ಸಾರಾಂಶ
ಕೊಪ್ಪಳ:
ಜಗತ್ತಿನಲ್ಲಿ ತಟಸ್ಥ ನಿಲುವಿನೊಂದಿಗೆ ಸ್ಥಾಪನೆಯಾಗಿರುವ ರೆಡ್ ಕ್ರಾಸ್ ಸಂಸ್ಥೆ ಮನುಷ್ಯ ನಿರ್ಮಿತ, ನಿಸರ್ಗ ನಿರ್ಮಿತ ವಿಪತ್ತು ನಿರ್ವಹಣೆಯಲ್ಲಿ ಸೇವೆ ಸಲ್ಲಿಸುವ ಸಂಸ್ಥೆಯಾಗಿದೆ ಎಂದು ಪ್ರಾಚಾರ್ಯರಾದ ಉಷಾದೇವಿ ಹಿರೇಮಠ ಹೇಳಿದರು.ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ, ಕೊಪ್ಪಳದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಆಶ್ರಯದಲ್ಲಿ ನಡೆದ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಕೇವಲ ಲೈಕ್, ಕಮೆಂಟ್ನಲ್ಲಿಯೇ ಕಾಲಕಳೆಯುವ ಯುವಸಮೂಹ ಇಂಥ ಸಂಸ್ಥೆಯಲ್ಲಿ ಸೇರಿಕೊಂಡು ಸೇವೆ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರಮನ್ ಸೋಮರಡ್ಡಿ ಅಳವಂಡಿ, ದೇಶಕ್ಕಾಗಿ ಸೇವೆ ಸಲ್ಲಿಸುವದಿದ್ದರೆ ರೆಡ್ ಕ್ರಾಸ್ ಸಂಸ್ಥೆಯಲ್ಲಿ ತೊಡಗಿಕೊಳ್ಳಿ. ಇಲ್ಲಿ ಜಾತಿ, ಮತ, ಪಂಥ ಸೇರಿದಂತೆ ದೇಶಗಳ ತಾರತಮ್ಯವಿಲ್ಲ. ಸೇವೆಯೇ ಮುಖ್ಯವಾಗಿರುತ್ತದೆ. ಸಂಸ್ಥೆಯಿಂದ ಫಲಾಪೇಕ್ಷೆ ನಿರೀಕ್ಷಿಸದೆ ಯುವಕರು ಸೇವೆ ಸಲ್ಲಿಸಬೇಕಾಗುತ್ತದೆ ಎಂದರು.ಉಪನ್ಯಾಸಕ ಬಸವರಾಜು ಎಸ್.ಎಂ. ಪ್ರಾಸ್ತಾವಿಕ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ೧೮೫೮ರಲ್ಲಿ ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್ಗಳ ನಡುವೆ ಯುದ್ಧ ನಡೆದಾಗ ಸಾಕಷ್ಟು ಸೈನಿಕರು ಮತ್ತು ಜನರು ಯುದ್ಧದ ಭೀತಿಯಿಂದ ಗಾಯಗೊಂಡಾಗ ಮತ್ತು ಮೃತರಾದಾಗ ಅವರನ್ನು ಉಪಚರಿಸುವ ವ್ಯಕ್ತಿಗಳು ಯಾರು ಇರಲಿಲ್ಲ. ಆಗ ನೆಪೋಲಿಯನ್ ಜತೆ ವ್ಯವಹಾರಕ್ಕಾಗಿ ಸರ್ ಜಾನ್ ಹೆನ್ರಿ ಡ್ಯೂನೆಂಟ್ ಅವರು ಆಗಮಿಸುವಾಗ ಆ ಗಾಯಗೊಂಡವರನ್ನು ನೋಡಿ, ಅವರನ್ನು ಉಪಚರಿಸಿದರು. ಪ್ರಥಮ ಚಿಕಿತ್ಸೆಯನ್ನು ನೀಡಲ್ಪಟ್ಟರು. ನಂತರ ೧೮೬೩ರಲ್ಲಿ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಜಿನೇವಾದಲ್ಲಿ ಸ್ಥಾಪಿಸಲ್ಪಟ್ಟರು. ನಂತರ ಭಾರತದಲ್ಲಿ ೧೯೨೦ರಲ್ಲಿ ಮತ್ತು ಕರ್ನಾಟಕದಲ್ಲಿ ೧೯೨೧ರಲ್ಲಿ ರೆಡ್ ಕ್ರಾಸ್ ಸಂಸ್ಥೆ ಸ್ಥಾಪಿತವಾಯಿತು ಎಂದು ಸಂಸ್ಥೆಯ ಮಾಹಿತಿ ನೀಡಿದರು.
ಉಪನ್ಯಾಸಕರಾದ ಯು.ಎಸ್. ಸೊಪ್ಪಿಮಠ, ಜ್ಯೋತಿ ರೊಟ್ಟಿ, ಶರಣಬಸಪ್ಪ ಪಾಟೀಲ, ಸುಧಾ, ನಿಜಾಮುದ್ದೀನ್, ಸೌಮ್ಯ ನಾಲ್ವಾಡ ಸೇರಿದಂತೆ ಇತರರು ಇದ್ದರು.