ಸಾರಾಂಶ
- ಹಿರಿಯ ಪತ್ರಕರ್ತ ದಿನೇಶ ಅಮೀನಮಟ್ಟು ಪ್ರತಿಪಾದನೆ । ನೇತ್ರತಜ್ಞ ಡಾ. ಬಿ.ಎಂ. ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿ, ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ರಂಗದಲ್ಲೂ ಶೇಕಡವಾರು ಪ್ರಾತಿನಿಧ್ಯ ಸಿಕ್ಕಿದ ಮರುದಿನವೇ ಮೀಸಲಾತಿ ರದ್ದು ಮಾಡಬಹುದು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನಮಟ್ಟು ಹೇಳಿದರು.ನಗರದ ದೃಶ್ಯಕಲಾ ಮಹಾವಿದ್ಯಾಲಯ ಸಭಾಂಗಣದಲ್ಲಿ ನೇತ್ರತಜ್ಞ ಡಾ. ಬಿ.ಎಂ. ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಅಂಗವಾಗಿ ಅವರ ಪುತ್ರಿ ಬಿ.ಟಿ.ಜಾಹ್ನವಿ ಅವರು ಸಂಪಾದಿಸಿರುವ “ಮುಟ್ಟಿಸಿಕೊಂಡವರು” ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮೀಸಲಾತಿ ವಿಷಯದಲ್ಲಿ ಅವರು ದೊಡ್ಡ ವಿವಾದ ಮಾಡಿಕೊಂಡಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಮೀಸಲಾತಿಗೆ ಒಂದು ಮಿತಿ ಇರಬೇಕು. ಒಂದು ತಲೆಮಾರಿನ ನಂತರ ಮೀಸಲಾತಿ ಇರಬಾರದು ಎನ್ನುವುದು ತಿಪ್ಪೇಸ್ವಾಮಿ ಅವರ ಪ್ರತಿಪಾದನೆಯಾಗಿತ್ತು. ಇಂದು ಇದೇ ಮಾತನ್ನು ತುಂಬಾ ಜನರು ಹೇಳುತ್ತಾರೆ. ಆದರೆ, ತಿಪ್ಪೇಸ್ವಾಮಿ ಅವರು ಪ್ರತಿಪಾದಿಸಿದ್ದ ಕೆನೆಪದರ ವಿಚಾರ ಸಾಕಷ್ಟು ಚರ್ಚೆಗೆ ಅವಕಾಶ ಕೊಟ್ಟಿತ್ತು. ತಿಪ್ಪೇಸ್ವಾಮಿ ಅವರ ಮಾತಿಗೆ ನನ್ನ ವಿರೋಧವಿದೆ. ಏಕೆಂದರೆ ಮೀಸಲಾತಿ ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ. ಅದು ಒಂದು ಪ್ರಾತಿನಿಧ್ಯ, ಅವಕಾಶ ಕೊಡಬೇಕು ಎನ್ನುವುದು ಅದರ ಮೂಲ ನೀತಿಯಾಗಿದೆ ಎಂದರು.ಶೇ.25ರಷ್ಟು ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಎಲ್ಲ ಕ್ಷೇತ್ರದಲ್ಲೂ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಕ್ಕಿದ ಮರುದಿನವೇ ಮಿಸಲಾತಿ ರದ್ದು ಮಾಡಬಹುದು. ಆದರೆ ಸಂಶೋಧನೆ ಮಾಡಿದರೆ ಉದ್ಯೋಗ, ಶಿಕ್ಷಣದಲ್ಲಿ ಶೇ.5ರಷ್ಟು ಪ್ರಾತಿನಿಧ್ಯವೂ ಇಲ್ಲವಾಗಿದೆ. ತಿಪ್ಪೇಸ್ವಾಮಿ ಅವರದು ಸಂಧಾನದ ಮಾರ್ಗವಾಗಿತ್ತು, ಸಂಘರ್ಷದ ಮಾರ್ಗವಾಗಿರಲಿಲ್ಲ. ಹಾಗಾಗಿ, ಅವರು ಮೀಸಲಾತಿ ವಿಚಾರದಲ್ಲಿ ಅಂದೇ ದೊಡ್ಡಮಟ್ಟದ ವಿವಾದಕ್ಕೆ ಕಾರಣರಾಗಿದ್ದರು ಎಂದು ಹೇಳಿದರು.
ಲೇಖಕಿ ಬಿ.ಟಿ. ಜಾಹ್ನವಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಂಸ್ಕೃತಿ, ಪರಂಪರೆ ಹೆಸರಿನಲ್ಲಿ ದೌರ್ಜನ್ಯಗಳಾದಾಗ ಅಪ್ಪನ ನೆನಪಾಗುತ್ತದೆ. ಅವರ ಜ್ಞಾನ, ಅರಿವು, ಸಮಾಜಮುಖಿ ಕೆಲಸಗಳು ಮುಟ್ಟಿಸಿಕೊಂಡವರು ಕೃತಿಯ ಮೂಲಕ ಇಂದಿನ ಜನರನ್ನು ತಲುಪುವಂತಾಗಲಿ ಎಂದು ಆಶಿಸಿದರು.ಹಿರಿಯ ಪತ್ರಕರ್ತೆ ಪ್ರೀತಿ ನಾಗರಾಜ್ ಮಾತನಾಡಿ, ಮಗಳು ತನ್ನ ತಂದೆಗೆ ಕೊಡಬೇಕಾದ ಕಾಣಿಕೆ ಎಂದರೆ ಅವರ ನೆನಪನ್ನು ಜೀವಂತವಾಗಿಡುವುದು. ಆ ಕಾರ್ಯವನ್ನು ಜಾಹ್ನವಿ ಮಾಡಿದ್ದಾರೆ. ರಾಷ್ಟ್ರಮಟ್ಟದ ನಾಯಕರಾಗುವ ಎಲ್ಲ ಅರ್ಹತೆಗಳಿದ್ದರೂ ತಿಪ್ಪೇಸ್ವಾಮಿ ಅವರು ಯಾವುದಕ್ಕೂ ಆಸೆ ಪಡಲಿಲ್ಲ. ಯೋಗ್ಯತೆ ಮೀರಿದ ಹಣಕ್ಕೆ ಆಸೆ ಪಡಲಿಲ್ಲ ಎಂದರು.
