನವಿಲ್ಲವಾಗುತ್ತದೆ. ಧರ್ಮದ ಬಗ್ಗೆ ಆಸ್ತೆ, ದೇಶದ ಬಗ್ಗೆ ಶ್ರದ್ಧೆಯನ್ನು ರೂಢಿಸಿಕೊಂಡು ಸಾಗಬೇಕು ಎಂದು ನಾರಾಯಣ ಭಟ್ಟ ಬೆಣ್ಣೆ ಹೇಳಿದರು.ಅವರು ಪಟ್ಟಣದ ಈಶ್ವರ ಗಲ್ಲಿಯ ಉಮಾಮೇಶ್ವರ ದೇವಸ್ಥಾನದಲ್ಲಿ ನೂತನ ಶಿವಲಿಂಗ, ನಂದಿ, ನಾಗದೇವರ ಪ್ರತಿಷ್ಠೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿಯೇ ದೊಡ್ಡ ಈಶ್ವರ ಲಿಂಗದ ಪ್ರತಿಷ್ಠಾಪನೆ ಆಗಿದೆ. ದೇವರ ಮೂರ್ತಿ ಪ್ರತಿಷ್ಠಾಪನೆ ಆದರೆ ಸಾಲದು. ನಿತ್ಯ ವೇದ ಪಾರಾಯಣ, ಅಭಿಷೇಕ, ಪೂಜೆ, ಅನ್ನಶಾಂತರಿಯ ಮೂಲಕ ದೇವರ ಕಲಾಭಿವೃದ್ಧಿಯಾಗುತ್ತದೆ ಎಂದರು.ಪ್ರತಿಷ್ಠಾಪನಾ ಹೋಮ, ಬಂಧ ಶುದ್ಧಿ, ರತ್ನ ನ್ಯಾಸಾದಿ ಹೋಮ, ಸ್ತೋತ್ರಾವಾಹನೆ, ಕವಾಟ ಬಂಧನ, ತತ್ವ ಹೋಮ, ಅಧಿವಾಸ ಹೋಮ, ಕವಾಟೋದ್ಘಾಟನೆ, ಧ್ವಜಾರೋಹಣ, ಬಲಿ, ಬ್ರಹ್ಮ ಕಲಶ ಪ್ರತಿಷ್ಠೆ, ಕಲಾ ಪೂರಣೆ, ಕಲಾತತ್ವ ಹೋಮ, ಬ್ರಹ್ಮಕಲಶ ಬಲಿ ಮುಂತಾದ ಕಾರ್ಯಕ್ರಮಗಳು ತಾಂತ್ರಿಕರಾದ ನಾರಾಯಣ ಭಟ್ಟ ಬೆಣ್ಣೆ ಅವರ ಆಚಾರತ್ವದಲ್ಲಿ ದೇವಸ್ಥಾನದ ಅರ್ಚಕ ನಾಗೇಂದ್ರ ಭಟ್ಟ ಯಜಮಾನತ್ವದಲ್ಲಿ ೧೨ ವೈದಿಕರಿಂದ ನಡೆಯಿತು.
ಶನಿವಾರ ಪೂಜಾ ಹೋಮ, ಶಾಂತಿ ಪ್ರಾಯಶ್ಚಿತ ಹೋಮ, ಮೂಲಮಂತ್ರ ಹೋಮ, ಕುಂಭಾಭಿಷೇಕ, ಚಂಡಿಕಾ ಹೋಮ, ಮಹಾ ಅನ್ನಸಂತರ್ಪಣೆ ನಡೆಯಿತು.ಈಶ್ವರ ಗಲ್ಲಿಯ ಉಮಾಮೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವ ನಡೆಯಿತು.