ಸಚಿವರಾದ ಬಳಿಕ ಮೊದಲ ಬಾರಿಗೆ ಖಾತೆ ಬಗ್ಗೆ ಸಚಿವ ಸ್ಥಾನ ಕುರಿತು ಬಹಿರಂಗ ಹೇಳಿಕೆ । ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಸಚಿವ--

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಇದೆ. ಹಾಗಾಗಿಯೇ ನನಗೆ ಮಂತ್ರಿ ಸ್ಥಾನ ದೊರಕಿದ್ದು ಜಿಲ್ಲಾಭಿವೃದ್ಧಿಗೆ ಎಲ್ಲಾ ಶಾಸಕರನ್ನು ಒಗ್ಗೂಡಿಸಿಕೊಂಡು ಶ್ರಮಿಸುವೆ. ಜಿಲ್ಲೆಯಲ್ಲಿ ಯಾವ ಯಾವ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದರ ಕುರಿತು ಪಟ್ಟಿ ತಯಾರಿಸಿ ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಸಮಗ್ರ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಬೇಕಿದ್ದು ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುವೆ ಎಂದು ನೂತನ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.ಅವರು ಕೊಳ್ಳೇಗಾಲದಲ್ಲಿ ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮರಾಜನಗರ, ಹನೂರು ಹಾಗೂ ಗುಂಡ್ಲುಪೇಟೆಯ ಆಯ್ದ ಗ್ರಾಮಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಕುರಿತು ಎಲ್ಲೆಲ್ಲಿ ಸಮಸ್ಯೆಗಳಿವೆ. ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ನನಗೆ ಮುಖ್ಯಮಂತ್ರಿಗಳು ಯಾವುದೇ ಖಾತೆ ಕೊಟ್ಟರು ನಿಭಾಯಿಸುವೆ. ಇಂತಹ ಖಾತೆ ಬೇಕು ಎಂದು ಪಟ್ಟು ಹಿಡಿಯುವುದಿಲ್ಲ. ಎಲ್ಲರನ್ನು ಒಗ್ಗೂಡಿ ಮುಂದಿನ ಸ್ಥಳೀಯ ಸಂಸ್ಥೆಯಲ್ಲಿ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡುವುದು ನನ್ನ ಆದ್ಯತೆ ಎಂದರು.ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ಪಟ್ಟಣ ಸಮಗ್ರ ಅಭಿವೃದ್ಧಿಯಾಗಬೇಕು ಎಂಬ ಚಿಂತನೆ ನನ್ನದಾಗಿದ್ದು, ಈ ನಿಟ್ಟಿನಲ್ಲಿ ಮುಂದೆ ಸಾಗುವೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಸಂಬಂಧ ಬೇಸರ ಮಾಡಿಕೊಂಡಿದ್ದಾರೆ ಎಂಬುದು ನನಗೆ ಕಂಡುಬಂದಿಲ್ಲ. 2028ರ ಚುನಾವಣೆಗೆ ಈಗಿನಿಂದಲೇ ಪಕ್ಷದ ಸಂಘಟನೆಗೆ ಮುಂದಾಗಿ ಮತ್ತೆ ಜಿಲ್ಲೆಯಲ್ಲಿ ಅಧಿಕಾರ ಹಿಡಿಯುವಂತೆ ಮಾಡುವುದು ನನ್ನ ಜವಾಬ್ದಾರಿಯೂ ಆಗಿದೆ. ಈ ನಿಟ್ಟಿನಲ್ಲಿ ಸಾಗುವೆ, ಕಾಂಗ್ರೆಸ್ ಪಕ್ಷಕ್ಕೆ ಹೊಸ ಜಿಲ್ಲಾಧ್ಯಕ್ಷರನ್ನು ನೇಮಿಸಿ ಸಂಘಟನೆಗೆ ಚುರುಕು ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಶಾಸಕ ಎ.ಆರ್‌. ಕೃಷ್ಣಮೂರ್ತಿ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್‌, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಜಿ.ಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವ ನಾಯಕ, ಹನೂರು ಬ್ಲಾಕ್ ಅಧ್ಯಕ್ಷ ಮುಕುಂದ ವರ್ಮ,ಉಪ್ಪಾರ ಸಂಘ ಅಧ್ಯಕ್ಷ ರಮೇಶ್, ಲೋಕೇಶ್ ನಂಜುಂಡಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ರೇಖಾ ರಮೇಶ್, ಭೀಮನಗರ ರಮೇಶ್, ಬಸ್ತೀಪುರ ಶಾಂತರಾಜು, ಮಲ್ಲಿಕಾರ್ಜುನ, ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಧರಣೇಶ್, ಸುಮಾ ಸುಬ್ಬಣ್ಣ, ಅಂಬೇಡ್ಕರ್‌ ಸಂಘದ ಅಧ್ಯಕ್ಷ ಆನಂದಮೂರ್ತಿ, ಮುಖಂಡರಾದ ಶೇಖರ್‌ ಬುದ್ಧ, ದಿಲೀಪ್, ಅಕ್ಮಲ್ ಪಾಷಾ, ಶಿವಮಲ್ಲು ಇದ್ದರು.--

