ಸಾರಾಂಶ
ದಾವಣಗೆರೆ: 7ನೇ ವೇತನ ಆಯೋಗದ ಅವಧಿಯಲ್ಲೇ ನಿವೃತ್ತರಾದ ತಮಗೆ ಡಿಸಿಆರ್ಜಿ, ಕಮ್ಯುಟೇಷನ್, ಗಳಿಕೆ ರಜೆ, ನಗದೀಕರಣ ಮೊತ್ತವನ್ನು 7ನೇ ವೇತನದ ಆಯೋಗದ ಲೆಕ್ಕಾಚಾರದಲ್ಲೇ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಸುವರ್ಣಸೌಧದ ಬಳಿ ಡಿ.16ರಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ನಿವೃತ್ತ ನೌಕರರು ಪ್ರತಿಭಟನೆ ನಡೆಸುವುದಾಗಿ ಸಮಿತಿ ರಾಜ್ಯ ಸಂಚಾಲಕ, ನಿವೃತ್ತ ಪ್ರಾಚಾರ್ಯ ಡಿ.ಆನಂದಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1.7.2022ರಿಂದ 31.7.2024ರ ಅವಧಿಯಲ್ಲಿ ನಿವೃತ್ತರಾದ 26423 ಅಧಿಕಾರಿ, ನೌಕರ ವರ್ಗದವರಿಗೆ 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತ ಆರ್ಥಿಕ ಸೌಲಭ್ಯ ನೀಡದೇ, 6ನೇ ವೇತನ ಆಯೋಗದ ಲೆಕ್ಕಾಚಾರದಲ್ಲೇ ನೀಡಲಾಗಿದೆ ಎಂದು ದೂರಿದರು.ರಾಜ್ಯದ 26423 ಜನ ಎ ದರ್ಜೆಯಿಂದ ಡಿ ದರ್ಜೆವರೆಗಿನ ನಿವೃತ್ತ ನೌಕರರಿಗೆ ₹6 ಲಕ್ಷದಿಂದ ₹22 ಲಕ್ಷವರೆಗೆ ಒಟ್ಟು ಸುಮಾರು ₹2,500 ಕೋಟಿ ನಷ್ಟವಾಗಿದೆ. ಈ ಹಿನ್ನೆಲೆ ಕಳೆದ ಆಗಸ್ಟ್ 11ರಿಂದ ಈವರೆಗೆ 4 ತಿಂಗಳಿನಿಂದ ಸಮಾವೇಶಗೊಂಡು, ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರು, ವಿಪಕ್ಷ ನಾಯಕರು, ಉಭಯ ಸಭಾಪತಿಗಳು, ಉಪ ಸಭಾಪತಿಗಳು, 224 ಶಾಸಕರು, 75 ವಿಪ ಸದಸ್ಯರಿಗೆ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಧ ರಾಜ್ಯಾಧ್ಯಕ್ಷರಿಗೆ ವಿವಿಧ ಮೂಲಗಳು, ಖುದ್ದಾಗಿ ಮನವಿ ಸಲ್ಲಿಸಿದ್ದೇವೆ. ಆದರೂ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ ಎಂದರು. ಸಮಿತಿ ಸಂಚಾಲಕ, ನಿವೃತ್ತ ಪ್ರಾಚಾರ್ಯ ಮಂಜುನಾಥ ರೆಡ್ಡಿ ಮಾತನಾಡಿ, ಬೇಡಿಕೆಗಳನ್ನು ಈಡೇರಿಸುವಂತೆ ಡಿ.16ರಂದು ಬೆಳಗಾವಿ ಸುವರ್ಣ ಸೌಧದ ಬಳಿ 26,423 ನಿವೃತ್ತರೂ ಪ್ರತಿಭಟಿಸುತ್ತಿದ್ದೇವೆ ಎಂದರು.
ಸಮಿತಿಯ ಪದಾಧಿಕಾರಿಗಳಾದ ನಿವೃತ್ತ ಪಿಎಸ್ಐ ಏಕಾಂತಪ್ಪ, ನಿವೃತ್ತ ಎಎಸ್ಐಗಳಾದ ಅಬ್ದುಲ್ ಸತ್ತಾರ್, ಜಿ.ಎಸ್.ನಾಗರಾಜ ಎಸ್.ಎಂ.ಗಂಗಪ್ಪಳವರ, ಹಾಲಪ್ಪ ಇದ್ದರು.