ಸಾರಾಂಶ
ಕೊಪ್ಪಳ: ಕನಕಗಿರಿ ಉತ್ಸವ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ತಾಲೂಕು ಆಡಳಿತ, ತಾಪಂ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಕನಕಗಿರಿಯಲ್ಲಿ ಆಕರ್ಷಕ ಮ್ಯಾರಥಾನ್ ಸ್ಪರ್ಧೆ ನಡೆಯಿತು.ಸಚಿವ ಶಿವರಾಜ್ ತಂಗಡಗಿ ಹಸಿರು ನಿಶಾನೆ ತೋರಿಸುವುದರ ಮೂಲಕ ಕನಕಗಿರಿಯ ಬಸವೇಶ್ವರ ಸರ್ಕಲ್ ಹತ್ತಿರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಪ್ರಪ್ರಥಮ ಬಾರಿಗೆ ಕನಕಗಿರಿ ಉತ್ಸವ ಪ್ರಯುಕ್ತ ರಾಜ್ಯ ಮಟ್ಟದ ಪುರುಷರು ಮತ್ತು ಮಹಿಳೆಯರ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ. ಕನಕಗಿರಿ ಉತ್ಸವದ ಕ್ರೀಡಾಕೂಟಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಇದೇ ರೀತಿಯ ಉತ್ಸವ ಮಾ.2, 3ರಂದು ಸಿಗಲಿ. ಕನಕಗಿರಿ ಐತಿಹಾಸಿಕ ಪುಣ್ಯ ಕ್ಷೇತ್ರವಾಗಿದ್ದು, ಕನಕಗಿರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ. ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರಗು ನೀಡಲಿವೆ ಎಂದರು.ನಿಯಮಿತ ವ್ಯಾಯಾಮದಿಂದ ಆರೋಗ್ಯ ಸದೃಢವಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕನಕಗಿರಿ ಉತ್ಸವದ ಪ್ರಯುಕ್ತ ಏರ್ಪಡಿಸಲಾದ ರಾಜ್ಯ ಮಟ್ಟದ ಮ್ಯಾರಥಾನ್ ಓಟದಿಂದ ಜಾಗೃತಿ ಸಿಗಲಿದೆ. ಪ್ರತಿಯೊಬ್ಬರೂ ದಿನನಿತ್ಯ ಫಿಟ್ ಆಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.ಈ ಸಂದರ್ಭದಲ್ಲಿ ಕೊಪ್ಪಳ ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡ್ರ, ಕನಕಗಿರಿ ತಹಶೀಲ್ದಾರ ವಿಶ್ವನಾಥ ಮುರಡಿ, ತಾಪಂ ಇಒ ಚಂದ್ರಶೇಖರ ಕಂದಕೂರ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಮ್ಯಾರಥಾನ್ ಓಟದ ವಿಜೇತರು:ರಾಜ್ಯ ಮಟ್ಟದ ಮ್ಯಾರಥಾನ್ ಓಟದಲ್ಲಿ ಮಹಿಳಾ ವಿಭಾಗದಲ್ಲಿ ಕನಕಗಿರಿಯ ಹೀನಾ ಕೌಸರ್ ಪ್ರಥಮ ಸ್ಥಾನ ಪಡೆದರು. ಮೈಸೂರಿನ ದ್ವೀಪ ದ್ವಿತೀಯ ಸ್ಥಾನ ಪಡೆದರೆ, ಜಿಲ್ಲೆಯ ಆಫೀಯಾ ತೃತೀಯ ಸ್ಥಾನ ಪಡೆದರು.ಪುರುಷರ ವಿಭಾಗದಲ್ಲಿ ಧಾರವಾಡದ ಸಚಿನ ಪ್ರಥಮ ಸ್ಥಾನ, ಧಾರವಾಡದ ಮಣಿಕಂಠ ದ್ವಿತೀಯ, ಹುಬ್ಬಳ್ಳಿಯ ವಿಲಾಸ್ ತೃತೀಯ, ಬಳ್ಳಾರಿಯ ಚನ್ನಕೇಶವ್ ನಾಲ್ಕನೇ ಸ್ಥಾನ ಪಡೆದರೆ, ಹುಬ್ಬಳ್ಳಿಯ ರಮೇಶ್ ಐದನೇ ಸ್ಥಾನ ಪಡೆದುಕೊಂಡರು.