ಲೋಕಸಭಾ ಚುನಾವಣೆಗೆ ಸಜ್ಜಾಗಿ: ಜಿಲ್ಲಾಧಿಕಾರಿ ನಳಿನ್ ಅತುಲ್

| Published : Feb 06 2024, 01:31 AM IST

ಸಾರಾಂಶ

ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರಳ ಮತದಾನ ಪ್ರಕ್ರಿಯೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮತಗಟ್ಟೆಗೆ ಒದಗಿಸಲು ಸೆಕ್ಟರ್ ಅಧಿಕಾರಿಗಳು ಕ್ರಮ ವಹಿಸಬೇಕು.

ಕೊಪ್ಪಳ: ಚುನಾವಣಾ ಕರ್ತವ್ಯ ಬಹಳ ಸೂಕ್ಷ್ಮತೆಯಿಂದ ಕೂಡಿದೆ. ಅತಿಸಣ್ಣ ವಿಷಯದ ನಿರ್ಲಕ್ಯ ಬಹಳ ದೊಡ್ಡ ಪರಿಣಾಮ ಬೀರಬಹುದು. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ ಈಗಿನಿಂದಲೇ ಅಚ್ಚುಕಟ್ಟಾಗಿ ಕರ್ತವ್ಯ ನಿಭಾಯಿಸಬೇಕು ಎಂದು ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.

ಸೋಮವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾ ಕಾರ್ಯಾಲಯದಿಂದ ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಸೆಕ್ಟರ್ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಸೆಕ್ಟರ್ ಅಧಿಕಾರಿಗಳಿಗೆ ನಿರ್ದಿಷ್ಟ ಸಂಖ್ಯೆಯ ಮತಗಟ್ಟೆಗಳನ್ನು ಹಂಚಿಕೆ ಮಾಡಲಾಗಿದೆ. ಚುನಾವಣಾ ಪೂರ್ವ ಸಿದ್ಧತೆಯ ಅಂಗವಾಗಿ ಸೆಕ್ಟರ್ ಅಧಿಕಾರಿಗಳು ತಮಗೆ ಹಂಚಿಕೆ ಮಾಡಿದ ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳು, ಮತದಾರರ ಪಟ್ಟಿ, ಮಹಿಳಾ ಮತ್ತು ಪುರುಷ ಮತದಾರರ ಸಂಖ್ಯೆ, ಅದರಲ್ಲಿ ವಯೋವೃದ್ಧರು, ವಿಕಲಚೇತನರ ಸಂಖ್ಯೆ, ಮತಗಟ್ಟೆಯ ಸೂಕ್ಷ್ಮತೆ, ಈ ಹಿಂದೆ ಮತಗಟ್ಟೆಯಲ್ಲಿ ನಡೆದ ಗಲಾಟೆ, ದ್ವಂದ್ವ ಅಥವಾ ಘರ್ಷಣೆ ಮುಂತಾದವುಗಳ ಕುರಿತು ಮುಂಚಿತವಾಗಿಯೇ ಪರಿಶೀಲಿಸಬೇಕು ಎಂದರು.ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರಳ ಮತದಾನ ಪ್ರಕ್ರಿಯೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮತಗಟ್ಟೆಗೆ ಒದಗಿಸಲು ಸೆಕ್ಟರ್ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವುದೇ ಗೊಂದಲ, ಪ್ರಶ್ನೆಗಳು ಉಂಟಾದಾಗ ಚುನಾವಣಾ ಮೇಲಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ, ಸಲಹೆ ಪಡೆದು ಕಾರ್ಯನಿರ್ವಹಿಸಬೇಕು. ಇದೆಲ್ಲವನ್ನೂ ಮಾಡಲು ಮುಖ್ಯವಾಗಿ ಅಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ಮಾನಸಿಕವಾಗಿ ಸಿದ್ಧರಾಗಿರಬೇಕು. ಇದರಿಂದ ಚುನಾವಣಾ ಕರ್ತವ್ಯದ ಒತ್ತಡದಿಂದ ಪಾರಾಗಬಹುದು ಎಂದರು.ಮುಂಚಿತವಾಗಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡಾಗ ಒತ್ತಡದ ಕಾರ್ಯವಿರ್ವಹಣೆಗೆ ಅವಕಾಶವಿಲ್ಲ. ಚುನಾವಣಾ ಸಂಬಂಧಿತ ಎಲ್ಲ ತರಬೇತಿ, ಕಾರ್ಯಾಗಾರ, ಸಭೆಗಳಿಗೆ ತಪ್ಪದೇ ಹಾಜರಾಗಿ ನಿಮ್ಮ ಗೊಂದಲಗಳಿಗೆ ಪರಿಹಾರ ಕಂಡುಕೊಂಡು, ಸುಗಮ ಚುನಾವಣೆಗಳಿಗೆ ಸಹಕರಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಜಿಲ್ಲಾ ತರಬೇತ ಕೇಂದ್ರದ ಪ್ರಾಚಾರ್ಯ, ತರಬೇತಿದಾರ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಚುನಾವಣಾ ಮುನ್ನಾದಿನ ಪ್ರತಿ ಮತಗಟ್ಟೆಯ ಸುವ್ಯವಸ್ಥೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಚುನಾವಣಾ ದಿನ ಅಣಕು ಮತದಾನವನ್ನು ಕಡ್ಡಾಯವಾಗಿ ನಡೆಸಬೇಕು. ಇದರಿಂದ ವಿವಿ ಪ್ಯಾಟ್‌ಗಳ ಕಾರ್ಯನಿರ್ವಹಣೆ ಪರಿಶೀಲಿಸಲು ಸಹಾಯಕವಾಗುತ್ತದೆ. ಪೋಲಿಂಗ್ ಏಜೆಂಟ್‌ಗಳ ಹಾಜರಿ, ಗೈರು ಹಾಜರಿ ಬಗ್ಗೆ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ಇರಬೇಕು ಎಂದರು.ಅಗತ್ಯ ಪೊಲೀಸ್ ಭದ್ರತೆಗೆ ಕ್ರಮ ವಹಿಸಬೇಕು. ಸೆಕ್ಟರ್ ಅಧಿಕಾರಿಗಳು ನಿಗದಿಪಡಿಸಿದ ನಮೂನೆಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಾಲಕಾಲಕ್ಕೆ ವರದಿ ಸಲ್ಲಿಸಬೇಕು. ಸೆಕ್ಟರ್ ಅಧಿಕಾರಿಗಳಿಗೆ ಮತದಾನ ದಿನದ 7 ದಿನಗಳ ಮೊದಲು ವಲಯ ಮ್ಯಾಜಿಸ್ಟ್ರೇಟ್ ಅಧಿಕಾರಿಯ ಅಧಿಕಾರ ನೀಡಲಾಗುತ್ತದೆ. ಮತಗಟ್ಟೆಗಳ ವ್ಯಾಪ್ತಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು, ಯಾವುದೇ ತೊಂದರೆ ಉಂಟಾದಲ್ಲಿ ಅವುಗಳನ್ನು ಪರಿಹರಿಸಲು ಅಧಿಕಾರಿಗಳು ತಮ್ಮ ಅಧಿಕಾರ ಬಳಸಿಕೊಳ್ಳಬಹುದು ಎಂದರು.ತರಬೇತಿ ಕಾರ್ಯಕ್ರಮದಲ್ಲಿ ಎಸ್ಪಿ ಯಶೋದಾ ವಂಟಿಗೋಡಿ, ಎಸಿ ಕ್ಯಾ.ಮಹೇಶ್ ಮಾಲಗಿತ್ತಿ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಎಎಸ್‌ಪಿ ಹೇಮಂತ್‌ಕುಮಾರ್, ಡಿವೈಎಸ್‌ಪಿ ಮುತ್ತಣ್ಣ ಸವರಗೋಳ, ಚುನಾವಣಾ ಶಾಖೆಯ ನಾಗರಾಜ, ಪ್ರಸನ್ನ, ಅಧಿಕಾರಿ-ಸಿಬ್ಬಂದಿ ಇದ್ದರು.

ವಿವಿಪ್ಯಾಟ್ ಪ್ಯಾತ್ಯಕ್ಷಿಕೆ:ತರಬೇತಿಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ವಿವಿಪ್ಯಾಟ್ ಬಳಕೆ, ಮಸ್ಟರಿಂಗ್, ಡಿ-ಮಸ್ಟರಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.