ಕಾಲ್ಪನಿಕ ಯುದ್ಧ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ

| Published : May 13 2025, 01:29 AM IST

ಕಾಲ್ಪನಿಕ ಯುದ್ಧ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ರೈಲ್ವೆ ನಿಲ್ದಾಣದಲ್ಲಿನ ಬಾಂಬ್ ದಾಳಿಯಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆಗಳನ್ನು ಅತ್ಯಂತ ಯಶಸ್ವಿಯಾಗಿ ಕೈಗೊಳ್ಳಲಾಯಿತು.

ಕಾರವಾರ: ಮಿಸೈಲ್ ದಾಳಿ, ಬಾಂಬ್ ಸ್ಫೋಟ, ಹೊತ್ತಿ ಉರಿದ ಕಟ್ಟಡ, ಅಣು ವಿಕಿರಣದಿಂದ ರಕ್ಷಣೆ ಹೀಗೆ ತುರ್ತು ಸಂದರ್ಭದಲ್ಲಿ ಜನತೆಯ ರಕ್ಷಣಾ ಕಾರ್ಯಾಚರಣೆಯ ಮಾಕ್ ಡ್ರಿಲ್ ಯಶಸ್ವಿಯಾಗಿ ನಡೆಯಿತು. ಉತ್ತರ ಕನ್ನಡ ಯುದ್ಧದ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಯಿತು.

ಯುದ್ಧದಂತಹ ವಿಪರೀತ ಸಂದರ್ಭದಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಸೋಮವಾರ ಕಾರವಾರದ ವಿವಿಧ ಭಾಗಗಳಲ್ಲಿ ಕೈಗೊಂಡ ಆಪರೇಷನ್ ಅಭ್ಯಾಸ್ ನಾಗರಿಕ ರಕ್ಷಣಾ ಮಾದರಿಯ ಅಣಕು ಕಾರ್ಯಚರಣೆ ನಡೆಸಲಾಯಿತು.

ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್‌ನಲ್ಲಿ ಕಟ್ಟಡ ಕುಸಿದು ಬಿದ್ದಾಗ ಸ್ಥಳದಲ್ಲಿದ್ದ ಜನರನ್ನು ರಕ್ಷಣೆ ಮಾಡುವ ಬಗ್ಗೆ, ಕೈಗಾ ಅಣು ವಿದ್ಯುತ್ ಕೇಂದ್ರದ ಒಳಗೆ ಬೆಂಕಿ ಅವಘಡದಿಂದ ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆ, ಅಮದಳ್ಳಿಯ ನೇವಲ್ ಬೇಸ್ ಬಳಿ ಸಿವಿಲಿಯನ್ ಕಾಲೋನಿಯಲ್ಲಿ ಅಗ್ನಿ ಅವಘಡದಿಂದ ರಕ್ಷಣಾ ಕಾರ್ಯಾಚರಣೆ, ಕಾರವಾರದ ರವೀಂದ್ರನಾಥ ಠಾಗೋರ ಬೀಚ್‌ನಲ್ಲಿ ಬಾಂಬ್ ದಾಳಿಯಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆ ಮತ್ತು ಅಣು ವಿಕಿರಣದಿಂದ ಸಾರ್ವಜನಿಕರ ರಕ್ಷಣೆ ಕುರಿತಂತೆ ಹರ್ಟುಗಾ ಗ್ರಾಮದಿಂದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ರೈಲ್ವೆ ನಿಲ್ದಾಣದಲ್ಲಿನ ಬಾಂಬ್ ದಾಳಿಯಿಂದ ಸಾರ್ವಜನಿಕರನ್ನು ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆಗಳನ್ನು ಅತ್ಯಂತ ಯಶಸ್ವಿಯಾಗಿ ಕೈಗೊಳ್ಳಲಾಯಿತು.

ಕಾರ್ಯಾಚರಣೆಯಲ್ಲಿ ನೌಕಾಪಡೆ, ಕೋಸ್ಟ್ ಗಾರ್ಡ್, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಎನ್.ಡಿ.ಆರ್.ಎಫ್, ಪೊಲೀಸ್, ಕರಾವಳಿ ಪೊಲೀಸ್, ರೈಲ್ವೆ ರಕ್ಷಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಗೃಹ ರಕ್ಷಕ ದಳ, ಕಂದಾಯ, ಆರೋಗ್ಯ, ಮೀನುಗಾರಿಕೆ, ನಗರಸಭೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಎನ್.ಎಸ್.ಎಸ್., ಎನ್.ಸಿ.ಸಿ. ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.

