ಮಳೆ ಹಾನಿ: ತಕ್ಷಣ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಸಚಿವ ಖಂಡ್ರೆ ಸೂಚನೆ

| Published : Aug 04 2024, 01:22 AM IST

ಮಳೆ ಹಾನಿ: ತಕ್ಷಣ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಸಚಿವ ಖಂಡ್ರೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಯಿಂದ ಕುಸಿದ ಮನೆಗಳ ರಿಪೇರಿಗೆ ತಕ್ಷಣಕ್ಕೆ 50ಸಾವಿರ ರು. ಬಿಡುಗಡೆ ಮಾಡಬೇಕು. ಕಳೆದ ಮುಂಗಾರು ಅತಿವೃಷ್ಟಿಯಲ್ಲಿ ಹಾನಿ, ಸಾವಿರಾರು ರೈತರಿಗೆ ಪರಿಹಾರ ಸಿಕ್ಕಿಲ್ಲಗಿದನ್ನು ಪರಿಹರಿಸಬೇಕು ಎಂದು ಬೀದರ್‌ನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಉಸ್ತುವಾರಿ ಸಚಿವ ಖಂಡ್ರೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆ ಹಾಗೂ ಮಾಂಜ್ರಾ ನದಿಯ ಪ್ರವಾಹದಿಂದ ಬೆಳೆ ನಷ್ಟವಾಗಿದೆ ಅಲ್ಲದೆ ಮನೆಗಳು ಕುಸಿತಗೊಂಡು ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ ಅಂಥವರಿಗೆ ತಕ್ಷಣವೇ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಈಗಾಗಲೇ ಭೇಟಿ ನೀಡಿದ್ದೇನೆ, ಮನೆಗಳು ಕುಸಿದು ಜನ ಸಂಕಷ್ಟದಲ್ಲಿದ್ದಾರೆ. ಮನೆ ಕುಸಿತ ಪ್ರಕರಣದ ಸಂದರ್ಭದಲ್ಲಿ ತಕ್ಷಣ 50 ಸಾವಿರ ರು. ಪರಿಹಾರ ಕಲ್ಪಿಸುವಂತೆ ಸೂಚಿಸಿದ್ದೇನೆ ಎಂದರು.

ಸರ್ಕಾರ ಕೂಡ ಮಳೆ ಹಾನಿಯಿಂದ ಸಂತ್ರಸ್ತರಾದವರಿಗೆ ತಕ್ಷಣ ಪರಿಹಾರ ವಿತರಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕರಿತು ಸರ್ಕಾರದಿಂದ ಜಿಲ್ಲಾಧಿಕಾರಿಗೆ ಅಧಿಕೃತ ಆದೇಶ ಸೋಮವಾರ ಹೊರಬೀಳುವ ಸಂಭವವಿದೆ. ಆದೇಶ ಬಂದ ತಕ್ಷಣ ಮನೆ ಕುಸಿತದ ಪ್ರಕರಣಗಳಲ್ಲಿ ತಲಾ 50 ಸಾವಿರ ರು. ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸಚಿವ ಖಂಡ್ರೆ ಸೂಚಿದರು.

ಇನ್ನು ಕಳೆದ ವರ್ಷ ಅತಿವೃಷ್ಟಿಯಿಂದ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯಾಗಿತ್ತು. ಆ ಸಂದರ್ಭದಲ್ಲಿ ಹಾನಿಗೊಳಗಾದ ರೈತನಿಗೆ ಪರಿಹಾರ ಕಲ್ಪಿಸುವ ಪ್ರಯತ್ನವಾಗಿತ್ತು. ಅದಾಗೂ ಸಾವಿರಾರು ರೈತರಿಗೆ ಪರಿಹಾರ ಧನ ಸಿಗದೇ ಇರುವುದು ಕೂಡ ಗಮನಕ್ಕೆ ಬಂದಿದೆ. ಅದನ್ನು ಪರಿಹರಿಸಬೇಕಿದೆ. ಇನ್ನು ಈ ಬಾರಿಯ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳು ಹಾಗೂ ಪ್ರದೇಶದ ವರದಿಯನ್ನು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಅತೀ ಶೀಘ್ರದಲ್ಲಿ ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದರು.

ಇದೇ ರೀತಿಯಾಗಿ ಶೈಕ್ಷಣಿಕ ಪ್ರಗತಿ, ಶಾಲಾ ಕಾಲೇಜುಗಳ ಕಟ್ಟಡಗಳ ಸ್ಥಿತಿ ಗತಿ, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತಿತರ ವಿಷಯಗಳ ಕುರಿತಂತೆ ಮಾಹಿತಿ ಪಡೆದು ಇತ್ತೀಚೆಗೆ ವಿದ್ಯುತ್‌ ಅವಘಡದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪರಿಹಾರ ಧನದ ಚೆಕ್‌ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.