ಸಾರಾಂಶ
ನೂತನ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭದ್ರಾವತಿಯಲ್ಲಿ ಅಭಿನಂದಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಲು ಮನವಿ ಮಾಡಿ ಸಹಕರಿಸುವಂತೆ ವಿಐಎಸ್ಎಲ್ ಕಾರ್ಮಿಕ ಸಂಘಗಳ ಮುಖಂಡರು ಸಂಸದ ರಾಘವೇಂದ್ರ ಅವರಿಗೆ ಶಿಕಾರಿಪುರ ನಿವಾಸದಲ್ಲಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ನೂತನ ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಾರ್ಮಿಕರು ಅಭಿನಂದಿಸಲು ಹಾಗೂ ಕಾರ್ಖಾನೆ ಅಭಿವೃದ್ಧಿಪಡಿಸಲು ಸಚಿವರನ್ನು ಕೋರಬೇಕಿದೆ. ಇದಕ್ಕಾಗಿ ನಗರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಬೇಕಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ನಗರಕ್ಕೆ ಆಗಮಿಸಲು ಮನವಿ ಮಾಡಬೇಕೆಂದು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಮಿಕರ ಸಂಘ ಹಾಗೂ ಗುತ್ತಿಗೆ ಕಾರ್ಮಿಕರ ಸಂಘಗಳು ಶಿವಮೊಗ್ಗ ಸಂಸದರಿಗೆ ಮನವಿ ಮಾಡಿವೆ.ಸಂಸದ ಬಿ.ವೈ. ರಾಘವೇಂದ್ರ ಅವರ ಶಿಕಾರಿಪುರದ ನಿವಾಸದಲ್ಲಿ ಕಾರ್ಮಿಕ ಸಂಘಗಳ ಮುಖಂಡರು ಭೇಟಿಯಾದರು. ಕುಮಾರಸ್ವಾಮಿ ಅವರು ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದು ವಿಐಎಸ್ಎಲ್ ಕಾರ್ಖಾನೆ ಮತ್ತು ಭದ್ರಾವತಿ ಕ್ಷೇತ್ರದ ಜನರಿಗೆ ‘ಉಕ್ಕು ಭಾಗ್ಯ’ ನೀಡಿದಂಥ ಸಂತಸದ ವಿಚಾರವಾಗಿದೆ. ತ್ವರಿತ ಗತಿಯಲ್ಲಿ ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಉಕ್ಕು ಸಚಿವರಿಗೆ ಮನವಿ ಸಲ್ಲಿಸಲು, ಕಾರ್ಖಾನೆ ಸಮಸ್ಯೆಗಳಿಗಳಿಗೆ ಶಾಶ್ವತ ಪರಿಹಾರ ಹಾಗೂ ಕಾರ್ಮಿಕರು ಸಚಿವರನ್ನು ಅಭಿನಂದಿಸಲು ಅವಕಾಶ ಮಾಡಿಕೊಡಬೇಕೆಂದು ಬಿವೈಆರ್ ಅವರಿಗೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಮುಂದಿನ ವಾರ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕಾರ್ಮಿಕ ಸಂಘಟನೆಗಳೊಂದಿಗೆ ಭೇಟಿಯಾಗಿ, ಭದ್ರಾವತಿ ಆಗಮಿಸುವಂತೆ ಕೋರಲಾಗುವುದು. ಅಲ್ಲದೇ, ಬೃಹತ್ ಕಾರ್ಯಕ್ರಮ ಆಯೋಜನೆಗೆ ದಿನಾಂಕ ನಿಗದಿಪಡಿಸಿ ಕುಮಾರಸ್ವಾಮಿ ಅವರಿಗೆ ಕಾರ್ಖಾನೆ ಅಭಿವೃದ್ಧಿಗೆ ಕಾಯಕಲ್ಪ ನೀಡುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪದಾಧಿಕಾರಿಗಳು ಉಪಸ್ಥಿತರಿದ್ದರು.