ಸಂಜೆ 7.30 ರಿಂದ 8 ಗಂಟೆಯ ಅವಧಿಯಲ್ಲಿ ಬ್ಲ್ಯಾಕ್ ಔಟ್ ಕಾರ್ಯಾಚರಣೆ ನಡೆಸಲಾಗಿದ್ದು, ಈ ಅವಧಿಯಲ್ಲಿ ಸೈರನ್ ಮೊಳಗಿದ ತಕ್ಷಣ ಕಾರವಾರ ನಗರಪ್ರದೇಶದಲ್ಲಿ ಸಾರ್ವಜನಿಕರು ತಮ್ಮ ಮನೆಗಳ ಕಿಟಕಿ, ಬಾಗಿಲು ಮುಚ್ಚಿ, ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಕತ್ತಲು ಮಾಡಿದರು. ವಾಹನ ಸವಾರರು ತಾವು ಚಲಾಯಿಸುತ್ತಿದ್ದ ವಾಹನಗಳನ್ನು ಬಂದ್ ಮಾಡಿ ಹೆಡ್ ಲೈಟ್ ಆರಿಸಿ ರಸ್ತೆಯ ಪಕ್ಕದಲ್ಲಿ ಸುರಕ್ಷಿತವಾಗಿ ನಿಂತು ಬ್ಲ್ಯಾಕ್ ಔಟ್ ಕಾರ್ಯಾಚರಣೆಗೆ ಸಹಕಾರ ನೀಡಿದರು. ಕೈಗಾ ಟೌನ್‌ಶಿಪ್ ನಲ್ಲಿ ಕೂಡ ಬ್ಲ್ಯಾಕ್ ಔಟ್ ಕಾರ್ಯಾಚರಣೆ ಕೈಗೊಳ್ಳಲಾಯಿತು. ಬ್ಲಾಕ್ ಔಟ್ ಕಾರ್ಯಾಚರಣೆಗಾಗಿ 13 ಸೈರನ್‌ಗಳನ್ನು ಅಳವಡಿಸಲಾಗಿತ್ತು.

ಅಣಕು ಕಾರ್ಯಚರಣೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್‌ನಲ್ಲಿ ಕಟ್ಟಡ ಕುಸಿದಿದೆ ಎಂದು ಡಿಸಿ ಕಂಟ್ರೋಲ್ ರೂಮ್‌ಗೆ ಸಂಜೆ ೪ ಗಂಟೆಗೆ ಕರೆ ಮೂಲಕ ಮಾಹಿತಿ ತಿಳಿಯುತ್ತದೆ ತಕ್ಷಣ ಅಲ್ಲಿಗೆ ರಕ್ಷಣೆ ತಂಡವನ್ನು ಹಾಗೂ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಅಲ್ಲಿಂದ ಸಾರ್ವಜನಿಕರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಗಾಯಗೊಂಡವರಿಗೆ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು ಈ ಅಣುಕು ಕಾರ್ಯಚರಣೆಗೆ 38 ನಿಮಿಷ ಸಮಯವನ್ನು ತೆಗೆದುಕೊಳ್ಳಲಾಯಿತು.

ಕೈಗಾ ಅಣು ವಿದ್ಯುತ್ ಕೇಂದ್ರದ ಒಳಗೆ ಬೆಂಕಿ ಅವಘಡವಾಗಿರುವ ಬಗ್ಗೆ ಕಂಟ್ರೋಲ್ ರೂಮ್‌ಗೆ ಸಂಜೆ 4.15 ಗಂಟೆಗೆ ಕರೆ ಮೂಲಕ ಮಾಹಿತಿ ತಿಳಿಯಿತು. ತಕ್ಷಣ ಅಗ್ನಿ ಶಾಮಕ ದಳದವರನ್ನು, ಪೊಲೀಸ್, ಕಂದಾಯ ಇಲಾಖೆ ಹಾಗೂ ವೈದ್ಯರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅವಘಡದಿಂದ ಸಾರ್ವಜನಿಕರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಈ ಅಣಕು ಕಾರ್ಯಚರಣೆಗೆ 40 ನಿಮಿಷ ಕಾಲಾವಕಾಶವನ್ನು ತೆಗೆದುಕೊಳ್ಳಲಾಯಿತು ಎಂದರು.

