ಸಾರಾಂಶ
ತಾಲೂಕಿನಲ್ಲಿ ಅಧಿಕ ತೆಂಗು ಬೆಳೆಗಾರರಿರುವುದರಿಂದ ಇನ್ನೂ ಹೆಚ್ಚಿನ ಕೊಬ್ಬರಿ ಕೇಂದ್ರ ತೆರೆಯುವಂತೆ ಈಗಾಗಲೇ ರೈತ ಸಂಘಟನೆಗಳು ಒತ್ತಾಯಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರದ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲ ದಿನವೇ ರೈತರ ನೂಕು ನುಗ್ಗಲು । ಹೆಚ್ಚಿನ ಕೇಂದ್ರ ತೆರೆಯುವಂತೆ ರೈತರ ಆಗ್ರಹ
ಕನ್ನಡಪ್ರಭ ವಾರ್ತೆ ಗುಬ್ಬಿಪಟ್ಟಣ ಹಾಗೂ ಚೇಳೂರಿನಲ್ಲಿ ಕೊಬ್ಬರಿ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ರೈತರಿಗೆ ಅನುಕೂಲವಾಗುವಂತೆ ಸರ್ಕಾರದ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ನೋಂದಣಿ ಪ್ರಕ್ರಿಯೆಯು ಸೋಮವಾರದಿಂದ ಪ್ರಾರಂಭವಾಗಿದೆ. ಮೊದಲ ದಿನ ರೈತರು ನೋಂದಣಿಗಾಗಿ ನೂಕು ನುಗ್ಗಲಿನಲ್ಲಿ ನಿಂತಿದ್ದು ಕಂಡು ಬಂದಿತು.
ತಾಲೂಕಿನಲ್ಲಿ ಅಧಿಕ ತೆಂಗು ಬೆಳೆಗಾರರಿರುವುದರಿಂದ ಇನ್ನೂ ಹೆಚ್ಚಿನ ಕೊಬ್ಬರಿ ಕೇಂದ್ರ ತೆರೆಯುವಂತೆ ಈಗಾಗಲೇ ರೈತ ಸಂಘಟನೆಗಳು ಒತ್ತಾಯಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರದ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿದಿನಕ್ಕೆ ಕೇವಲ 150 ಟೋಕನ್ ವಿತರಿಸಲು ಮಾತ್ರ ಸಾಧ್ಯವಾಗಿರುವುದರಿಂದ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ತ್ವರಿತವಾಗಿ ನೋಂಣಿಯಾಗುವಂತೆ ಕ್ರಮ ವಹಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ. ಈ ಬಾರಿ ನೋಂದಣಿ ಜೊತೆಗೆ ಬಯೋಮೆಟ್ರಿಕ್ ಕಡ್ಡಾಯವಾಗಿರುವುದರಿಂದ ಯಾವಾಗ ನಿಲ್ಲಿಸುವರೋ ಎಂಬ ಆತಂಕದಲ್ಲಿ ರೈತರು ನೋಂದಣಿಗೆ ಮುಗಿಬೀಳುತ್ತಿದ್ದಾರೆ. ನೋಂದಣಿ ಪ್ರಕ್ರಿಯೆ ತಡವಾಗುವುದರಿಂದ ರೈತರು ಹೆಚ್ಚು ಹೊತ್ತು ಸಾಲಿನಲ್ಲಿ ನಿಲ್ಲಬೇಕಾಗುತ್ತಿದೆ. ಆದ್ದರಿಂದ ಮತ್ತಷ್ಟು ನೋಂದಣಿ ಕೇಂದ್ರಗಳನ್ನು ತೆರೆದು ಅನುಕೂಲ ಮಾಡಿಕೊಡಬೇಕಿದೆ ಎಂದು ರೈತರು ಮನವಿ ಮಾಡಿದ್ದಾರೆ.ನೋಂದಣಿ ಕೇಂದ್ರಗಳ ಸಮೀಪ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಇರುವುದರಿಂದ ರೈತರು ಬಿಸಿಲು, ಚಳಿಯಲ್ಲಿಯೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ಗ್ರಾಮೀಣ ಭಾಗದ ರೈತರು ಬೆಳಗಿನ ಜಾವ ಬಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ರೈತ ಸಂಘದವರು ತಿಳಿಸಿದ್ದಾರೆ.----------
ಗುಬ್ಬಿ ಪಟ್ಟಣದಲ್ಲಿ ರೈತರಿಗೆ ಅನುಕೂಲವಾಗುವಂತೆ ಸರ್ಕಾರದ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡಲು ನೋಂದಣಿ ಪ್ರಕ್ರಿಯೆಯು ಸೋಮವಾರದಿಂದ ಪ್ರಾರಂಭವಾಗಿದೆ.