ಕಾಪು: ಅತಿವೃಷ್ಟಿ, ಪ್ರಕೃತಿ ವಿಕೋಪಗಳ ಸಂದರ್ಭ ಅಧಿಕಾರಿಗಳು ಸಂತ್ರಸ್ಥರೊಂದಿಗೆ ಹೃದಯವಂತಿಕೆ, ಪ್ರಜ್ಞಾವಂತಿಕೆ ಮತ್ತು ಬುದ್ದಿವಂತಿಕೆಯಿಂದ ವರ್ತಿಸಿ, ಅವರಿಗೆ ತಕ್ಷಣ ಪರಿಹಾರ ನೀಡಿ, ಅವರು ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಆರೋಗ್ಯ-ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಹೇಳಿದರು.ಶುಕ್ರವಾರ ಕಾಪು ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಸ್ತುತ ಜಿಲ್ಲೆಯಲ್ಲಿ 19,236 ರೈತರು ತೋಟಗಾರಿಕೆ ಬೆಳೆಗಳ ವಿಮೆಯನ್ನು ಮಾಡಿಸಿದ್ದಾರೆ. ಕಳೆದ ಬಾರಿ ಹೋಲಿಸಿದ್ದರೆ ಈ ಬಾರಿ 7690 ಹೆಚ್ಚು ರೈತರುಗಳು ವಿಮೆಗೊಳಪಟ್ಟಿದ್ದಾರೆ. ಇದನ್ನು ಮತ್ತಷ್ಟು ಹೆಚ್ಚಿಸಲು ರೃತರಲ್ಲಿ ಜಾಗೃತಿ ಮೂಡಿಬೇಕು ಎಂದರು.ಕಾಪು ತಾಲೂಕಿನ 200 ಶಾಲೆಗಳ 660 ಕೊಠಡಿಗಳಲ್ಲಿ 91 ಕೊಠಡಿಗಳು ದುರಸ್ತಿಯಾಗಬೇಕಿದೆ. ಆದಷ್ಟು ಶೀಘ್ರ ಇದನ್ನು ನಡೆಸಬೇಕು. ಅಪಾಯಕಾರಿ ಕೊಠಡಿಗಳಲ್ಲಿ ಪಾಠ ಮಾಡಬಾರದು, ಶಿಥಿಲಾವಸ್ಥೆಯ ಶಾಲಾ ಕಟ್ಟಡ, ಕಾಂಪೌಂಡ್ಗಳ ಹತ್ತಿರ ವಿದ್ಯಾರ್ಥಿಗಳು ಹೋಗದಂತೆ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಅವಘಡ ಸಂಭವಿಸಿದರೇ ಶಾಲೆಗೂ ಹಾಗೂ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ಹೀಗಾಗದಂತೆ ಎಚ್ಚರ ವಹಿಸಬೇಕು ಎಂದರು.
ಮಳೆಗಾಳಿಯಿಂದಾಗಿ 163 ವಿದ್ಯುತ್ ಕಂಬಗಳು ಉರುಳಿ, 31.71 ಲಕ್ಷ ರು. ನಷ್ಟವಾಗಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾದರೇ ಕೂಡಲೇ ಸ್ಪಂದಿಸಬೇಕು, ಲೈನ್ಮ್ಯಾನ್ ಗಳ ಕೊರತೆಗಳು ಇದ್ದಲ್ಲಿ ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಬೇಕು, ಸಾರ್ವಜನಿಕರಿಗೆ ಸಹಾಯವಾಣಿಗಳು 24*7 ಚಾಲನೆ ಇರಬೇಕು ಎಂದು ಸೂಚಿಸಿದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮೆಸ್ಕಾಂನಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ತಾಲೂಕಿನಲ್ಲಿ ಮಳೆಯಿಂದಾಗಿ ಕೆಲವು ರಸ್ತೆಗಳು ತುಂಬಾ ಹಾಳಾಗಿದ್ದು, ಶಾಲಾ ಬಸ್ಗಳ, ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದರು.ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.ಪ್ರಕೃತಿ ವಿಕೋಪ ಸಂದರ್ಭ ತಕ್ಷಣ ಸ್ಪಂದಿಸಿ: ಖಾದರ್
Respond immediately during natural disasters: Khader
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.