ಅಣು ವಿಕಿರಣ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಕುರಿತಂತೆ ಹರ್ಟುಗಾ ಗ್ರಾಮದಿಂದ ಸಾರ್ವಜನಿರನ್ನು ಸಿದ್ದರದ ಬಿಸಿಎಂ ಹಾಸ್ಟೇಲ್ ಸ್ಥಳಾಂತರಿಸುವ ಕುರಿತು ಅಣಕು ಕಾರ್ಯಚರಣೆ ಮಾಡಲಾಯಿತು ಈ ಕಾರ್ಯಾಚರಣೆ ಮಾಡಲು 1 ಗಂಟೆ 20 ನಿಮಿಷ ಕಾಲಾವಕಾಶವನ್ನು ತೆಗೆದುಕೊಳ್ಳಲಾಯಿತು.

ಅಮದಳ್ಳಿಯ ನೇವಲ್ ಬೇಸ್ ಬಳಿ ಸಿವಿಲಿಯನ್ ಕಾಲೋನಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಕುರಿತು ಪೊಲೀಸ್ ಕಂಟ್ರೋಲ್ ರೂಂ ಗೆ ಸಂಜೆ 5 ಗಂಟೆಗೆ ಕರೆ ಮೂಲಕ ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ದಳದವರು, ತಹಸೀಲ್ದಾರ್, ವೈದ್ಯರ ತಂಡ, ನೇವಿ ಹಾಗೂ ಕೋಸ್ಟ್ ಗಾರ್ಡ್‌ರವರು ಎಲ್ಲರೂ ಸೇರಿ ಅಣಕು ಕಾರ್ಯಾಚರಣೆ ಮಾಡಲಾಗಿದೆ. ಬೈತಕೂಲ್‌ನಲ್ಲಿ ತುರ್ತು ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಈ ಅಣಕು ಕಾರ್ಯಾಚರಣೆ 43 ನಿಮಿಷ ಕಾಲಾವಕಾಶ ತೆಗೆದುಕೊಳ್ಳಲಾಯಿತು.

ಈ ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ, ಪೊಲೀಸ್ ಕಂಟ್ರೊಲ್ ರೂಂ ನ್ನು ಅತ್ಯಂತ ಪರಿಣಾಮಕಾರಿಯಗಿ ವ್ಯವಸ್ಥಿತಗೊಳಿಸಿದ್ದು ಮಾತ್ರವಲ್ಲದೇ ಒಂದು ಶಾಡೋ ಕಂಟ್ರೋಲ್ ರೂಂ ಕೂಡಾ ತೆರೆಯಲಾಗಿತ್ತು. ತುರ್ತು ಸಂದರ್ಭದಲ್ಲಿ ಅನುಕೂಲವಾಗುವಂತೆ ಹಾಟ್ ಲೈನ್ ಸಂಪರ್ಕಗಳನ್ನೂ ಕೂಡಾ ಪಡೆಯಲಾಗಿತ್ತು ಎಂದರು.

ಎಸ್ಪಿ ಎಂ.ನಾರಾಯಣ, ಎಡಿಸಿ ಸಾಜೀದ್ ಮುಲ್ಲಾ ಇದ್ದರು.

ನಾಗರಿಕರ ಸ್ಥಳಾಂತರ: ಗ್ರಾಸಿಂ ಅನಿಲ ಘಟಕದಲ್ಲಿ ಬಾಂಬ್ ದಾಳಿಯಿಂದ ಹಾನಿಗೀಡಾದ ಕಟ್ಟಡದಲ್ಲಿ ಸಿಲುಕಿದ್ದ 37 ಜನರ ಸುರಕ್ಷಿತ ರಕ್ಷಣೆ, ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ 11 ಜನರ ರಕ್ಷಣೆ, ನೌಕಾನೆಲೆ ಪ್ರದೇಶದ ಸಿವಿಲ್ ಕಾಲೋನಿಯಲ್ಲಿ ಬೆಂಕಿ ಆಕಸ್ಮಿಕದಿಂದ 11 ಜನರ ರಕ್ಷಣೆ, ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ದಾಳಿಯಿಂದ ಗಾಯಗೊಂಡ 10 ಜನರ ರಕ್ಷಣೆ, ರವೀಂದ್ರ ನಾಥ್ ಕಡಲತೀರದಲ್ಲಿ ಸಂಭವಿಸಿದ ಬಾಂಬ್ ದಾಳಿಯಿಂದ ಗಾಯಗೊಂಡವರನ್ನು ರಕ್ಷಿಸಿ ಇಡೀ ಬೀಚ್‌ನಲ್ಲಿದ್ದ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ವಿಕಿರಣ ಸೋರಿಕೆಯ ಮುನ್ನೆಚ್ಚರಿಕಾ ಕ್ರಮವಾಗಿ ಹರ್ಟುಗಾ ಗ್ರಾಮದ ಎಲ್ಲ ನಾಗರಿಕರ ಸ್ಥಳಾಂತರ ಮಾಡಲಾಯಿತು.