ಸಾರಾಂಶ
ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳು ಬಹಳ ಅಚ್ಚುಕಟ್ಟಾಗಿ ಕಲಿತು, ಉತ್ತಮವಾಗಿ ಓದುವ, ಬರೆಯವ ಹಾಗೂ ಅರ್ಥಮಾಡಿಕೊಳ್ಳುವ ಅಭಿರುಚಿ ಬೆಳೆಸಿಕೊಳ್ಳಬೇಕು. ಕನ್ನಡ ಅರ್ಥಪೂರ್ಣ ಪದ ರಚನೆ, ವಾಕ್ಯ ರಚನೆ ಉತ್ತಮ ಮಾತುಗಾರಿಕೆ ಕಲಿತುಕೊಳ್ಳಬೇಕು. ಕನ್ನಡವನ್ನು ಕಲಿತು ಚುಟುಕು, ಪ್ರಾಸ ಪದಗಳು ಕಥೆಗಳನ್ನು ಬರೆಯುವ ಹವ್ಯಾಸವನ್ನು ವಿದ್ಯಾರ್ಥಿ ದಿಸೆಯಿಂದಲೇ ಬೆಳೆಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಸರಳ ಸುಂದರ, ಸೃಜನಶೀಲ ಆಸಕ್ತಿದಾಯಕ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ ಎಂದು ನಿವೃತ್ತ ಬಿಇಒ ಬಿ.ಜಗದೀಶ್ ತಿಳಿಸಿದರು.ತಾಲೂಕಿನ ಚಿಣ್ಯ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಿರಿಗನ್ನಡ ಸಾಹಿತ್ಯ ಪ್ರಚಾರ ವೇದಿಕೆ ವತಿಯಿಂದ ಆಯೋಜಿಸಿದ್ದ ಕನ್ನಡ ನುಡಿ ಸಂಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳು ಬಹಳ ಅಚ್ಚುಕಟ್ಟಾಗಿ ಕಲಿತು, ಉತ್ತಮವಾಗಿ ಓದುವ, ಬರೆಯವ ಹಾಗೂ ಅರ್ಥಮಾಡಿಕೊಳ್ಳುವ ಅಭಿರುಚಿ ಬೆಳೆಸಿಕೊಳ್ಳಬೇಕು. ಕನ್ನಡ ಅರ್ಥಪೂರ್ಣ ಪದ ರಚನೆ, ವಾಕ್ಯ ರಚನೆ ಉತ್ತಮ ಮಾತುಗಾರಿಕೆ ಕಲಿತುಕೊಳ್ಳಬೇಕು. ಕನ್ನಡವನ್ನು ಕಲಿತು ಚುಟುಕು, ಪ್ರಾಸ ಪದಗಳು ಕಥೆಗಳನ್ನು ಬರೆಯುವ ಹವ್ಯಾಸವನ್ನು ವಿದ್ಯಾರ್ಥಿ ದಿಸೆಯಿಂದಲೇ ಬೆಳೆಸಿಕೊಳ್ಳಬೇಕು ಎಂದರು.ತಾಲೂಕು ಕಸಾಪ ಅಧ್ಯಕ್ಷ ಖರಡ್ಯ ಬಸವೇಗೌಡ ಮಾತನಾಡಿ, 8 ಜ್ಞಾನಪೀಠ ಪ್ರಶಸ್ತಿ ಜೊತೆಗೆ ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಪ್ರಾಚೀನ ಭಾಷೆ ಕನ್ನಡ. ಉಷ್ಣ ಅಳಿದ ಹಾಲಿನಂತೆ ಸರಳ ಭಾಷೆಯಾಗಿರುವ ಕನ್ನಡವನ್ನು ಅತ್ಯಂತ ಆಸಕ್ತಿಯಿಂದ ಕಲಿಯಬೇಕು. ದಿನ ನಿತ್ಯ ಭಾಷೆ ಕಲಿಯುವ ಪುಸ್ತಕಗಳು, ಕಥೆಗಳು ಹಾಗೂ ದಿನಪತ್ರಿಕೆಗಳನ್ನು ಓದುವುದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಿರಿಗನ್ನಡ ಪ್ರಚಾರ ವೇದಿಕೆಯ ಓಂಕಾರ ಪ್ರಿಯಾ ಅವರು ಅಕ್ಷರಗಳಿಂದ ಪದ ರಚನೆ, ಪದ ಆಟ, ಪ್ರಾಸ ಪದ ರಚನೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಉಪಪ್ರಾಂಶುಪಾಲ ಎಚ್.ಡಿ.ಉಮಾಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಬಸವರಾಜು, ಶ್ರೀಧರ್, ಪ್ರಕಾಶ್, ಶೃತಿ. ತೇಜಸ್ವಿನಿ, ಪವಿತ್ರ, ನೂರ್, ರಿಹಾನ, ರುದ್ರೇಶ್ ಸೇರಿದಂತೆ ಹಲವರು ಇದ್ದರು.