ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಹೊಸಾಕುಳಿ ಗ್ರಾಪಂ ವ್ಯಾಪ್ತಿಯ ಆರೊಳ್ಳಿ ಸಮೀಪ ಅರಣ್ಯ ಇಲಾಖೆಯ ಪ್ರದೇಶದಲ್ಲಿ ಹಣ್ಣುಹಂಪಲು ಗಿಡ ನೆಡುವ ಜೊತೆ ಸಾರ್ವಜನಿಕರಿಗೆ ಅನೂಕೂಲವಾಗುವ ರೀತಿ ವಿವಿಧ ಸೌಲಭ್ಯ ಕಲ್ಪಿಸುವಂತೆ ಗ್ರಾಮದ ಪ್ರಮುಖರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಹೊಸಾಕುಳಿ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕಾಡುಪ್ರಾಣಿಗಳ ಕಾಟ ಅಧಿಕವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅರಣ್ಯದಲ್ಲಿ ಹಣ್ಣು ಹಂಪಲು ಮರಗಳು ಇಲ್ಲದೇ ಇರುವುದರಿಂದ ಕಾಡುಪ್ರಾಣಿಗಳು ಗ್ರಾಮದತ್ತ ಬರುತ್ತಿವೆ. ಮುಖ್ಯವಾಗಿ ಮಂಗನ ಕಾಟ ವಿಪರೀತವಾಗಿ ತೋಟದಲ್ಲಿ ಬೆಳೆದ ತೆಂಗಿನಕಾಯಿ ಬಾಳೆಕಾಯಿ ರೈತರಿಗೆ ಸಿಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಾರಿ ಅರಣ್ಯ ಇಲಾಖೆಯ ಪ್ರದೇಶದಲ್ಲಿರುವ ಅಕೆಶಿಯಾ ಮರ ಕಟಾವು ಇಲಾಖೆಯ ನಿಯಮಾನುಸಾರವಾಗಿ ನಡೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ಹಣ್ಣುಹಂಪಲು ಗಿಡಗಳನ್ನು ಮುಂದಿನ ಮುಂಗಾರು ಸಮಯದಲ್ಲಿ ನಾಟಿ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಶೇ. ೯೫ ಮಣ್ಣಿನ ಜಾಗ ಇರುವ ಆರೋಳ್ಳಿ, ಸಂತೆಗುಳಿ ರಸ್ತೆ ಪಕ್ಕದ ಹೊಸಾಕುಳಿ ಗ್ರಾಮ ಸರ್ವೆ ನಂ ೮೬ ಅದಲ್ಲಿ ಅಕೆಶಿಯಾ ನೆಡಲು ನಮ್ಮ ತಕರಾರು ಆಕ್ಷೇಪಣೆ ಇರಲಿದೆ. ಈ ಭಾಗದಲ್ಲಿ ಸಾರ್ವಜನಿಕರು ಶಿಫಾರಸ್ಸು ಮಾಡಿದ ಗಿಡಗಳನ್ನು ನೆಡಲು ಒತ್ತಾಯಿಸುತ್ತೇವೆ.‌

ಸಂಜೆ ೪ ಗಂಟೆಯಿಂದ ೬.೩೦ರ ವರೆಗೆ ಸಾರ್ವಜನಿಕರು ವಾಕಿಂಗ್ ಮಾಡಲು ಪುಟ್‌ಪಾತ್ ನಿರ್ಮಿಸುವುದು, ಎತ್ತರದ ಗುಡ್ಡ ಇರುವುದರಿಂದ ಸೂರ್ಯಾಸ್ತ ನೋಡುತ್ತ ಕುಳಿತುಕೊಳ್ಳಲು ಕಲ್ಲು ಬೆಂಚು ಕಟ್ಟಲು ಕೋರಿಕೆ ಇರುತ್ತದೆ. ಜಾರುಬಂಡಿ ತೂಗುಯ್ಯಾಲೆ ಮಕ್ಕಳ ಆಟಿಕೆ ಪರಿಸರ ನಿರ್ಮಾಣ ಮಾಡುವುದು. ಬೇಲಿ ಮತ್ತು ಗೆಟು ಅಳವಡಿಸುವುದು. ಕಾವಲುಗಾರರನ್ನು ಖಾಯಂ ನೇಮಿಸುವುದು. ಪ್ಲಾಸ್ಟಿಕ್ ಎಸೆಯುವುದು, ಅನೈತಿಕ ಚಟುವಟಿಕೆ ನಿಷೇಧಿಸುವುದು. ಬೇಸಿಗೆಯಲ್ಲಿ ಗಿಡಗಳಿಗೆ ನಿರುಣಿಸಲು ಬೋರವೆಲ್ ತೆಗೆಯುವುದು, ನೀರು ಟ್ಯಾಂಕ್ ಇಡುವುದು. ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು. ಗಿಡಗಳ ಆರೈಕೆ, ರಕ್ಷಣೆ ಮಾಡುವುದು. ಹಿಟಾಚಿ ಯಂತ್ರಗಳಿಂದ ೫ ಅಡಿ ಉದ್ದ, ಅಗಲ, ಆಳದ ಹೊಂಡಗಳನ್ನು ತೆಗೆದು ಈಗ ಕಡಿದ ಅಕೆಶಿಯಾ ಮರಗಳ ಸೊಪ್ಪು ಹಾಕಿ ಸಣ್ಣ ಜಿಗ್ಗು ಕಟ್ಟಿಗೆ ಹಾಕಿ ಹೊಂಡ ಮುಚ್ಚಿ ಗಿಡ ನೆಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿದ ಡಿಎಫ್ಓ ಯೋಗೀಶ ಸಿ.ಕೆ., ಹಣ್ಣು ಹಂಪಲು ಗಿಡಗಳನ್ನೆ ಹೆಚ್ಚಿನ ಪ್ರಮಾಣದಲ್ಲಿ ಇಲಾಖೆಯಿಂದ ನಾಟಿ ಮಾಡುವ ಜೊತೆ ಇತರೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಈ ಸಂದರ್ಭ ವಿ. ಎಸ್ ಎಸ್ ಅಧ್ಯಕ್ಷರಾದ ಸುರೇಶ ಶೆಟ್ಟಿ, ಕಿಸಾನ್ ಸಂಘಟನೆಯ ಸದಸ್ಯರಾದ ಎಂ ಆರ್ ಹೆಗಡೆ, ವಿನಾಯಕ ಹೆಗಡೆ, ಗ್ರಾಪಂ ನಿಕಟಪೂರ್ವ ಸದಸ್ಯ ಕಿರಣ ಹೆಗಡೆ, ಹೊಸಾಕುಳಿ ಗ್ರಾಮಸ್ಥರಾದ ಮಹಾಬ್ಲೆಶ್ವರ ಹೆಗಡೆ, ರಾಮಚಂದ್ರ ಹೆಗಡೆ, ಸುಬ್ರಮಣ್ಯ ಹೆಗಡೆ, ರಾಘು ಹೆಗಡೆ, ಸಚಿನ್ ಹೆಗಡೆ ಉಪಸ್ಥಿತರಿದ್ದರು.