ಸಾರಾಂಶ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದು ತಪ್ಪು. ಕೇಂದ್ರದ ನಾಯಕರು ಈ ಕುರಿತು ಮರು ಪರಿಶೀಲನೆ ಮಾಡಲಿ ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ಶಿರಸಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದು ತಪ್ಪು. ಕೇಂದ್ರದ ನಾಯಕರು ಈ ಕುರಿತು ಮರು ಪರಿಶೀಲನೆ ಮಾಡಲಿ ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಕುರಿತು ನೇರ ಮಾತುಗಳನ್ನಾಡುವ ಯತ್ನಾಳ ಅವರಿಂದ ಪಕ್ಷಕ್ಕೆ ಮುಜುಗರ ಆಗಿರಬಹುದು. ಆದರೆ ಅವರ ಉಚ್ಚಾಟನೆ ಹಿಂಪಡೆದು ಹಿಂದುತ್ವದ ಪರವಾಗಿ ಬಿಜೆಪಿ ನಿಲ್ಲುವಂತೆ ಮಾಡಬೇಕು. ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದಲೂ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ನ ಒಂದು ಭಾಗ, ಅದು ಹೊಸದಲ್ಲ. ಆದರೆ ಗುತ್ತಿಗೆಯಲ್ಲಿ ಶೇ. ೪ರಷ್ಟು ಮೀಸಲಾತಿ ನೀಡಿರುವುದು ಸಂವಿಧಾನ ವಿರೋಧಿ. ಅದು ಕಾನೂನಾತ್ಮಕವಾಗಿ ನಿಲ್ಲುವುದಿಲ್ಲ ಎಂದು ತಿಳಿದಿದ್ದರೂ ಕಾಂಗ್ರೆಸ್ ಜಾರಿಗೆ ತಂದಿದೆ. ಇದೊಂದು ನಾಟಕೀಯ ನಡೆಯಾಗಿದೆ. ರಾಷ್ಟ್ರದ ಹಿತ ಮೀರಿ ತುಷ್ಟೀಕರಣ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ಸಿನಲ್ಲಿರುವ ಹಿಂದೂಗಳ ಕುಟುಂಬವೂ ಉಳಿಯುವುದಿಲ್ಲ. ಭಯೋತ್ಪಾದಕರನ್ನು, ದೇಶದ್ರೋಹಿಗಳನ್ನು ಬೆಳೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿಯವರ ಸೌಗತ್ ಎ ಮೋದಿ ಹೆಸರಿನಲ್ಲಿ ರಂಜಾನ್ಗಾಗಿ ೩೨ ಲಕ್ಷ ಕಿಟ್ ಕೊಟ್ಟಿರುವುದನ್ನು ನಾನು ವಿರೋಧಿಸುತ್ತೇನೆ. ಈ ಹಿಂದೆ ಅಜ್ಮೀರ್ ದರ್ಗಾಕ್ಕೂ ಪ್ರಧಾನಿ ಮೋದಿ ಚಾದರ್ ಕಳಿಸಿದ್ದರು. ಅದನ್ನೂ ಖಂಡಿಸುತ್ತೇವೆ. ಬಿಜೆಪಿಯವರೂ ತುಷ್ಟೀಕರಣದತ್ತ ವಾಲುತ್ತಿದ್ದಾರೆ ಎಂದು ಅನಿಸುತ್ತಿದೆ. ಬಿಜೆಪಿಯವರ ಯೋಜನೆ, ಯೋಚನೆ ಏನಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಹಿಂದುತ್ವವಾದಿಗಳನ್ನು ಕಡೆಗಣಿಸುತ್ತಿರುವುದೂ ಮುಂದಿನ ದಿನಗಳಲ್ಲಿ ಅಪಾಯ. ಇದನ್ನು ಬಿಜೆಪಿಯ ಕೇಂದ್ರ ಮತ್ತು ರಾಜ್ಯದವರು ಅರ್ಥ ಮಾಡಿಕೊಳ್ಳಬೇಕು. ಲೂಟಿಕೋರರು, ಭ್ರಷ್ಟರನ್ನು ಶುದ್ಧ ಬಿಜೆಪಿಯ ಒಳಗಡೆ ಬಿಟ್ಟುಕೊಳ್ಳುವುದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮನೆಯಲ್ಲಿ ಲವ್ ಜಿಹಾದ್ ಕುರಿತಾಗಿ ಶ್ರೀರಾಮ ಸೇನೆಯಿಂದ ಪ್ರಕಟ ಮಾಡಿರುವ ಪುಸ್ತಕ ಬಿಡುಗಡೆ ಮಾಡಲಾಯಿತು.