ಸಿದ್ಧ ಕೃಷಿ ಪ್ರಚಾರಕ, ನೇತ್ರತಜ್ಞ ಡಾ.ಆರ್.ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿಷ್ಣುಕುಮಾರ್ ಉಪಸ್ಥಿತರಿದ್ದರು. ಡಾ.ಮುರುಗೇಶ್ ಬಾಬು ಪ್ರಾರ್ಥಿಸಿದರು.- - -
(ಬಾಕ್ಸ್) * ಡಾ.ತಿಪ್ಪೇಸ್ವಾಮಿ ಆತ್ಮಚರಿತ್ರೆ ಬರೆಯುವ ಅಗತ್ಯವಿದೆಸಾಮಾನ್ಯವಾಗಿ ತಳಸಮುದಾಯದವರ ಬಗ್ಗೆ ಅಸ್ಪೃಶ್ಯತೆ ಆಚರಣೆಯಲ್ಲಿತ್ತು. ಆದರೆ, ಇತ್ತೀಚೆಗೆ ರಿವರ್ಸ್ ಅನ್ಟಚಬಲಿಟಿ ಬಂದಿದೆ. ಇಂದಿನ ಪ್ರಜ್ಞಾವಂತ ಸಮಾಜದಲ್ಲಿ ಯಾರೂ ನನ್ನನ್ನು ಮುಟ್ಟುವುದಿಲ್ಲ ಎನ್ನುವುದಾದರೆ, ನಾನೂ ನಿನ್ನನ್ನು ಮುಟ್ಟುವುದಿಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಪುಸ್ತಕದ 39 ಪುಟಗಳನ್ನು ವಿಸ್ತರಿಸಿ, ಡಾ.ತಿಪ್ಪೇಸ್ವಾಮಿ ಅವರ ಬಗ್ಗೆ ಪೂರ್ಣ ಪ್ರಮಾಣದ ಆತ್ಮಚರಿತ್ರೆ ಬರೆಯುವ ಅಗತ್ಯವಿದೆ ಎಂದು ದಿನೇಶ ಅಮೀನಮಟ್ಟು ಹೇಳಿದರು.ತಿಪ್ಪೇಸ್ವಾಮಿ ಅವರ ಜೀವನವನ್ನು ದಾಖಲಿಸದಿದ್ದರೆ, 50 ವರ್ಷಗಳ ನಂತರ ಇಂಥವರು ನಮ್ಮ ಜೊತೆ ಬದುಕಿದ್ದರಾ ಎಂಬ ಅನುಮಾನ ಮೂಡಿಸುವಷ್ಟು ಅವರ ಜೀವನದಲ್ಲಿ ಕಥನವಿದೆ. ಈ ಹಿನ್ನೆಲೆ ಅವರ ಒಡನಾಡಿಗಳ ಅನುಭವಗಳನ್ನು ಸೇರಿಸಿ ಈ ಕಾರ್ಯ ಮಾಡಬೇಕಿದೆ. ಅಂಬೇಡ್ಕರ್ ಅವರಂತೆಯೇ ತಿಪ್ಪೇಸ್ವಾಮಿ ಅವರು ಅವಮಾನ, ನಿರ್ಲಕ್ಷ್ಯ, ದೌರ್ಜನ್ಯಗಳನ್ನು ಸಹಿಸಿಕೊಂಡು ಬೆಳೆದವರು. ಈ ರೀತಿಯ ಯಶಸ್ಸು ಎವರೆಸ್ಟ್ ಏರುವುದಕ್ಕಿಂತ ಕಷ್ಟದ ಕೆಲಸ ಎಂದರು.
ದಲಿತ ನಾಯಕರಿಗಿಂತ ಭಿನ್ನವಾಗಿ ಅವರು ಆಲೋಚಿಸುತ್ತಿದ್ದ ಅವರು ವೈದ್ಯರಾಗಿ ವೃತ್ತಿಧರ್ಮ ಪಾಲಿಸುತ್ತಿದ್ದರು. ಅವರನ್ನು ದ್ವೇಷಿಸಿದವರನ್ನೂ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಎಲ್ಲ ವೃತ್ತಿಪರರು ಆ ರೀತಿಯ ವೃತ್ತಿಧರ್ಮ ಪಾಲಿಸಿದರೆ ಸಮಾಜ ಇನ್ನಷ್ಟು ಸಹನೀಯವಾಗಿರುತ್ತಿತ್ತು ಎಂದು ಅಮೀನಮಟ್ಟು ಹೇಳಿದರು.- - -
-15ಕೆಡಿವಿಜಿ65:ಬಿ.ಟಿ.ಜಾಹ್ನವಿ ಸಂಪಾದಿಸಿರುವ ಮುಟ್ಟಿಸಿಕೊಂಡವರು ಪುಸ್ತಕವನ್ನು ದಾವಣಗೆರೆಯಲ್ಲಿ ಪತ್ರಕರ್ತ ಅಮೀನಮಟ್ಟು ಬಿಡುಗಡೆ ಮಾಡಿದರು.