ಪಟ್ಟಿ ಪರಿಷ್ಕರಣೆ ವೇಳೆ ನನ್ನ ಹೆಸರು ಹೊರಕ್ಕೆ: ಎಆರ್‌ಕೆ--

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ


3 ಬಾರಿ ಶಾಸಕನಾಗಿದ್ದ ನನಗೂ ಹಿರಿತನದ ಮೇಲೆ ಮನ್ನಣೆ ನೀಡಿ ಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಹೈಕಮಾಂಡ್ ನಾಯಕರು ರಾಜ್ಯ ನಾಯಕರಲ್ಲೂ ಮನವಿ ಮಾಡಿದ್ದೆ. ಕೊನೆ ಕ್ಷಣದವರೆವಿಗೂ ನನ್ನ ಹೆಸರು ಚರ್ಚೆಯಲ್ಲಿತ್ತು. ಮೈಸೂರಿನ ತನ್ವೀರ್‌ ಸೇಠ್ ಅವರಿಗೂ ಅವಕಾಶವಿತ್ತು. ಆದರೆ ಪಟ್ಟಿ ಪರಿಷ್ಕರಣೆ ವೇಳೆ ನನ್ನ ಹೆಸರನ್ನು ಕೈಬಿಡಲಾಗಿದೆ ಎಂದು ಶಾಸಕ ಎ.ಆರ್‌. ಕೃಷ್ಣಮೂರ್ತಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಡ್ 60 ಮಂದಿ ಪಟ್ಟಿಯನ್ನು ತಯಾರಿಸಿತ್ತು. ಆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಪಟ್ಟಿಯನ್ನು ನಂತರ 30ಕ್ಕಿಳಿಸಲಾಯಿತು. ಈ ವೇಳೆ ನನ್ನ ಹೆಸರು ಕೈಬಿಡಲಾಯಿತು. ಉಪ್ಪಾರ ಸಮಾಜದಿಂದ ಗೆದ್ದ ಏಕೈಕ ಶಾಸಕರು ಪುಟ್ಟರಂಗಶೆಟ್ಟರು. ಈ ಹಿನ್ನೆಲೆ ಆ ಸಮಾಜಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಅವರಿಗೆ ಸಚಿವ ಸ್ಥಾನ ನೀಡಿದೆ.ನಾವೆಲ್ಲರೂ ಒಗ್ಗಟ್ಟಾಗಿ ಜಿಲ್ಲಾಭಿವೃದ್ಧಿಗೆ ಮುಂದಾಗುತ್ತೇವೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ದುಡಿಯುತ್ತೇವೆ. ಜಿಲ್ಲಾಭಿವೃದ್ಧಿಗಾಗಿ ಸಚಿವರ ಜೊತೆ ಶ್ರಮಿಸುವೆ ಎಂದರು.--4ಕೆಜಿಎಲ್13

ಸಚಿವರಾದ ಬಳಿಕ ಪ್ರಪ್ರಥಮವಾಗಿ ಕೊಳ್ಳೇಗಾಲಕ್ಕೆ ಆಗಮಿಸಿದ ಸಚಿವ ಪುಟ್ಟರಂಗಶೆಟ್ಟನ್ನು ಶಾಸಕ ಎ.ಆರ್‌. ಕೃಷ್ಣಮೂರ್ತಿ ಹಾರ ಹಾಕಿ ಸ್ವಾಗತಿಸಿದರು.--4ಕೆಜಿಎಲ್ 14

ಸಚಿವ ಪುಟ್ಟರಂಗಶೆಟ್ಟಿ ಅವರು ಕೊಳ್ಳೇಗಾಲದ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.